ಹೊರ ರಾಜ್ಯಗಳಲ್ಲೂ ಪವಾಡ ರಹಸ್ಯ ಬಯಲು
ಜೀವನ ಕಥನ
ಭಾಗ 4
ಪವಾಡ ರಹಸ್ಯ ಬಯಲು ಎಂಬುದು ವಿಸ್ಮಯವಲ್ಲ. ಅದು ವಿಜ್ಞಾನದ ಒಂದು ಕೌತುಕ. ನೋಡುಗರ ಕಣ್ಣಿಗೆ ಅದೊಂದು ವಿಸ್ಮಯವಾಗಿ ಕಾಣಬಹುದು. ಬದಲಿಗೆ ವಿಜ್ಞಾನದ ಕೌತುಕವನ್ನೇ ಪವಾಡವನ್ನಾಗಿ ಬಿಂಬಿಸಿ ಆ ಮೂಲಕ ಮುಗ್ಧ ಜನರನ್ನು ಮೋಸ ಮಾಡುವ ಒಂದು ವರ್ಗಕ್ಕೆ ಅದು ಹೊಟ್ಟೆ ಹೊರೆಯುವ, ಹಣ ಮಾಡುವ ದಂಧೆಯೂ ಹೌದು. ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಯನ್ನು ಬಿತ್ತಿ, ಜನರ ಮನಸ್ಸಿನ ಭಾವನೆಗಳಿಗೆ ಮೋಸ ಮಾಡುವ ಮೂಲಕ ಘಾಸಿ ಮಾಡುವುದೇ ಈ ಪವಾಡ. ಈ ಪವಾಡಗಳ ಹೆಸರಿನಲ್ಲಿ ಅದೆಷ್ಟೋ ಮಂದಿ ತಮ್ಮವರನ್ನು ಕಳೆದುಕೊಂಡಿರುವುದುಂಟು. ತಮ್ಮವರಿಂದ ನೋವು ಅನುಭವಿಸಿರುವುದುಂಟು. ತಮ್ಮವರಿಂದಲೇ ಮೋಸ ಹೋಗಿರುವುದೂ ಇದೆ. ಅಷ್ಟೇ ಯಾಕೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿರುವುದೂ ಇದೆ. ಇಂತಹ ಮೂಢನಂಬಿಕೆಗಳ ವಿರುದ್ಧ ಪವಾಡ ರಹಸ್ಯ ಬಯಲಿನ ಮೂಲಕ ಹೋರಾಟ ನಡೆಸಿದರೆ, ತಪ್ಪುಗಳ ವಿರುದ್ಧ ಧ್ವನಿ ಎತ್ತಿದರೆ, ಅನ್ಯಾಯದ ವಿರುದ್ಧ ನ್ಯಾಯದ ಹಾದಿ ಹಿಡಿದರೆ ಅಂತಹವರನ್ನೇ ಗುರಿಯಾಗಿಸುವ ಪ್ರಯತ್ನಗಳೂ ನಡೆಯುತ್ತವೆ.
ನನ್ನನ್ನು ಕೊಲೆ ಮಾಡಲು ಅದೆಷ್ಟೋ ಪ್ರಯತ್ನಗಳು ನಡೆದವು. ಸ್ಕೂಟರಿನ ಬ್ರೇಕ್ ಕತ್ತರಿಸಿದರು. ದೈಹಿಕ ಹಲ್ಲೆಗೂ ಯತ್ನಿಸಿದರು. ಅಷ್ಟೇ ಅಲ್ಲ ಫೋನ್ ಮೂಲಕ ಬೆದರಿಕೆ ಕರೆಗಳು ಬೇರೆ. ತಮ್ಮ ವೌಢ್ಯಗಳನ್ನು ಮುಂದಿಟ್ಟುಕೊಂಡು ಮುಗ್ಧರನ್ನು ಮೋಸಗೊಳಿಸುವವರಿಗೆ ನಾನು ಎಸೆದಿರುವ, ಎಸೆಯುತ್ತಿರುವ ಸವಾಲುಗಳೇ ನನ್ನ ಪ್ರಾಣಕ್ಕೂ ಕುತ್ತು ತಂದಿದೆ. ಆದರೆ ಈ ಬೆದರಿಕೆಗಳು, ಈ ಪ್ರಾಣ ಬೆದರಿಕೆಯ ಪ್ರಯತ್ನಗಳು ನನ್ನ ಧ್ಯೇಯ, ಉದ್ದೇಶದಿಂದ ಯಾವತ್ತೂ ಧೃತಿಗೆಡಿಸಿಲ್ಲ, ನನ್ನನ್ನು ವಿಚಲಿತನನ್ನಾಗಿಸಿಲ್ಲ. ನನ್ನ ಗುರಿ ಏನಿದ್ದರೂ ವೌಢ್ಯ, ಅನ್ಯಾಯದ ವಿರುದ್ಧವಾಗಿದೆ.
