ಕೌಟುಂಬಿಕ ದೌರ್ಜನ್ಯ ಕಾಯ್ದೆ : 757 ಪ್ರಕರಣ ದಾಖಲು, 595 ಪ್ರಕರಣ ಇತ್ಯರ್ಥ: ಮಮ್ತಾಝ್

ಮಡಿಕೇರಿ, ಜು.13: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಇದುವರೆಗೆ ಸುಮಾರು 757 ಪ್ರಕರಣಗಳು ದಾಖಲಾಗಿದ್ದು, ಸುಮಾರು 595 ಪ್ರಕರಣಗಳು ಸಮಾಲೋಚನೆಯಿಂದ ಇತ್ಯರ್ಥಗೊಂಡಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಝ್ ಮಾಹಿತಿ ನೀಡಿದ್ದಾರೆ. ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಬಾಕಿ ಇರುವ ಪ್ರಕರಣಗಳು 101, ನ್ಯಾಯಾಲಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳು 28, ಕಾನೂನು ಸಲಹೆಯಿಂದ ಇತ್ಯರ್ಥಗೊಂಡ ಪ್ರಕರಣಗಳು 39, ಒಟು 156 ಪ್ರಕರಣಗಳು ಬಾಕಿ ಇವೆ ಎಂದು ಅವರು ಹೇಳಿದ್ದಾರೆ.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಸಂಬಂಧಿಸಿದಂತೆ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಕಾನೂನು ಅರಿವು, ವರದಕ್ಷಿಣೆ ಕಿರುಕುಳ ಬಗ್ಗೆ ಅರಿವು, ಮಹಿಳೆ ಮತ್ತು ಮಕ್ಕಳಿಗೆ ಇಲಾಖೆಯಿಂದ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಬಾಲ್ಯ ವಿವಾಹ ನಿಷೇಧ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಸಾಂತ್ವನ ಕೌಟುಂಬಿಕ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ ನೀಡುವುದು, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಸಾಧಿಸಲು ನೆರವು ನೀಡುವುದು. ತಾತ್ಕಾಲಿಕ ವಸತಿ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಹಾಗೆಯೇ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒಂದೇ ಸೂರಿನಡಿ ಒದಗಿಸುವುದು. ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು ಮತ್ತು ಸಮಾಲೋಚನೆ ವ್ಯವಸ್ಥೆಗಳನ್ನು ಒದಗಿಸುವ ಸಲುವಾಗಿ ಮಹಿಳಾ ವಿಶೇಷ ಘಟಕವನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿದೆ ಎಂದು ಮಮ್ತಾಝ್ ಮಾಹಿತಿ ನೀಡಿದರು.
ಕೌಟುಂಬಿಕ ದೌರ್ಜನ್ಯ ಕಾಯ್ದೆಯು ಮಹಿಳೆಯರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು, ಕುಟುಂಬದೊಳಗೆ ನಡೆಯುವ ಯಾವುದೇ ದೌರ್ಜನ್ಯಗಳಿಂದ ರಕ್ಷಿಸಲು ಹಾಗೂ ದೈಹಿಕ, ಲೈಂಗಿಕ, ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ದೌರ್ಜನ್ಯಗಳಿಂದ ರಕ್ಷಿಸುವುದಾಗಿದೆ. ಈ ಯೋಜನೆಯನ್ನು ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಾಗ ನ್ಯಾಯಾಲಯದ ಮುಖಾಂತರ ಮಹಿಳೆಯರಿಗೆ ಆರ್ಥಿಕ ಪರಿಹಾರ, ರಕ್ಷಣಾ ಆದೇಶ, ವಾಸದ ಆದೇಶ, ಮಕ್ಕಳ ವಶ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ಹಾಗೂ ಕಾನೂನು ನೆರವನ್ನು ಒದಗಿಸಲು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಸಂರಕ್ಷಣಾಧಿಕಾರಿಗಳಿಗೆ ಮತ್ತು ನ್ಯಾಯಾಧೀಶರಿಗೆ ತರಬೇತಿ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅನುಷ್ಠಾನಾಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಕಾರ್ಯ ನಿರ್ವಹಿಸುತ್ತಿರುವ ಕಾನೂನು ಸಲಹಾ ಕೇಂದ್ರಗಳಲ್ಲಿ ಪ್ರತಿ ದಿನ 10 ರಿಂದ 6 ಗಂಟೆಯವರೆಗೆ ಉಚಿತ ಕಾನೂನು ನೆರವನ್ನು ಮಹಿಳೆಯರು ಪಡೆಯಬಹುದಾಗಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಕಾನೂನು ಸೇವಾ ಪ್ರಾಧಿಕಾರದ ವಕೀಲರು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ನೀಡುತ್ತಿದ್ದು, ಇದರ ಪ್ರಯೋಜನವನ್ನು ಮಹಿಳೆಯರು ಪಡೆಯುತ್ತಿದ್ದಾರೆ ಎಂದು ಮಮ್ತಾಝ್ ತಿಳಿಸಿದರು.
