ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಾರದ ‘ಶಾಂತಿ ಸಭೆ’ಯ ಸಲಹೆಗಳು

ಮಂಗಳೂರು, ಜು.15: ಕೋಮುಸೂಕ್ಷ್ಮ ಪ್ರದೇಶವಾಗಿರುವ ದ.ಕ.ಜಿಲ್ಲೆಯಲ್ಲಿ ಮತೀಯ ಗಲಭೆಗಳು ನಡೆದಾಗ, ಮುಂಜಾಗ್ರತಾ ಕ್ರಮವಾಗಿ ಹಬ್ಬಗಳ ಸಂದರ್ಭ ಜಿಲ್ಲೆ, ತಾಲೂಕು, ಹೋಬಳಿ, ಠಾಣೆ, ಗ್ರಾಮ ಮಟ್ಟದಲ್ಲಿ ಶಾಂತಿ ಸಭೆ ನಡೆಸಲಾಗುತ್ತದೆ. ಆದರೆ ಈ ಸಭೆಯಲ್ಲಿ ಕೇಳಿಬರುವ ಸಲಹೆಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಕಳೆದ ಎರಡುವರೆ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆದ ಕೊಲೆ, ಕೊಲೆಯತ್ನ ಸಹಿತ ಅಶಾಂತಿಯ ಪರಿಸ್ಥಿತಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಶಾಂತಿ ಸಭೆ ನಡೆಸಿತ್ತು. ಆವಾಗಲೂ ಸಾಕಷ್ಟು ಸಲಹೆಗಳು ಕೇಳಿ ಬಂದಿದೆ. ಸಾಮಾನ್ಯವಾಗಿ ಶಾಂತಿಸಭೆಗೆ ಅಶಾಂತಿ ಸೃಷ್ಟಿಸುವವರು ಎಂದೂ ಹಾಜರಾಗುವುದಿಲ್ಲ. ಕೇವಲ ಶಾಂತಿ ಬಯಸುವವರು ಮಾತ್ರ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗಾಗಿ ಶಾಂತಿಯ ಮಂತ್ರ ಜಪಿಸುವ ವಿವಿಧ ಸಂಘಟನೆಗಳ ಈ ನಾಯಕರ, ಧರ್ಮಗುರುಗಳ, ರಾಜಕಾರಣಿಗಳ ಮಾತನ್ನು ಸಮಾಜಘಾತುಕರು ಗಂಭೀರವಾಗಿ ಪರಿಗಣಿಸುತ್ತಾರೆಯೇ?, ಶಾಂತಿಗಾಗಿನ ಕರೆಗೆ ಸ್ಪಂದಿಸುತ್ತಾರೆಯೇ?ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಅಲ್ಲದೆ ಶಾಂತಿ ಬಯಸುವವರಿಗೆ ಶಾಂತಿಯ ಬೋಧನೆ ಯಾಕೆ? ಅಶಾಂತಿ ಸೃಷ್ಟಿಸುವವರ ಮನಪರಿವರ್ತನೆಗೆ ಏನು ಮಾಡಬೇಕು? ಅವರಿಗೆ ಕಾನೂನು ಥೆರಪಿ ಮಾತ್ರ ಮದ್ದೇ? ಎಂಬ ಪ್ರಶ್ನೆಯೂ ಎದುರಾಗುತ್ತಿದೆ.