1981-82ರಲ್ಲಿನ ಪ್ರೇಮಾನಂದ ಭೇಟಿ, ಅವರಿಂದ ನಾನು ಅರಿತ ವೈಚಾರಿಕ ಸಂಗತಿಗಳು, ನನ್ನ ವೈಜ್ಞಾನಿಕ ಪ್ರಯೋಗಗಳಿಗೆ ಅವರು ಗುರುವಾಗುವ ಮೂಲಕ ವೌಢ್ಯಗಳ ವಿರುದ್ಧದ ನನ್ನ ಹೋರಾಟವಾದ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಾನು ಮುಂದೊಂದು ದಿನ ಸ್ವತಂತ್ರವಾಗಿ ನಿರ್ವಹಿಸಲು ಸಾಧ್ಯವಾಯಿತು.
ಈ ಪವಾಡ ರಹಸ್ಯ ಬಯಲಿನ ಪಯಣ ಆರಂಭದಲ್ಲಿ ಉಪನ್ಯಾಸದ ಮೂಲಕ ಮಂಗಳೂರಿನಲ್ಲಿ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ನಡೆದಂತಹ ವಿಜ್ಞಾನ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಒಂದು ಗಂಟೆಯ ಉಪನ್ಯಾಸದ ಮೂಲಕ ನನ್ನ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಕ್ಕೆ ಬುನಾದಿ ದೊರಕಿತ್ತು. ಆ ಕಾರ್ಯಕ್ರಮದಲ್ಲಿ ಅವೈಜ್ಞಾನಿಕ ವಿಚಾರಗಳ ಬಗ್ಗೆ ನಾನು ಮಾತನಾಡುವುದಿತ್ತು. ಆ ಕಾರ್ಯಕ್ರಮಕ್ಕೆ ಬಂದಿದ್ದವರು ‘ಉಪನ್ಯಾಸದ ಜತೆ ಪವಾಡ ರಹಸ್ಯ ಬಯಲು ಮಾಡಿ’ ಎಂದು ಒತ್ತಾಯಿಸಿದ್ದರು. ಆ ಕಾರ್ಯವನ್ನೂ ನಿರ್ವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಕೆಲವರು ಭಾಗವಹಿಸಿದ್ದರು. ಅವರಿಗೆ ಪವಾಡ ಬಯಲು ಅಚ್ಚರಿ ಮೂಡಿಸಿತ್ತು. ಅರಸೀಕೆರೆಯಲ್ಲಿ ಕರ್ನಾಟಕ ವಿಜ್ಞಾನ ಘಟಕದ ಕಾರ್ಯಕ್ರಮದಲ್ಲಿ ಪವಾಡ ರಹಸ್ಯ ಬಯಲು ಮಾಡಬೇಕು ಎಂದು ಅವರು ಕೋರಿಕೊಂಡರು. ಅಲ್ಲಿಗೆ ಹೋದೆ ಅದು ಸುಮಾರು 1989ರಲ್ಲಿ ಇರಬೇಕು. ದ.ಕ.ಜಿಲ್ಲೆಯ ಹೊರಗೆ ನನ್ನ ಪ್ರಥಮ ಕಾರ್ಯಕ್ರಮ. ಆ ಸಂದರ್ಭ ಕೆಲವೇ ಕೆಲವು ಪತ್ರಿಕಾ ಮಾಧ್ಯಮಗಳು ಮಾತ್ರವೇ ಕರ್ನಾಟಕದಲ್ಲಿ ಪ್ರಧಾನವಾಗಿದ್ದವು. ಅಲ್ಲಿನ ನನ್ನ ಕಾರ್ಯಕ್ರಮ ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ರಾಜ್ಯದಲ್ಲಿ ಪವಾಡ ರಹಸ್ಯ ಬಯಲು ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಅದನ್ನು ಓದಿ ರಾಜ್ಯದ ವಿವಿಧ ಕಡೆಗಳಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮಕ್ಕೆ ನನಗೆ ಕರೆ ಬರಲಾರಂಭಿಸಿತು.
