ಇಂದಿನಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ: ಪೊಲೀಸ್ ಆಯುಕ್ತರ ಆದೇಶ

ಮಂಗಳೂರು, ಜು. 15: ಮಂಗಳೂರು ನಗರ ಸೇರಿದಂತೆ ದ.ಕ.ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ಸಮಯಗಳಿಂದ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕರ್ನಾಟಕ ಪೊಲೀಸ್ ಕಾಯಿದೆ ಕಲಂ 35ರ ಅನ್ವಯ ಜು.16ರಿಂದ ಜು.30ರವರೆಗೆ ನಿರ್ಬಂಧಕಾಜ್ಞೆ ಹೊರಡಿಸಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದು, ಜು.16ರ ಬೆಳಗ್ಗೆ 6ರಿಂದ 30ರ ಮಧ್ಯರಾತ್ರಿ 12ಗಂಟೆವರೆಗೆ ಜಾರಿಯಲ್ಲಿದೆ. ಇದು ಸೆಕ್ಷನ್ 144ರನ್ವಯ ನಿಷೇಧಾಜ್ಞೆಯಲ್ಲ. ನಿರ್ಬಂಧಕಾಜ್ಞೆ ಪ್ರಕಾರ ಶಸ್ತ್ರಾಸ್ತ್ರ, ದೊಣ್ಣೆ ಸೇರಿದಂತೆ ಮಾರಕಾಸ್ತ್ರಗಳನ್ನು ಸಾಗಿಸುವಂತಿಲ್ಲ. ಯಾವುದೇ ಸ್ಫೋಟಕಗಳನ್ನು ಒಯ್ಯುವಂತಿಲ್ಲ. ಕಲ್ಲು ತೂರಾಟ, ಕಲ್ಲು ಸಂಗ್ರಹ ಸೇರಿದಂತೆ ಆಯುಧಗಳನ್ನು ಎಸೆಯುವಂತಿಲ್ಲ. ಪ್ರತಿಕೃತಿಗಳ ಪ್ರದರ್ಶನ, ದಹಹಿಸುವುದಕ್ಕೆ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಅಥವಾ ಭದ್ರತೆಗೆ ತೊಂದರೆ ಉಂಟು ಮಾಡುವ, ಪ್ರಚೋಧನಾಕಾರಿ ಘೋಷಣೆ, ಭಾಷಣ, ಭಿತ್ತಿಪತ್ರ, ಪ್ರಸಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಈ ಕಲಂನಡಿ ಬಿಗು ಪೊಲೀಸ್ ತಪಾಸಣೆ, ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.





