ಸಂಸದ ನಳಿನ್ ಅವರು ಜಲೀಲ್ ಕರೋಪಾಡಿ, ಅಶ್ರಫ್ ಮನೆಗೆ ಭೇಟಿ ನೀಡಿದ್ದಾರೆಯೇ: ಸಚಿವ ರೈ ಪ್ರಶ್ನೆ

ಪುತ್ತೂರು,ಜು.15 : ದೇಶದ ಯಾವ ಭಾಗದಲ್ಲಿಯೂ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿರೋಧಗಳಿಲ್ಲ. ಮೂಲಭೂತವಾದಿ ಸಂಘಟನೆಗಳು ಹಿಂದೂ-ಮುಸ್ಲಿಮರ ನಡುವೆ ಬೇಧವನ್ನು ಸೃಷ್ಟಿಸುವ ಕೆಲಸ ಮಾಡುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ನಡೆಸಬೇಕಾದ ರಾಜಕೀಯ ಪಕ್ಷಗಳು ಕಾನೂನುಗಳನ್ನು ಕೈಗೆತ್ತಿಕೊಂಡು ಕೊಲ್ಲುವ ಮತ್ತು ಇರಿಯುವ ಮೂಲಕ ರಾಜಕೀಯ ನಡೆಸುತ್ತಿರುವುದು ಖಂಡನೀಯವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮೂಲಕ ಪಕ್ಷವನ್ನು ಬೆಳೆಸಬೇಕು ಎಂದು ಕೇರಳದ ಶಾಸಕ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಹೇಳಿದರು.
ಅವರು ಶನಿವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಮುಕ್ರಂಪಾಡಿ ಸುಬದ್ರ ಕಲ್ಯಾಣ ಮಂಟಪದಲ್ಲಿ ನಡೆದ `ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸೆಕ್ಷನ್ ಇರುವ ಸಂದರ್ಭದಲ್ಲಿ ಕಾನೂನನ್ನು ಗೌರವಿಸಬೇಕಾಗಿರುವ ಈ ಜಿಲ್ಲೆಯ ಸಂಸದರು ಕಾನೂನು ಮೀರಿ ನಡೆಯುವುದಾದರೆ ಇಂತಹ ವ್ಯಕ್ತಿಯಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಡವರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಸಿದ್ದರಾಮಯ್ಯ ಅವರನ್ನು ಟೀಕಿಸುವ ಬಿಜೆಪಿಗರು ಪ್ರದಾನಿ ಮೋದಿ ಅವರ ಯೋಜನೆಯನ್ನು ತಿಳಿಸಲಿ. ಈ ಇಬ್ಬರು ನಾಯಕರ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿಗರು ಬರುವುದಾದಲ್ಲಿ ನಾವು ಸಿದ್ಧರಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದೇಶದ ಸ್ವಾಂತಂತ್ರ್ಯ ಹೋರಾಟಗಾರರನ್ನು ಅಪಮಾನ ಮಾಡುವುದು ಸರಿಯಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರನ್ನೂ ಟೀಕಿಸುವವರು ದೇಶದ್ರೋಹಿಗಳು. ಚಕ್ರವರ್ತಿ ಸೂಲಿಬೆಲೆಯಂತಹವರು ಇದನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಕೊಲೆಯಾದ ಶರತ್ ಮನೆಗೆ ನಾನು ಹೋಗಿಲ್ಲ ಎನ್ನುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊಲೆಯಾದ ಜನಪ್ರತಿನಿಧಿಯಾಗಿದ್ದ ಜಲೀಲ್ ಕರೋಪಾಡಿ ಅಥವಾ ಅಶ್ರಫ್ ಮನೆಗೆ ಭೇಟಿ ನೀಡಿದ್ದಾರೆಯೇ, ನಾನು ಮೃತರಾದ ಶರತ್, ಜಲೀಲ್ ಕರೋಪಾಡಿ, ಅಶ್ರಫ್ ಎಲ್ಲರ ಮನೆಗೂ ಸಾಂತ್ವನ ಹೇಳಲು ಹೋಗಿದ್ದೇನೆ. ನಾನು ಜಾತ್ಯಾತೀತ ನಿಲುವು ಹೊಂದಿದ್ದು, ಕೋಮುವಾದದಿಂದ ಜನರನ್ನು ನೋಡುವ ಇಂತಹ ವ್ಯಕ್ತಿಗಳು ನನಗೆ ಪಾಠ ಮಾಡುವ ಅಗತ್ಯವಿಲ್ಲ ಎಂದರು.