ಹೊರ ರಾಜ್ಯಗಳಲ್ಲೂ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳು
ಭಾರತೀಯ ಜ್ಞಾನ ವಿಜ್ಞಾನ ಜಾಥಾದಲ್ಲಿ ನನಗೆ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ಜಾಥಾದ ಮೂಲಕ ರಾಜ್ಯದ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮಗನ್ನು ನೀಡಿದೆ. ಇದು ರಾಜ್ಯದ ಹೊರಗೂ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿತು. ಗೋವಾದಲ್ಲಿ ನಡೆದ ಸಾಯನ್ಸ್ ಕಾಂಗ್ರೆಸ್ನಲ್ಲಿ ಎನ್ಸಿಎಸ್ಟಿಯವರು ನನಗೆ ಕರೆ ನೀಡಿದರು. ಅಲ್ಲಿ ಯಾರೋ ಹಿಂದಿ ಯಲ್ಲಿ ಪ್ರಶ್ನೆ ನನ್ನ ಮುಂದಿರಿಸಿದಾಗ, ಅದಕ್ಕೆ ಹಿಂದಿಯಲ್ಲೇ ಉತ್ತರಿಸಿದೆ. ಮರಾಠಿಯಲ್ಲೂ ಪ್ರಶ್ನಿಸಿದರು. ಮರಾಠಿಯಲ್ಲೂ ಉತ್ತರಿಸಿದೆ. ಕೊಂಕಣಿಯಲ್ಲೂ ನಾನು ಉತ್ತರ ನೀಡಿದೆ. ಈ ಕಾರ್ಯಕ್ರಮ ನನಗೆ ಉತ್ತರ ಭಾರತದಿಂದಲೂ ಕರೆ ಬರುವಂತೆ ಮಾಡಿತು. ಈ ಮೂಲಕ ಇಡೀ ದೇಶದಲ್ಲಿ ನಾನು ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದೆ.
ಈ ಪವಾಡ ರಹಸ್ಯ ಕಾರ್ಯಕ್ರಮಗಳ ಜತೆ ಇತರ ಪೂರಕ ಕೆಲ ಕಾರ್ಯಕ್ರಮಗಳನ್ನೂ ನಾನು ಮತ್ತು ನನ್ನ ತಂಡ ನೀಡಲು ಆರಂಭಿಸಿದೆವು. ಅವೈಜ್ಞಾನಿಕ ನಂಬಿಕೆಗಳಿಗೆ, ಫಲ ಜ್ಯೋತಿಷ್ಯ, ಜೋತಿಷ್ಯಗಳಿಗೆ ಪಂಥಾಹ್ವಾನ, ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳನ್ನು ಏರ್ಪಡಿಸುವುದು. ಪವಾಡಗಳನ್ನು ತನಿಖೆ ಮಾಡುವುದು ಮೊದಲಾದ ಕಾರ್ಯಕ್ರಮಗಳು ನಡೆಯಲಾರಂಭಿಸಿದವು. 1993-94ರಲ್ಲಿ ಅಖಿಲ ಭಾರತ ಮಟ್ಟದ ‘ಫೆಡರೇಶನ್ ಆಫ್ ಇಂಡಿಯನ್ ರ್ಯಾಶನಲಿಸ್ಟ್ ಅಸೋಸಿಯೇಶನ್’ ಆರಂಭಿಸಿದೆವು. 2005ರವರೆಗೆ ಪ್ರೇಮಾನಂದರು ಅದರ ಸಂಚಾಲಕ ರಾಗಿದ್ದರು. ನಾನು ಸಹ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. 2005ರಲ್ಲಿ ಪ್ರೇಮಾನಂದರು ನನ್ನನ್ನು ಅಧ್ಯಕ್ಷರನ್ನಾಗಿಸಿದರು. ಮುಂದೆ ಆ ಸ್ಥಾನದಿಂದ ನನ್ನನ್ನು ಕೆಳಗಿಳಿಯಲು ಯಾರೂ ಬಿಡಲಿಲ್ಲ.
