‘ಅಕ್ರಮ ಪ್ರವೇಶ’ವನ್ನು ನೀತಿಯನ್ನಾಗಿ ಮಾಡಿಕೊಳ್ಳಬೇಡಿ: ಭಾರತದ ವಿರುದ್ಧ ಮತ್ತೆ ಕಿಡಿಗಾರಿದ ಚೀನಾ

ಬೀಜಿಂಗ್, ಜು. 18: ಸಿಕ್ಕಿಂ ವಲಯದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ವಿರುದ್ಧದ ತನ್ನ ವಾಗ್ದಾಳಿಯನ್ನು ಮುಂದುವರಿಸಿರುವ ಚೀನಾ, ಭಾರತ ತನ್ನ ರಾಜಕೀಯ ಗುರಿಗಳನ್ನು ಸಾಧಿಸುವುದಕ್ಕಾಗಿ ‘ಅತಿಕ್ರಮಣ’ವನ್ನು ತನ್ನ ನೀತಿಯನ್ನಾಗಿ ಮಾಡಿಕೊಳ್ಳಬಾರದು ಎಂದು ಮಂಗಳವಾರ ಹೇಳಿದೆ.
ಅದೇ ವೇಳೆ, ಪರಿಸ್ಥಿತಿ ಬಿಗಡಾಯಿಸುವುದನ್ನು ತಡೆಯಲು ಭಾರತವು ಡೋಕಾ ಲ ಪ್ರದೇಶದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಚೀನಾ ಹೇಳಿದೆ.
ಈ ಬಿಕ್ಕಟ್ಟು ಜಾಗತಿಕ ಸಮುದಾಯದ ಗಮನ ಸೆಳೆದಿದ್ದು, ಬೀಜಿಂಗ್ನಲ್ಲಿರುವ ರಾಜತಾಂತ್ರಿಕ ಸಮೂಹಕ್ಕೆ ಈ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ವಿವರಿಸಲಾಗಿದೆ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ.
‘‘ಭಾರತೀಯ ಗಡಿ ಸೈನಿಕರು ಗಡಿ ಅತಿಕ್ರಮಣ ಮಾಡಿರುವ ಘಟನೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ ಹಾಗೂ ಇದರಿಂದ ತಾವು ಆಘಾತಗೊಂಡಿದ್ದೇವೆ ಎಂಬುದಾಗಿ ಚೀನಾದಲ್ಲಿರುವ ಹೆಚ್ಚಿನ ರಾಯಭಾರ ಕಚೇರಿಗಳು ಹೇಳಿವೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘‘ಈ ಘಟನೆಯಲ್ಲಿ ವಾಸ್ತವಾಂಶಗಳು ನಿಚ್ಚಳವಾಗಿವೆ. ಚೀನಾ-ಭಾರತ ಗಡಿಯ ಸಿಕ್ಕಿಂ ವಿಭಾಗವನ್ನು ಇತ್ತಂಡಗಳೂ ಮಾನ್ಯ ಮಾಡಿವೆ. ಈ ಬಾರಿ ಭಾರತೀಯ ಗಡಿ ಸೈನಿಕರು ಚೀನಾ ಪ್ರದೇಶದೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ’’ ಎಂದರು.
ಚೀನಾ ದಾಳಿಯಲ್ಲಿ 158 ಭಾರತೀಯ ಸೈನಿಕರು ಮೃತಪಟ್ಟಿರುವ ಪಾಕ್ ಮಾಧ್ಯಮ ವರದಿ ಸುಳ್ಳು: ಚೀನಾ ಮಾಧ್ಯಮ
ಸಿಕ್ಕಿಂ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ನಡೆಸಿದ ದಾಳಿಗಳಲ್ಲಿ 158 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ ಎಂಬುದಾಗಿ ಪಾಕಿಸ್ತಾನದ ಕೆಲವು ಮಾಧ್ಯಮಗಳು ಮಾಡಿರುವ ವರದಿಗಳನ್ನು ಚೀನಾದ ಅಧಿಕೃತ ಮಾಧ್ಯಮ ‘ಪೀಪಲ್ಸ್ ಡೇಲಿ ಆನ್ಲೈನ್’ ‘ಆಧಾರರಹಿತ’ ಎಂದು ಮಂಗಳವಾರ ತಳ್ಳಿಹಾಕಿದೆ.