ಕುಟುಂಬದೊಳಗೆ ಸಂಭವಿಸುವ ಯಾವುದೇ ಬಗೆಯ ಹಿಂಸೆಗೆ ಒಳಗಾದ ಮಹಿಳೆಯರಿಗೆ, ಸಂವಿಧಾನದ ಮೇರೆಗೆ ಖಾತರಿ ನೀಡಲಾದ ಮಹಿಳಾ ಹಕ್ಕುಗಳಿಗೆ ಹೆಚ್ಚು ಪರಿಣಾಮಕಾರಿ ಸಂರಕ್ಷಣೆ ನೀಡುವುದಕ್ಕಾಗಿ ಮತ್ತು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಭಾರತದಲ್ಲಿ 2006ರ ಅಕ್ಟೋಬರ್, 26 ರಂದು ಜಾರಿಗೆ ಬಂದಿದ್ದು, ರಾಜ್ಯದಲ್ಲಿ ಜೂನ್ 2007 ರಿಂದ ಅನುಷ್ಠಾನಗೊಳಿಸಲಾಗಿದೆ. ಕೌಟುಂಬಿಕ ಸಂಬಂಧದಿಂದ ದೈಹಿಕ, ಲೈಂಗಿಕ, ಆರ್ಥಿಕ ಭಾವನಾತ್ಮಕ ಹಿಂಸೆಗಳನ್ನು ಅನುಭವಿಸುತ್ತಿರುವ ಮಹಿಳೆಯನ್ನು ಈ ಕಾಯ್ದೆಯಡಿಯಲ್ಲಿ ಸಂರಕ್ಷಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಕೌಟುಂಬಿಕ ಘಟನೆ ವರದಿಯನ್ನು ತಯಾರಿಸಿ, ಒಂದು ಪ್ರತಿಯನ್ನು ಬಾಧಿತ ಮಹಿಳೆಗೆ ನೀಡುವುದು, ಡಿಐಆರ್ನ್ನು ಮ್ಯಾಜಿಸ್ಟ್ರೇಟರಿಗೆ ಸಲ್ಲಿಸುವುದು. ಡಿಐಆರ್ನ ಪ್ರತಿಗಳನ್ನು ಹಿಂಸೆ ನಡೆದ ಪ್ರದೇಶದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸೇವೆ ಒದಗಿಸುವ ಸಂಸ್ಥೆಗೆ ನೀಡುವುದು. ಪರಿಹಾರ, ಮಧ್ಯಂತರ ಅಥವಾ ಅಂತಿಮ ಆದೇಶ, ಅಫಿಡೆವಿಟ್ಟ ಮುಂತಾದವುಗಳಿಗಾಗಿ ಅರ್ಜಿ ಸಲ್ಲಿಸಲು ಬಾಧಿತ ಮಹಿಳೆಗೆ ಸಹಾಯ ಮಾಡುವುದು. ಸೇವೆ ಒದಗಿಸುವ ಸಂಸ್ಥೆಗಳ ಮೂಲಕ ಮಹಿಳೆಗೆ ಆಶ್ರಯ ಒದಗಿಸುವುದು. ಸಂರಕ್ಷಣಾಧಿಕಾರಿಗಳ ಕರ್ತವ್ಯವಾಗಿದೆ.
ಸಮನ್ವಯ ಸಮಿತಿಗಳು:
ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ರಾಜ್ಯ ಮಟ್ಟದ ಸಮನ್ವಯ ಸಮಿತಿಯನ್ನು ಸರ್ಕಾರದ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಯನ್ನು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದು ಮಮ್ತಾಝ್ ತಿಳಿಸಿದ್ದಾರೆ.







