ವಿದೇಶದಲ್ಲಿ ಹಣವಿಲ್ಲದೆ ಸಾಲ ಮಾಡಿ ಬೆಳ್ಳಿಯೊಂದಿಗೆ ಮರಳಿದ ಪ್ಯಾರಾ ಅಥ್ಲೀಟ್!
ಪ್ಯಾರಾಲಿಂಪಿಕ್ಸ್ ಸಮಿತಿಯ ಎಡವಟ್ಟು

ಹೊಸದಿಲ್ಲಿ, ಜು.12: ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ) ಸ್ವಿಮ್ಮಿಂಗ್ ಚಾಂಪಿಯನ್ಶಿಪ್ಗೆ ಮಂಜೂರಾದ ಹಣವನ್ನು ಬಿಡುಗಡೆ ಮಾಡದೇ ಎಡವಟ್ಟು ಮಾಡಿರುವ ಹಿನ್ನೆಲೆಯಲ್ಲಿ ಪ್ಯಾರಾ ಅಥ್ಲೀಟ್ ಕಾಂಚನ್ಮಾಲಾ ಸಹಿತ 5 ಪ್ಯಾರಾ-ಸ್ವಿಮ್ಮರ್ಗಳು ಜರ್ಮನಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಗ್ಪುರ ಮೂಲದ ಈಜುಗಾರ್ತಿ ಕಾಂಚನ್ಮಾಲಾ ಪಾಂಡೆ ಇತರ ಐವರು ಪ್ಯಾರಾಥ್ಲೀಟ್ಗಳೊಂದಿಗೆ ಟೂರ್ನಿಯಲ್ಲಿ ಭಾಗವಹಿಸಲು ಬರ್ಲಿನ್ಗೆ ತೆರಳಿದ್ದರು. ಸ್ನೇಹಿತರಿಂದ ಸಾಲ ಪಡೆದು ಟೂರ್ನಿಯಲ್ಲಿ ಭಾಗವಹಿಸಿದ್ದ ಅವರು ರೈಲು ಟಿಕೆಟ್ ಖರೀದಿಸಲಾಗದೇ ದಂಡ ತೆರಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದಾರೆ.
ಸಂಪೂರ್ಣ ಅಂಧರಾಗಿರುವ ಕಾಂಚನ್ಮಾಲಾ ಎಸ್-11 ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ತನಗಾಗಿರುವ ಭಯಾನಕ ಅನುಭವವನ್ನು ಬಿಚ್ಚಿಟ್ಟಿರುವ ಅವರು ಟೂರ್ನಮೆಂಟ್ನಲ್ಲಿ ಭಾಗವಹಿಸಲು ಹಣಹೊಂದಿಸಲು ಕಷ್ಟಪಟ್ಟ ಕ್ಷಣವನ್ನು ಡೈಲಿ ಮೇಲ್ನೊಂದಿಗೆ ಹಂಚಿಕೊಂಡಿದ್ದಾರೆ.