ಸೋಮವಾರ ಗಡಿಯಾಚೆಯಿಂದ ಚೀನಾ ನಡೆಸಿದ ರಾಕೆಟ್ ದಾಳಿಯಲ್ಲಿ ಈ ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂಬುದಾಗಿ ಪಾಕಿಸ್ತಾನದ ಉರ್ದು ಭಾಷೆಯ 24 ಗಂಟೆಗಳ ಸುದ್ದಿ ಚಾನೆಲ್ ‘ದುನಿಯಾ ನ್ಯೂಸ್’ ವರದಿ ಮಾಡಿತ್ತು.
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ವರದಿಯನ್ನು ನಿರಾಕರಿಸಿದೆ ಹಾಗೂ ಅದು ‘ದುರುದ್ದೇಶದ ಅಪಪ್ರಚಾರ’ ಎಂಬುದಾಗಿ ಬಣ್ಣಿಸಿದೆ.
ಪಾಕಿಸ್ತಾನಿ ಮಾಧ್ಯಮದ ವರದಿ ‘ಆಧಾರರಹಿತ’ ಎಂಬುದಾಗಿ ಚೀನಾದ ಪ್ರಧಾನವಾಹಿನಿಯ ಮಾಧ್ಯಮ ಸಂಸ್ಥೆಗಳು ಮಂಗಳವಾರ ಹೇಳಿವೆ ಎಂದು ಪೀಪಲ್ಸ್ ಡೇಲಿ ಆನ್ಲೈನ್ ಹೇಳಿದೆ.
ಚೀನಾದ ಇನ್ನೊಂದು ರಾಷ್ಟ್ರೀಯವಾದಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಕೂಡ, ಪಾಕಿಸ್ತಾನಿ ಮಾಧ್ಯಮದ ವರದಿಯನ್ನು ‘ಆಧಾರರಹಿತ’ ಮತ್ತು ‘ಸುಳ್ಳು’ ಎಂಬುದಾಗಿ ಬಣ್ಣಿಸಿದೆ.
ನಮ್ಮ ತಾಳ್ಮೆ ಅನಿರ್ದಿಷ್ಟ ಆಗಿರುವುದಿಲ್ಲ: ಚೀನಾ
ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ತನ್ನ ತಾಳ್ಮೆ ‘ಅನಿರ್ದಿಷ್ಟವಾಗಿರುವುದಿಲ್ಲ’ ಎಂಬುದಾಗಿ ಚೀನಾ ಕಳೆದ ವಾರ ಬೀಜಿಂಗ್ನಲ್ಲಿರುವ ವಿದೇಶಿ ರಾಜತಾಂತ್ರಿಕರಿಗೆ ಹೇಳಿದೆ ಎಂಬುದಾಗಿ ವರದಿಯಾಗಿದೆ.
ಇದಕ್ಕೆ ಪ್ರತಿಯಾಗಿ ಭಾರತವೂ ಹೊಸದಿಲ್ಲಿಯಲ್ಲಿರುವ ವಿದೇಶಿ ರಾಜತಾಂತ್ರಿಕರಿಗೆ ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನ ಮಾಡಲು ಭಾರತವು ರಾಜತಾಂತ್ರಿಕ ಸಂಪರ್ಕಗಳನ್ನೂ ಬಳಸುತ್ತಿದೆ ಎಂಬುದಾಗಿ ಭಾರತೀಯ ವಿದೇಶ ಸಚಿವಾಲಯ ಹೇಳಿದೆ.
ಡೋಕಾ ಲ ವಲಯದಲ್ಲಿ ಚೀನಾದ ನಿಯಂತ್ರಣದಲ್ಲಿರುವ ನೆಲದಲ್ಲಿ ರಸ್ತೆ ನಿರ್ಮಿಸಲು ಭಾರತ ಅಡ್ಡಗಾಲು ಹಾಕುತ್ತಿದೆ ಎಂಬುದಾಗಿ ಚೀನಾ ಆರೋಪಿಸಿದೆ.
ಆದರೆ, ಚೀನಾ ರಸ್ತೆ ನಿರ್ಮಿಸುವ ಜಾಗವು ಭೂತಾನಕ್ಕೆ ಸೇರಿದೆ ಎಂಬ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿದೆ.







