ಪೊಲೀಸರಿಂದ ಯಡಿಯೂರಪ್ಪ ನಿವಾಸ ಶೋಧ
ಈಶ್ವರಪ್ಪ ಆಪ್ತ ಸಹಾಯಕ ಅಪಹರಣ ಪ್ರಕರಣ

ಬೆಂಗಳೂರು, ಜು.16: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣ ಸಂಬಂಧ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು, ರವಿವಾರ ಬೆಳಗಿನಜಾವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಶೋಧ ನಡೆಸಿದ್ದಾರೆ.
ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣದಲ್ಲಿ ತಮ್ಮ ಸಂಬಂಧಿ ಎನ್. ಆರ್.ಸಂತೋಷ್ ಪಾತ್ರವಿದೆ ಎಂದು ಹೇಳಿ ರವಿವಾರ ಬೆಳಗಿಜಾವ 2ಗಂಟೆಯ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ನನ್ನ ಮನೆಗೆ ಬಂದು ತನಿಖೆ ನಡೆಸಿ ಸಂತೋಷ್ಗಾಗಿ ಶೋಧ ನಡೆಸಿದ್ದಾರೆ.ಮಹಾಲಕ್ಷ್ಮಿ ಲೇಔಟ್ ಉಪ ವಿಭಾಗದ ಎಸಿಪಿ ಬಡಿಗೇರ್ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದು, ಸಂತೋಷ್ ಎಲ್ಲಿ ಅಂತ ಬಿಎಸ್ವೈ ಮನೆಯ ಭದ್ರತಾ ಸಿಬ್ಬಂದಿ ಬಳಿ ವಿಚಾರಿಸಿ, ಮನೆಯಲ್ಲಿ ಶೋಧ ನಡೆಸಿದ್ದಾರೆ. ಆತ ಇಲ್ಲದ ಕಾರಣ ವಾಪಾಸ್ಸು ತೆರಳಿದ್ದಾರೆ ಎಂದು ಗೊತ್ತಾಗಿದೆ.
ಆಯುಕ್ತರಿಗೆ ಬಿಎಸ್ವೈ ಪತ್ರ: ತಮ್ಮ ಮನೆಗೆ ಆಗಮಿಸಿ ಶೋಧ ನಡೆಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದು, ಮಧ್ಯರಾತ್ರಿ ಬದಲು ಬೆಳಗ್ಗೆ ಬಂದು ತನಿಖೆ ನಡೆಸಬಹುದಿತ್ತು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಮಧ್ಯರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯ ಏನಿತ್ತು? ಕಳೆದ ಏಳೆಂಟು ವರ್ಷಗಳಿಂದ ಸಂತೋಷ್ನನ್ನು ನಾನು ಚೆನ್ನಾಗಿ ಬಲ್ಲೆ. ಆತ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೂ, ಉದ್ದೇಶಪೂರ್ವಕವಾಗಿ ಆತನನ್ನು ಸಿಲುಕಿಸಲಾಗಿದೆ. ಈ ಮೂಲಕ ರಾಜಕೀಯ ವಿರೋಧಿಗಳಿಂದ ತಮ್ಮನ್ನು ಹಣಿಯುವ ಯತ್ನ ನಡೆದಿದೆ ಎಂದು ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವಶ್ಯಕತೆ ಏನಿತ್ತು?: ರವಿವಾರ ಮುಂಜಾನೆ 2 ಗಂಟೆ ಹೊತ್ತಿಗೆ ನನ್ನ ಮನೆಗೆ ಬಂದು ತನಿಖೆ ನಡೆಸುವ ಅವಶ್ಯಕತೆ ಏನಿತ್ತು. ಸಂತೋಷ್ ನನ್ನ ಮನೆಯಲ್ಲಿ ಇಲ್ಲ ಎನ್ನುವುದು ಗೊತ್ತಿದ್ದರೂ, ಬಂದು ಪರಿಶೀಲಿಸುವ ಯತ್ನ ಏನಿತ್ತು? ಈ ವಿಚಾರ ಪ್ರಸ್ತಾಪಿಸಲು ತಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ. ಇದಾದ ನಂತರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಜತೆ ಚರ್ಚಿಸಿದ್ದೇನೆ. ತಮಗೆ ಈ ಮೂಲಕ ಮಾಹಿತಿ ತಲುಪಿಸುತ್ತಿದ್ದೇನೆ ಎಂದು ಪತ್ರದಲ್ಲಿ ಯಡಿಯೂರಪ್ಪ ಹೇಳಿದ್ದಾರೆ.