ಭೂತ, ಪ್ರೇತ, ಆತ್ಮಗಳ ಹುಡುಕಾಡುತ್ತಾ...
ಬಾಲ್ಯದಿಂದಲೇ ನನಗೆ ಭೂತ, ಪ್ರೇತ ಹಾಗೂ ಆತ್ಮಗಳ ಬಗ್ಗೆ ಭಾರೀ ಕುತೂಹಲ. ಅವುಗಳ ಚಾಲಾಕಿತನ, ಅತಿಮಾನುಷ ಶಕ್ತಿಗಳ ಕತೆಗಳನ್ನು ಕೇಳುತ್ತಾ ನಾನು ಆಶ್ಚರ್ಯಪಡುತ್ತಿದ್ದೆ. ಆದರೆ ನಾನು ಬೆಳೆದಂತೆ ನನ್ನಲ್ಲಿ ಪ್ರಶ್ನಿಸುವ ಮತ್ತು ಪ್ರಯೋಗ ಮಾಡುವ ಗುಣಗಳು ಆ ಅತಿಮಾನುಷ ಶಕ್ತಿಗಳ ಬಗ್ಗೆ ನನಗೆ ಹೊಸತಾದ ಜಗತ್ತನ್ನೇ ತೆರೆದುಕೊಟ್ಟಿತ್ತು. ಈ ನನ್ನ ಪ್ರಯೋಗಶೀಲತೆಯಿಂದಾಗಿ 1976ರಲ್ಲಿ ನನ್ನಂತೆಯೇ ಈ ಭೂತ, ಪ್ರೇತ, ಆತ್ಮಗಳ ಬಗ್ಗೆ ಕುತೂಹಲವನ್ನು ಹೊಂದಿದ್ದ ಸಮಾನ ಮನಸ್ಕರ ತಂಡವು ದಕ್ಷಿಣ ಕನ್ನಡ ವಿಚಾರವಾದಿಗಳ ಸಂಘವನ್ನು ಹುಟ್ಟು ಹಾಕುವಂತೆ ಮಾಡಿತ್ತು. ಮೂಢನಂಬಿಕೆಗಳ ವಿರುದ್ಧದ ಹೋರಾಟದ ಜತೆಗೆ, ಅತಿಮಾನುಷ ಶಕ್ತಿಗಳು, ಪವಾಡಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ, ಅರಿವು ಮೂಡಿಸುವ ಕಾರ್ಯಕ್ರಮದ ಜತೆಗೆ ಇಂತಹ ಪವಾಡಗಳನ್ನು ತನಿಖೆಯ ಆಧಾರದಲ್ಲಿ ಆ ಪವಾಡಗಳ ರಹಸ್ಯವನ್ನು ಬಯಲು ಮಾಡುವ ಕಾರ್ಯಗಳನ್ನು ಮಾಡಲಾರಂಭಿಸಿದೆವು.
ನಿರೂಪಣೆ: ಸತ್ಯಾ ಕೆ.