ದುರ್ಬಲ ಜಾತ್ಯಾತೀತ ಪಕ್ಷಗಳಿಂದ ಜಾತ್ಯಾತೀತತೆಯೂ ದುರ್ಬಲವಾಗುತ್ತದೆ ಎಂಬುದಕ್ಕೆ ಜಾತ್ಯಾತೀತ ನಿಲುವಿನ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಸಾಕ್ಷಿ ಎಂದ ಅವರು, ಸಮ್ಮಿಶ್ರ ಸರ್ಕಾರವಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಿಮಿ ಸಂಘಟನೆ ಕಾರ್ಯಾಚರಿಸುತ್ತಿದೆ. ಇಲ್ಲಿನ ಮದ್ರಸಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂದು ಸರ್ಕಾರವೇ ಪ್ರಚಾರ ಮಾಡಿತ್ತು. ಆ ಸಂದರ್ಭದಲ್ಲಿ ಕೋಮುವಾದಿ ಕಲ್ಲಡ್ಕ ಪ್ರಭಾಕರ ಭಟ್ ಅವರು ನಾಗರಾಜ ಶೆಟ್ಟಿ ಅವರೊಂದಿಗೆ ಸೇರಿಕೊಂಡು ಸರ್ಕಾರ ನಡೆಸುತ್ತಿದ್ದರು ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರ ಮನಸ್ಸು ಕೆಡಿಸುವುದೇ ಬಿಜೆಪಿಯ ಉದ್ದೇಶವಾಗಿದ್ದು, ಆ ಪಕ್ಷಕ್ಕೆ ಎಂದಿಗೂ ಶಾಂತಿ ಬೇಕಾಗಿಲ್ಲ. ಮೃತದೇಹ ಮುಂದಿಟ್ಟು ರಾಜಕಾರಣ ಮಾಡುವುದನ್ನು ಯಾವುದೇ ಧರ್ಮ ಒಪ್ಪುವುದಿಲ್ಲ. ಹಿಂದೂ ಧರ್ಮವು ಬಿಜೆಪಿಯಿಂದ ಸ್ಥಾಪನೆಯಾಗಿಲ್ಲ. ಇದನ್ನು ಉಳಿಸಲು ಬಿಜೆಪಿಗರು ಬೇಕಿಲ್ಲ. ಹಿಂದೂಗಳಾದ ನಾವೆಲ್ಲರಿದ್ದೇವೆ ಎಂದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಶಕುಂತಳಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕೆಪಿಸಿಸಿ ಖಜಾಂಜಿ ಕಿಶನ್ರಾಜ್, ಸದಸ್ಯ ಎಂ.ಎಸ್. ಮಹಮ್ಮದ್, ನವೀನ್ ಭಂಡಾರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ದಿನೇಶ್, ಜಿಲ್ಲಾ ಕಾರ್ಯದರ್ಶಿ ನವೀನ್ ಡಿ'ಸೋಜ, ಯುವಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಪಕ್ಷದ ಮುಖಂಡರಾದ ಡಿ.ಕೆ. ಸುಧೀರ್, ಪ್ರವೀಣ್ ಚಂದ್ರ ಆಳ್ವ, ಅಮಳ ರಾಮಚಂದ್ರ, ಜೋಕಿಂ ಡಿ'ಸೋಜ, ಭಾಸ್ಕರ ಕೋಡಿಂಬಾಳ, ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಸ್ವಾಗತಿಸಿದರು. ಮಹಮ್ಮದ್ ಬಡಗನ್ನೂರು ನಿರೂಪಿಸಿದರು.