ಜಿಲ್ಲೆಯ ಶೇ.99ರಷ್ಟು ಮಂದಿ ಶಾಂತಿಪ್ರಿಯರು. ಶೇ.1 ಮಂದಿ ಮಾಡುವ ಅಶಾಂತಿಗೆ ಯಾರೂ ಕೈ ಜೋಡಿಸಬಾರದು. ರಾಜಕೀಯ ಲಾಭಕ್ಕಾಗಿ ಅದೂ ಚುನಾವಣೆಯ ಪೂರ್ವದಲ್ಲಿ ಕೆಲವು ಸಂಘಟನೆಗಳು, ಪಕ್ಷದ ನಾಯಕರು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಹಾರ ಸಚಿವ ಯು.ಟಿ.ಖಾದರ್ರ ಅಭಿಮತ. ಅಲ್ಲದೆ, ಎರಡು ತಿಂಗಳಿಗೊಮ್ಮೆ ನಿರಂತರವಾಗಿ ಶಾಂತಿಸಭೆ ನಡೆಸಬೇಕು ಎಂಬುದು ಅವರ ಅಪೇಕ್ಷೆ. ಜಿಲ್ಲೆಯಲ್ಲಿ ನಮಗೆ ನಾವೇ ಭಯೋತ್ಪಾದಕರಾಗಿದ್ದೇವೆ. ಕೆಲವು ಜನಪ್ರತಿನಿಧಿಗಳ ಹೇಳಿಕೆಗಳು ವಾಕರಿಕೆ ಬರಿಸುತ್ತಿವೆ. ಇವರು ತಮ್ಮ ರಾಜಕೀಯ ಲಾಭಕ್ಕಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಿಪಿಎಂ ಪಕ್ಷದ ಮುಖಂಡ ಕೆ.ಆರ್.ಶ್ರೀಯಾನ್ರ ಹೇಳಿಕೆಯಾಗಿದೆ.
ಸಿಪಿಐ ಪಕ್ಷದ ಸೀತಾರಾಮ ಬೇರಿಂಜ ನಮ್ಮ ಕಾನೂನು ಹಲ್ಲಿಲ್ಲದ ಹಾವಿನಂತಿದೆ. ನೈತಿಕ ಪೊಲೀಸ್ಗಿರಿಗೆ ಜಿಲ್ಲೆಯಲ್ಲಿ ಇನ್ನೂ ಕಡಿವಾಣ ಬಿದ್ದಿಲ್ಲ. ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯ ಮೇಲೆ ಹಸ್ತಕ್ಷೇಪ ಮಾಡುವುದನ್ನು ಕೈ ಬಿಡಬೇಕು. ಅವರಿಗೆ ಸ್ವತಂತ್ರವಾಗಿ ಕಾರ್ಯಾಚರಿಸಲು ಅವಕಾಶ ಕೊಡಬೇಕು. ಉದ್ರೇಕಕಾರಿ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಗಲಭೆಗೆ ಕೆಲವು ಮಾಧ್ಯಮಗಳು ಮತ್ತು ತಳಮಟ್ಟದ ಪೊಲೀಸರೇ ಕಾರಣ. ಸಮಾಜ ಬಾಹಿರ ಶಕ್ತಿಗಳು ಇಂತಹ ಪೊಲೀಸರ ಸಖ್ಯ ಬೆಳೆಸಿದ್ದಾರೆ. ಈ ಪೊಲೀಸರು ತಪ್ಪು ಮಾಹಿತಿ ನೀಡಿ ಹಿರಿಯ ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಹತ್ತಾರು ವರ್ಷದಿಂದ ಒಂದೇ ಠಾಣೆ ಅಥವಾ ಜಿಲ್ಲೆಯಲ್ಲಿ ತಳವೂರಿರುವ ಪೊಲೀಸರನ್ನು ಸಾಮೂಹಿಕವಾಗಿ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ಮತೀಯ ಗಲಭೆಗೆ ತಡೆ ಹಾಕಲು ಅಸಾಧ್ಯ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಶಾಂತಿ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ತಳಮಟ್ಟದ ಪೊಲೀಸರ ವರ್ಗಾವಣೆಗೆ ಇನ್ನೆಷ್ಟು ವರ್ಷ ಬೇಕು ಎಂದು ಕಾದು ನೋಡಬೇಕಿದೆ.
