‘ಸಾಲುಮರದ ತಿಮ್ಮಕ್ಕ’ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಟ್ರೀಪಾರ್ಕ್: ಸಚಿವ ರೈ

ಮಂಗಳೂರು, ಜು.14: ಅರಣ್ಯ ಸಂರಕ್ಷಣೆಗಾಗಿ ಗಿಡ ನೆಟ್ಟು, ಗಿಡ ಬೆಳೆಸಿ, ಗಿಡ ಉಳಿಸಿ ಪಾಪದಿಂದ ಮುಕ್ತರಾಗಿ ಎಂಬ ಘೋಷ ವಾಕ್ಯದೊಂದಿಗೆ ಅರಣ್ಯ ಇಲಾಖೆ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ‘ನೀರಿಗಾಗಿ ಅರಣ್ಯ- 2017’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ನಮ್ಮ ಸಂಪತ್ತು. ಅದಕ್ಕೆ ಕನ್ನ ಹೊಡೆಯಲು ಪ್ರಯತ್ನ ಆದಾಗ ಜೀವಸಂಕುಲಕ್ಕೇ ಅಪಾಯವಾಗುತ್ತದೆ. ಅರಣ್ಯದಲ್ಲಿ ಕೆಲವೊಂದು ಬೆಂಕಿ ಅವಘಡಗಳಾಗಾದ ಅವುಗಳ ಬಗ್ಗೆ ಸಿಒಡಿ ತನಿಖೆ ನಡೆಸಿಯೂ ಪ್ರಯೋಜನವಾಗಿಲ್ಲ. ಸರಕಾರದ ಕಾರ್ಯಕ್ರಮಗಳ ಜತೆ ವನ್ಯಜೀವಿ ಹಾಗೂ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಜನಸಾಮಾನ್ಯರೇ ಆಸಕ್ತಿ ಹಾಗೂ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.
ಜನಸಂಖ್ಯೆ ಸ್ಫೋಟವಾಗುತ್ತಾ ಹೋದಂತೆ ಅರಣ್ಯ ಸಂಪತ್ತು ಕೂಡಾ ನಾಶವಾಗುತ್ತಾ ಬಂದಿದೆ. ಭೂ ಪ್ರದೇಶವೊಂದರ ಶೇ. 33ರಷ್ಟು ಭಾಗದಲ್ಲಿ ಅರಣ್ಯವಿರಬೇಕೆಂಬುದು ನಿಯಮ. ಕರ್ನಾಟಕದ ಪ್ರಸಕ್ತ ಅಂಕಿಅಂಶಗಳ ಪ್ರಕಾರ ಶೇ. 22ರಷ್ಟು ಭಾಗ ಮಾತ್ರವೇ ಅರಣ್ಯವಿದೆ. ದೆಹ್ರಾದುನ್ ಸಂಶೋಧನಾ ಸಂಸ್ಥೆಯ ಪ್ರಕಾರ ರಾಜ್ಯದಲ್ಲಿ 28,900 ಹೆಕ್ಟೇರ್ ಅರಣ್ಯ ಕವರೇಜ್ ರಾಜ್ಯದಲ್ಲಿ ಹೆಚ್ಚಿದೆ ಎಂಬುದು ಸಮಾಧಾನಕರ ಸಂಗತಿ. ಮಳೆ ಇದ್ದಾಗ ಮಾತ್ರವೇ ಕಾಡು, ಕಾಡು ಇದ್ದಲ್ಲಿ ಮಾತ್ರವೇ ಮಳೆ ಇದು ಪ್ರಕೃತಿ ನಿಯಮವಾಗಿರುವುದರಿಂದ ಕಾಡನ್ನು ಉಳಿಸುವ ಜತೆ ಗಿಡ ನೆಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ದೇಶದಲ್ಲಿ ಮುಂದಿದೆ ಎಂದು ಹೇಳಿದ ಅವರು, ಅತೀ ಹೆಚ್ಚು ಆನೆ, ಹುಲಿ, ಚಿರತೆ, ಸಿಂಗಲೀಕಗಳನ್ನು ಹೊಂದಿರುವ ರಾಜ್ಯ ಕೂಡಾ ನಮ್ಮದಾಗಿದೆ ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯು ಈಗಾಗಲೇ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮವಲ್ಲದೆ, ಅರಣ್ಯ ಕೃಷಿ ಪ್ರೋತ್ಸಾಹ ಕಾರ್ಯಕ್ರಮದ ಮೂಲಕ ರೈತರಿಗೆ ಗಿಡಗಳನ್ನು ನೀಡಿ ಅವುಗಳನ್ನು ಮೂರು ವರ್ಷ ಉಳಿಸಿ ಬೆಳೆಸಿದರೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಹಿಂದೆ 45 ರೂ.ಗಳಿದ್ದ ಪ್ರೋತ್ಸಾಹಧನವನ್ನು ಇದೀಗ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಕಂಪನಿಗಳು ಮುಂದೆ ಬಂದಿವೆ. ತಮ್ಮ ಸಿಎಸ್ಆರ್ ನಿಧಿಯಲ್ಲಿ ಶೇ. 2ರಷ್ಟು ಭಾಗವನ್ನು ಕಂಪನಿಗಳು ಪರಿಸರ ಸಹ್ಯ ಕಾರ್ಯಕ್ರಮಗಳಿಗೆ ಉಪಯೋಗಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವ ರೈ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್. ಬಿಜ್ಜೂರು, ಅರಣ್ಯ ಕೃಷಿ ಪ್ರೋತ್ಸಾಹ ಕಾರ್ಯಕ್ರಮದಡಿ 1.5 ಲಕ್ಷ ಸಸಿಗಳನ್ನು ನೆಡಲಾಗಿದ್ದು, 17.03 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ. ಸುಮಾರು 600 ಮಂದಿ ರೈತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸೌದೆ ಉರುವಲಿಗೆ ಪರ್ಯಾಯವಾಗಿ ಎಲ್ಪಿಜಿ ಗ್ಯಾಸ್ ಒದಗಿಸುವ ಕಾರ್ಯಕ್ರಮದಡಿ ದ.ಕ. ಜಿಲ್ಲೆಯಲ್ಲಿ 3400 ಮಂದಿ ಪ್ರಯೋಜನ ಪಡೆದಿದ್ದು, ಬೀಜದುಂಡೆ ಕಾರ್ಯಕ್ರಮದಡಿ 1.86 ಲಕ್ಷ ಬೀಜದುಂಡೆ ಬಿತ್ತನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ. ಕುಮಾರ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯದ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಮೊಯ್ದೀನ್ ಬಾವಾ, ಮೇಯರ್ ಕವಿತಾ ಸನಿಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ, ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಎಸ್. ಚಂದ್ರಶೇಖರ್, ವನ್ಯಜೀವಿ ಪರಿಪಾಲಕ ಕಿರಣ್ ಬಡ್ಲೆಗುತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಿಶನ್ ಸಿಂಗ್ ಸುಗಾರ, ಅನೂರ್ ರೆಡ್ಡಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಗೇರು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಸ್. ಅರೇಕಲ್, ಜಯನರಸಿಂಹ ರಾಜ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸದಸ್ಯೆ ಮಮತಾ ಗಟ್ಟಿ, ಮನಪಾ ಸದಸ್ಯರು ಉಪಸ್ಥಿತರಿದ್ದರು.