‘‘ನಾನು ಇಂತಹ ಸಮಸ್ಯೆ ಎದುರಿಸುತ್ತೇನೆಂದು ಯೋಚಿಸಿಯೇ ಇರಲಿಲ್ಲ. ನಾನು ಸ್ನೇಹಿತರಿಂದ 5 ಲಕ್ಷ ರೂ. ಸಾಲ ಮಾಡಿ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದೇನೆ. ಪ್ಯಾರಾಲಿಂಪಿಕ್ಸ್ ಸಮಿತಿಯು ನಮ್ಮ್ಂದಿಗೆ ಕನ್ವಲ್ಜೀತ್ ಸಿಂಗ್ ಎಂಬವರನ್ನು ಕಳುಹಿಸಿಕೊಟ್ಟಿತ್ತು. ಅವರು(ಸಿಂಗ್) ನಮಗೆ ಏನೂ ಸಹಾಯ ಮಾಡಲಿಲ್ಲ. ನಾನು ಸ್ಪರ್ಧೆ ನಡೆಯುವ ಸ್ಥಳದಿಂದ ತಂಡ ವಾಸ್ತವ್ಯವಿರುವ ಹೊಟೇಲ್ಗೆ ರೈಲಿನಲ್ಲಿ ಪ್ರಯಾಣಿಸಲು ನನ್ನ ಬಳಿ ಹಣವಿರಲಿಲ್ಲ. ಆಗ ನಾನು ಟಿಕೆಟ್ ಇಲ್ಲದೆ ಪ್ರಯಾಣಿಸಿ ಟಿಕೆಟ್ ತಪಾಸಣೆ ಅಧಿಕಾರಿಯ ಕೈಗೆ ಸಿಕ್ಕಿಬಿದ್ದು 120 ಪೌಂಡ್(10,000 ರೂ.) ದಂಡ ತೆರಬೇಕಾಯಿತು. ಸ್ಪರ್ಧೆಯ ವೇಳೆ ನಾಪತ್ತೆಯಾಗಿದ್ದ ಸಿಂಗ್ ನಮ್ಮ ಬಳಿಯೇ ಹಣ ಕೇಳುತ್ತಿದ್ದರು’’ ಎಂದು ಕಾಂಚನ್ಮಾಲಾ ಹೇಳಿದರು.
ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ)ಮಾಡಿರುವ ಎಡವಟ್ಟಿನಿಂದ ಬರ್ಲಿನ್ನಲ್ಲಿ ಕಾಂಚನ್ಮಾಲಾ ಸಹಿತ ಇತರ ಐವರು ಸ್ಪರ್ಧಿಗಳು ಹಣಕ್ಕಾಗಿ ಪರದಾಡುವಂತಾಗಿತ್ತು. ಜು.3 ರಿಂದ 9ರ ತನಕ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಡೆದಿತ್ತು.
ಎಲ್ಲ ಸಂಕಷ್ಟಗಳ ನಡುವೆಯೂ ಕಾಂಚನ್ಮಾಲಾ ಹಾಗೂ ಸುಯಾಶ್ ಜಾಧವ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಈ ಸಾಧನೆಯ ಮೂಲಕ ಕಾಂಚನ್ಮಾಲಾ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡ ಭಾರತದ ಏಕೈಕ ಸ್ವಿಮ್ಮರ್ ಎನಿಸಿಕೊಂಡಿದ್ದಾರೆ. 26ರ ಹರೆಯದ ಕಾಂಚನ್ಮಾಲಾ 200 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಬೆಳ್ಳಿ ಪದಕ ಜಯಿಸಿದರು. 100 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್ಸ್ಟ್ರೋಕ್ ಹಾಗೂ 100 ಮೀ. ಬ್ರೀಸ್ಟ್ಸ್ಟ್ರೋಕ್ನಲ್ಲಿ ಅರ್ಹತಾ ಮಾರ್ಕ್ನ್ನು ತಲುಪಿದ್ದರು.
‘‘ನಾನು ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದೇನೆ. ಆದರೆ, ಪಿಸಿಐಗೆ ಇದರ ಮಹತ್ವ ಯಾಕೆ ಅರ್ಥವಾಗುತ್ತಿಲ್ಲವೆಂದು ಗೊತ್ತಿಲ್ಲ. ನಾನು ಈಗಾಗಲೇ ಹೊಟೇಲ್ ಹಾಗೂ ಆಹಾರಕ್ಕಾಗಿ 1,10,000 ರೂ. ಖರ್ಚು ಮಾಡಿದ್ದೇನೆ. ನನಗೆ ಜರ್ಮನಿಯಲ್ಲಿ ಹಣಕಾಸು ಸಮಸ್ಯೆ ಎದುರಾದಾಗ ಮನಸ್ಸಿಗೆ ತುಂಬಾ ನೋವಾಯಿತು. ನಾನು 100 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಪಿಸಿಐ 50 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಗೆ ನನ್ನ ಹೆಸರನ್ನು ನೋಂದಾಯಿಸಿ ಮತ್ತೊಂದು ದೊಡ್ಡ ಎಡವಟ್ಟು ಮಾಡಿತ್ತು. ಒಟ್ಟಾರೆ ಯುರೋಪ್ ಪ್ರವಾಸ ಭಯಾನಕವಾಗಿತ್ತು’’ ಎಂದು ‘ಮೈಲ್ ಟುಡೆ’ಗೆ ಕಾಂಚನ್ಮಾಲಾ ತಿಳಿಸಿದ್ದಾರೆ.
