ನೆಮ್ಮದಿಯ ಬದುಕಿಗೆ ಪರಿಸರದ ಸಮತೋಲನ ಮುಖ್ಯ: ಆರ್.ಕೆ.ಎಂ.ಎಂ.ಮಹಾಸ್ವಾಮೀಜಿ
ಪರಿಸರ ಜಾಗೃತಿ ಮತ್ತು ಕಾನೂನು ಶಿಬಿರ

ಮಡಿಕೇರಿ, ಜು.14: ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇವು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ. ಇವುಗಳನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕೆಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಆರ್.ಕೆ.ಎಂ.ಎಂ.ಮಹಾಸ್ವಾಮೀಜಿ ಅವರು ಕರೆ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಬಾಲಕರ ಬಾಲಮಂದಿರ, ರೋಟರಿ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಬಾಲಕರ ಬಾಲಮಂದಿರದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾನೂನು ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರೂ ನೆಮ್ಮದಿಯ ಬದುಕು ನಡೆಸುವಂತಾಗಬೇಕಾದರೆ ಪರಿಸರ ಸಮತೋಲನದಿಂದ ಕೂಡಿರಬೇಕು. ಪರಿಸರ ಸಂರಕ್ಷಣೆ ಕಾಪಾಡಿದಾಗ ಉತ್ತಮ ಜೀವನ ನಡೆಸಬಹುದು. ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು ಎಂದು ಅವರು ಹೇಳಿದರು. 14 ವರ್ಷದೊಳಗಿನ ಎಲ್ಲರಿಗೂ ಉಚಿತ ಶಿಕ್ಷಣವಿದ್ದು, ಅದನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿಮೆಗೆ ದೂಡಬಾರದು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಸಲಹೆ ನೀ ಡಿದರು.
ಒಂದನೇ ಅಪರ ಮತ್ತು ಜಿಲ್ಲಾ ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್ ಅವರು ಮಾತನಾಡಿ, ದೇಶದಲ್ಲಿ ಸಂವಿಧಾನವೇ ಮೂಲ ಗ್ರಂಥವಾಗಿದ್ದು, ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ರೋಟರಿಯ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಅವರು ಮಾತನಾಡಿ, ರೋಟರಿ ವತಿಯಿಂದ ಜಿಲ್ಲೆಯಲ್ಲಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ನೆಟ್ಟ ಗಿಡವನ್ನು ಮೂರು ವರ್ಷದವರೆಗೆ ಆರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ನೀವು (ವಿದ್ಯಾರ್ಥಿಗಳು) ನೆಟ್ಟ ಗಿಡ ದೊಡ್ಡದಾದ ನಂತರ ಮರವಾಗಿ ನೋಡುವಂತಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಉಸಿರಾಡಲು ಗಾಳಿ, ನೀರು ಬೇಕಾದಲ್ಲಿ ನೈಸರ್ಗಿಕ ಸಂಪತ್ತನ್ನು ಸಂರಕ್ಷಣೆ ಮಾಡಬೇಕು ಎಂದು ಅವರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸಫ್, ಮಡಿಕೇರಿ ರೋಟರಿ ಅಧ್ಯಕ್ಷರಾದ ಪ್ರೀತಂ, ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಎಸ್.ತಮ್ಮಯ್ಯ, ಬಾಲ ನ್ಯಾಯ ಮಂಡಳಿ ಸದಸ್ಯರಾದ ಬಿ.ಎಸ್.ಕುಮಾರಿ, ಅರಣ್ಯ ಇಲಾಖೆಯ ಜಗದೀಶ್, ಬಾಲಕರ ಬಾಲಮಂದಿರದ ಮೇಲ್ವಿಚಾರಕರಾದ ಚರಣ್ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.