ರೈತ ಸಂಘದ ಯಾದವ ಶೆಟ್ಟಿ ಮಾತನಾಡಿ, ಅಪರಾಧ ಪ್ರಕರಣ ನಡೆದಾಗ ಪೊಲೀಸರು ಫಿಕ್ಸಿಂಗ್ ಮಾಡುತ್ತಾರೆ. ಇದರಿಂದ ಅಮಾಯಕರಿಗೆ ತೊಂದರೆಯಾಗಲಿದೆ. ನೈಜ ಆರೋಪಿಗಳಿಗೆ ಮತ್ತಷ್ಟು ಅಪರಾಧ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗಾಗಿ ಫಿಕ್ಸಿಂಗ್ಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಯಾವ ಕಾರಣಕ್ಕೂ ಫಿಕ್ಸಿಂಗ್ಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಗೆ, ರಾಜ್ಯಕ್ಕೆ ಬೆಂಕಿ ಹಾಕುವೆವು ಎಂದು ಹೇಳುವ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿ. ಇಂತಹ ಶಾಂತಿಸಭೆಗೆ ರಾಜಕಾರಣಿಗಳ ಬದಲು ಧರ್ಮಗುರುಗಳನ್ನು ಕರೆಸಿ ಎಂಬುದು ಎಸ್ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆಯವರ ಆಗ್ರಹವಾದರೆ, ಇನ್ನು ಮುಂದೆ ಯಾವ ಕಾರಣಕ್ಕೂ ಶವ ಮೆರವಣಿಗೆಗೆ ಅವಕಾಶ ನೀಡಬಾರದು ಎಂಬುದು ಫಾ. ಓವಿಲ್ ಡಿಸೋಜರ ಒತ್ತಾಯವಾಗಿತ್ತು. ಜಿಲ್ಲೆಯಲ್ಲಿ ಗಾಂಜಾ, ಅಫೀಮುದಾರರಿಂದ ಗಲಭೆಯಾಗುತ್ತಿಲ್ಲ. ಮತೀಯ ಅಫೀಮುದಾರರಿಂದಲೇ ಗಲಭೆಯಾಗುತ್ತಿದೆ. ಮೊದಲು ಇಂತಹ ಮತೀಯ ಅಫೀಮುದಾರರನ್ನು ಗುರುತಿಸಿ ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರ ಒತ್ತಾಯವಾಗಿತ್ತು.
ಕೋಮಪ್ರಚೋದನಕಾರಿ ಭಾಷಣ ಮಾಡುವವರು ಇವತ್ತು ನಾಯಕರಾಗಿದ್ದಾರೆ. ಅದಕ್ಕೆ ನೀವೇ (ಸರಕಾರ) ಕಾರಣ. ನೀವು ಆರಂಭದಲ್ಲಿ ಅವರ ಹೆಡೆಮುರಿ ಕಟ್ಟಿದ್ದರೆ ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ ಎಂದು ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ರ ಅನಿಸಿಕೆಯಾಗಿತ್ತು.
ರಕ್ತಪಾತ ಮಾಡುವೆ, ಬೆಂಕಿ ಹಾಕುವೆ ಎಂದು ಹೇಳುವವರ ವಿರುದ್ಧ ಕಠಿಣ ಕ್ರಮ ಜರಗಿಸುವ ಧೈರ್ಯ ಪೊಲೀಸ್ ಇಲಾಖೆಗೆ ಇಲ್ಲವೇ ಎಂಬುದು ಕಾಂಗ್ರೆಸ್ ಮುಖಂಡರೇ ಆದ ಶಾಹುಲ್ ಹಮೀದ್ ಮತ್ತು ಬಿ.ಕೆ.ಇದಿನಬ್ಬ ಕಲ್ಲಡ್ಕ ಅವರ ಪ್ರಶ್ನೆಯಾಗಿತ್ತು. ಕಾರ್ಯಾಚರಣೆಯ ಹೆಸರಿನಲ್ಲಿ ಅಮಾಯಕರ ಬಂಧನ ಸತ್ರ ಇಂದೇ ಕೊನೆಯಾಗಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ರ ಒತ್ತಾಯವಾಗಿತ್ತು.
ಹೀಗೆ ಪ್ರತೀ ಶಾಂತಿಸಭೆಯಲ್ಲೂ ಐಕ್ಯತೆಯ ಮಂತ್ರ ಪಠಿಸಲಾಗುತ್ತದೆ. ಇಂತಹ ಸಾಕಷ್ಟು ಪ್ರಶ್ನೆ, ಅಸಮಾಧಾನ, ಸಲಹೆ-ಸೂಚನೆಗಳೂ ಬರುತ್ತಿವೆ. ಆದರೆ, ಇವುಗಳನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಜಿಲ್ಲಾಡಳಿತ ಹೊಂದದಿರುವುದು ವಿಪರ್ಯಾಸ.