ನ್ಯಾಯಾಲಯದಿಂದ ನೇಮಿಲ್ಪಟ್ಟ ಸಮಿತಿಯ ಅಧ್ಯಕ್ಷರು ಲಭ್ಯವಿರದ ಕಾರಣ ಸರಕಾರದಿಂದ ಬಿಡುಗಡೆಯಾಗಿದ್ದ ಹಣವನ್ನು ಅಥ್ಲೀಟ್ಗಳಿಗೆ ವಿತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿರುವ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ.
‘‘ಘಟನೆಯ ಬಗ್ಗೆ ರಾಷ್ಟ್ರೀಯ ಒಲಿಂಪಿಕ್ಸ್ ಮಂಡಳಿಯನ್ನು ದೂಷಿಸುವುದು ಸರಿಯಲ್ಲ. ಅಥ್ಲೀಟ್ಗಳು ಜರ್ಮನಿಗೆ ತೆರಳಲು ಐದು ದಿನವಿರುವಾಗ ಸರಕಾರ ಬಿಡುಗಡೆ ಮಾಡಿದ್ದ ಹಣವನ್ನು ನಾವು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹಣ ಸ್ವೀಕಾರಕ್ಕೆ ದಿಲ್ಲಿ ಹೈಕೋರ್ಟ್ನಿಂದ ನೇಮಿಸಲ್ಪಟ್ಟ ಸಮಿತಿಯ ಮುಖ್ಯಸ್ಥರಾದ ಜಸ್ಟಿಸ್(ನಿವೃತ್ತ)ಕೈಲಾಶ್ ಗಂಭೀರ್ ಅವರ ಅನುಮತಿಯ ಅಗತ್ಯವಿತ್ತು. ಆದರೆ, ಅವರು ನಮಗೆ ಲಭ್ಯವಾಗಿರಲಿಲ್ಲ. ಅಥ್ಲೀಟ್ಗಳ ಬಳಿ ತಮ್ಮ ಸ್ವಂತ ಖರ್ಚಿನಲ್ಲೇ ಟೂರ್ನಿಯಲ್ಲಿ ಭಾಗವಹಿಸುವಂತೆ ಹೇಳಿದ್ದೆವು. ತಂಡದ ನಾಯಕ ಕಮಲ್ಜಿತ್ ಸಿಂಗ್ರಿಂದ ವರದಿ ಪಡೆದು ಘಟನೆಯ ವಿವರ ಪಡೆಯುತ್ತೇವೆ’’ ಎಂದು ಪಿಸಿಐ ಉಪಾಧ್ಯಕ್ಷ ಗುರುಶರಣ್ ಸಿಂಗ್ ಹೇಳಿದ್ದಾರೆ.
ಪ್ಯಾರಾಥ್ಲೀಟ್ಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದಕ್ಕೆ ಕ್ರೀಡಾಪಟುಗಳಾದ ಅಭಿನವ್ ಬಿಂದ್ರಾ,ಮಹೇಶ್ ಭೂಪತಿ ಹಾಗೂ ಕೇಂದ್ರ ಕ್ರೀಡಾ ಸಚಿವರಾದ ವಿಜಯ್ ಗೋಯೆಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







