ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಕಾಲಮಿತಿಯಲ್ಲಿ ಬಳಸಿ: ಈ.ವೆಂಕಟಯ್ಯ

ತುಮಕೂರು, ಜು.13: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಹೆಚ್ಚಿನ ಅನುಸೂಚಿತ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒದಗಿಸುವ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕೆಂದು ಅನುಸೂಚಿತ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಈ. ವೆಂಕಟಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತf ಸಭಾಂಗಣದಲ್ಲಿಂದು ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ರೂಪಿಸಿರುವ ಶಾಸನದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಎಸ್ಸಿಪಿ ಹಾಗೂ ಟಿಎಸ್ಪಿ ಕಾಯ್ದೆ 2013ನ್ನು ರೂಪಿಸಿದ್ದರೂ,ಪ್ರಸ್ತುತ ಸಾಲಿನಲ್ಲಿ ಒದಗಿಸಿದ ಅನುದಾನವು ಬಳಕೆಯಾಗದಿದ್ದರೆ, ಮುಂದಿನ ಸಾಲಿನಲ್ಲಿ ಸಿಗುವ ಅನುದಾನಕ್ಕೆ ಸೇರ್ಪಡೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಉದ್ದೇಶ
ಪೂರ್ವಕವಾಗಿ ಈ ಯೋಜನೆಯಡಿ ಒದಗಿಸಿರುವ ಅನುದಾನವನ್ನು ಬಳಕೆ ಮಾಡದ ಸಂಬಂಧಪಟ್ಟ ಅಧಿಕಾರಿಯನ್ನು ಶಿಕ್ಷಿಸುವ ಬಗ್ಗೆ ಕಾಯ್ದೆಯಲ್ಲಿ ವಿವರಿಸಲಾಗಿದೆ ಎಂದರು.
ಕಳೆದ 3 ವರ್ಷಗಳಿಂದ ಈ ಯೋಜನೆಯಲ್ಲಿ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಒದಗಿಸಲಾಗಿತ್ತು. ಇಷ್ಟೋಂದು ಹಣವನ್ನು ಒದಗಿಸಿದ್ದರೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸದಿದ್ದರೆ ಯೋಜನೆ ಸಫಲಗೊಳ್ಳುವುದಿಲ್ಲ. ಯೋಜನೆಯನ್ನು ಸಫಲಗೊಳಿಸಲು ಅನುಷ್ಟಾನಾಧಿಕಾರಿಗಳಿಗೆ ತರಬೇತಿ ಅತಿ ಮುಖ್ಯ. ಹೀಗಾಗಿ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈ ವೆಂಕಟಯ್ಯ ತಿಳಿಸಿದರು.
ಸರಕಾರದ ಯೋಜನೆಗಳ ಪೈಕಿ ಬ್ಯಾಂಕಿನ ಸಾಲ ಪಡೆಯಬೇಕಾದ ಯೋಜನೆಗಳಲ್ಲಿ 2 ಕೋಟಿ ರೂ. ವರೆಗೂ ಸರಕಾರದ ಭದ್ರತೆ ಅಗತ್ಯವಿಲ್ಲೆಂದು ಕೇಂದ್ರ ಸರಕಾರದ ಆದೇಶದಲ್ಲಿ ತಿಳಿಸಿದೆ.ಈಗಿರುವಾಗ ಸರಕಾರದ ಭದ್ರತೆಯ ನೆಪವೊಡ್ಡಿ ಸಾಲ ನೀಡದ ಬ್ಯಾಂಕ್ಗಳ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಇಲಾಖೆ ಜಂಟಿ ನಿರ್ದೇಶಕ ದೇವರಾಜ್ ಅವರಿಗೆ ಸೂಚಿಸಿದರು. ಗಂಗಾ ಕಲ್ಯಾಣ, ಕೃಷಿ ಯಂತ್ರೋಪಕರಣ ಉಪಕರಣಗಳ ವಿತರಣೆಯನ್ನು ಮಾಡುವಾಗ ಜಿಲ್ಲೆಯಲ್ಲಿರುವ 4.40ಲಕ್ಷ ರೈತರ ಪೈಕಿ 45 ಸಾವಿರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ರೈತರಿದ್ದಾರೆ.ಈ ಸಮುದಾಯದ ರೈತರು ಹೆಚ್ಚಿಗೆ ಇರುವ ಪ್ರದೇಶದಲ್ಲಿ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಟಾನಗೊಳಿಸುವಂತೆ ತಿಳಿಸಿದರು.
ಯೋಜನೆ ಅನುಷ್ಟಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ: ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಳ ಅನುಷ್ಟಾನದಲ್ಲಿ 2017-18ನೇ ಸಾಲಿನ ಮೊದಲೆರಡು ತಿಂಗಳು ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ಇದೀಗ ಮೂರನೇ ಸ್ಥಾನಕ್ಕೆ ಇಳಿದಿದೆ.ಆದುದರಿಂದ ಮೊದಲನೇ ಸ್ಥಾನವನ್ನು ಕಾಯ್ದುಕೊಳ್ಳಲು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಸೂಚಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲೂ ಇದುವರೆಗೂ ಯಾವುದೇ ಸವಲತ್ತು ದೊರೆಯದ ಅತ್ಯಂತ ಕಡು ಬಡವರು ಇದ್ದಾರೆ.ಹಕ್ಕಿಪಿಕ್ಕಿ,ಹಂದಿಜೋಗಿ,ಬುಡುಗ ಜಂಗಮ, ಶಿಳ್ಳೆಕ್ಯಾತ ಮತ್ತಿತರ ಅಲೆಮಾರಿ ಸಮುದಾಯಗಳಿಗೆ ಯೋಜನೆಯ ಸೌಲಭ್ಯಗಳು ದೊರೆಯುವಂತಾಗಬೇಕು.ಇಂತಹ ಸಮುದಾಯಗಳನ್ನು ಗುರ್ತಿಸಿ ಸೌಲಭ್ಯಗಳನ್ನು ನೀಡುವುದು ನಿಜಕ್ಕೂ ಸವಾಲಿನ ಕೆಲಸ.ಈ ಸವಾಲನ್ನು ಜಿಲ್ಲಾಡಳಿತ ಸಮರ್ಪಕವಾಗಿ ಸ್ವೀಕರಿಸಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿಗಳಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ತರಬೇತಿ ಅಗತ್ಯವಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಡಾ:ವಿ.ಸೌಚಿದರರಾಜನ್, ಜಂಟಿ ನಿರ್ದೇಶಕ ಡಾ:ದೇವರಾಜ್,ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.







