ಶೋಭಾ, ಯಡಿಯೂರಪ್ಪ ಬಂಧನಕ್ಕೆ ಎಸ್ಡಿಪಿಐ ಆಗ್ರಹ
ಉಡುಪಿ, ಜು.15: ಕರಾವಳಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿ ಯುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪಅವರನ್ನು ಕೂಡಲೇ ಬಂಧಿಸಬೇಕೆಂದು ಉಡುಪಿ ಜಿಲ್ಲಾ ಎಸ್ಡಿಪಿಐ ಒತ್ತಾಯಿಸಿದೆ.
ಶರತ್ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕಾಗಿರುವುದು ಪೊಲೀಸರ ಕರ್ತವ್ಯ. ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಬಿಜೆಪಿ ಸಂಸದರು ಕೊಲೆಯ ಆರೋಪವನ್ನು ಎಸ್ಡಿಪಿಐ ಮತ್ತು ಪಿಎಫ್ಐ ಮೇಲೆ ಹೊರಿಸಲು ಹೊರಟಿರುವುದು ಸರಿಯಲ್ಲ. ಇದು ಪೋಲಿಸರನ್ನು ದಿಕ್ಕು ತಪ್ಪಿಸುವ ಹುನ್ನಾರ ಮತ್ತು ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಎಂದು ಎಸ್ಡಿಪಿಐ ದೂರಿದೆ.
ಸೂತಕದ ಮನೆಯಲ್ಲಿ ರಾಜಕೀಯ ಮಾಡುತ್ತಿರುವ ಈ ನೀಚ ರಾಜಕಾರಣಿಗಳನ್ನು ಕಾನೂನಿನ ಅಡಿಯಲ್ಲಿ ತರುವವರೆಗೂ ಇಲ್ಲಿ ಕೋಮುಧ್ವೇಷಗಳು ಕೊನೆಗೊಳ್ಳಲು ಸಾಧ್ಯವಿಲ್ಲ. ಆದುದರಿಂದ ಲೋಕಸಭಾ ಸಭಾಪತಿ ಮತ್ತು ಚುನಾವಣಾ ಆಯೋಗವು ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪರವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಕೋಮು ಪ್ರಚೋದನೆ ಹಾಗೂ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಠಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಸತ್ಯಜಿತ್ ಸುರತ್ಕಲ್ ಮೇಲೆ ಕೇಸು ದಾಖಲಿಸಿ ಜೈಲಿಗಟ್ಟಬೇಕೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೊಟೇಶ್ವರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







