ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು
ಜಂತಕಲ್ ಮೈನಿಂಗ್ ಪ್ರಕರಣ

ಬೆಂಗಳೂರು, ಜು.12: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾಗೆ ಹೈಕೋರ್ಟ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ಜಾಮೀನು ಕೋರಿ ಗಗನ್ ಬಡೇರಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಆರೋಪಿ ಗಗನ್ ಬಡೇರಿಯಾ ಅವರು ತನಿಖೆಗೆ ಸಹಕರಿಸಬೇಕು. ಅಂತಿಮ ವರದಿ ಸಲ್ಲಿಕೆಯಾಗುವವರೆಗೂ ವಿಚಾರಣೆಗೆ ಕರೆದಾಗ ಪ್ರತಿ ತಿಂಗಳ ಮೊದಲನೆ ವಾರದಲ್ಲಿ ಒಂದು ಹಾಗೂ ಮೂರನೆ ವಾರದಲ್ಲಿ ಒಂದು ದಿನ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಮೈನಿಂಗ್ ಪ್ರಕರಣದಲ್ಲಿ ಮಗನ ಮೂಲಕ 20 ಲಕ್ಷ ರೂ. ಕಿಕ್ಬ್ಯಾಕ್ ಪಡೆದು ಮೈನಿಂಗ್ಗೆ ಅನುಮತಿ ನೀಡಿದ ಆರೋಪ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಮೇಲಿದೆ. ಗಂಗಾರಾಮ್ ಗಣಿ ಇಲಾಖೆ ನಿರ್ದೇಶಕರಾಗಿದ್ದಾಗ ಅನುಮತಿ ನೀಡಲಾಗಿತ್ತು. ಈ ಸಂಬಂಧ ಎಸ್ಐಟಿ ಅವರನ್ನು ಬಂಧಿಸಿದೆ. ಈ ಪ್ರಕರಣ ಸಂಬಂಧ ಪುತ್ರ ಗಗನ್ ಬಡೇರಿಯಾ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ.





