ಮುನ್ನೂರು: ಗ್ರಾಮಸಭೆ
ಕೊಣಾಜೆ, ಜು. 18: ಮುನ್ನೂರು ಗ್ರಾಮ ಪಂಚಾಯತ್ನ 2017-18ನೇ ಸಾಲಿನ ಮೊದಲ ಗ್ರಾಮ ಸಭೆಯು ಗ್ರಾಮಪಂಚಾಯತ್ನ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅವರು ಮುನ್ನೂರು ಗ್ರಾಮ ಪಂಚಾಯತ್ನ ಭಂಢಾರ ಬೈಲಿನಲ್ಲಿ ಆರಂಭ ಗೊಂಡಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ದೊಡ್ಡ ಪ್ರಮಾಣದ ಕಸವನ್ನು ವಿಲೇವಾರಿ ನಡೆಸಲು ಸ್ಥಳಾವಕಾಶದ ಕೊರತೆಯಿದ್ದು ಗ್ರಾಮಸ್ಥರು ಇದಕ್ಕೆ ಸಹಕರಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವಾರಕ್ಕೊಮ್ಮೆ ಕಸ ವಿಲೇವಾರಿ ವಾಹನಕ್ಕೆ ನೀಡಬೇಕೆಂದು ಹೇಳಿದರು.
ಕಳೆದ ಗ್ರಾಮಸಭೆಯಲ್ಲೂ ಗ್ರಾಮದಲ್ಲಿ ಕಾಡುತ್ತಿದ್ದ ಜಟಿಲ ಸಮಸ್ಯೆಯಾದ ಕಸವಿಲೇವಾರಿ ಬಗ್ಗೆ ಎಲ್ಲರೂ ಒಕ್ಕೊರಳಿಂದ ಧ್ವನಿಯೆತ್ತಿದ್ದೆವು.ಎಲ್ಲರ ಬೇಡಿಕೆಯನ್ವಯ ಗ್ರಾಮದ ಭಂಡಾರ ಬೈಲಿನಲ್ಲಿ ಕಸ ವಿಲೇವಾರಿ ಘಟಕವು ಕಾರ್ಯಾರಂಭ ನಡೆಸಿದ್ದು ಎಲ್ಲರಿಗೂ ಸಂತಸದ ವಿಚಾರವಾಗಿದೆ. ಘಟಕವು ಸಣ್ಣದಾಗಿರುವುದರಿಂದ ಗ್ರಾಮದ ಎಲ್ಲಾ ಕಸವನ್ನು ವಿಲೇವಾರಿ ನಡೆಸಲು ಕಷ್ಟ ಸಾಧ್ಯವಾಗಿದ್ದು, ಕಸ ವಿಲೇವಾರಿಯ ಗುತ್ತಿಗೆ ನೀಡುವ ಟೆಂಡರು ಪ್ರಕ್ರಿಯೆ ಪ್ರಗತಿಯಲ್ಲಿದ್ದು ಎಲ್ಲರ ಸಹಕಾರದೊಂದಿಗೆ ಮುನ್ನೂರು ಗ್ರಾಮವನ್ನು ಸ್ವಚ್ಚ ಮಾದರಿ ಗ್ರಾಮವನ್ನಾಗಿಸೋಣ ಎಂದು ಕರೆ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವಂತಹ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪಾ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಸಮನ್ವಯಾಧಿಕಾರಿ ದುರ್ಗಾಲತಾ ಅವರು ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ತಾ.ಪಂ ಸದಸ್ಯೆ ವಿಲ್ಮಾ ಡಿಸೋಜಾ, ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಭಂಡಾರಮನೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಡಿ ಮೊದಲಾದವರು ಉಪಸ್ಥಿತರಿದ್ದರು.
ಜನಸ್ನೇಹಿ ಸಂವಾದ ನಡೆಸಿ:
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶಾಂತಿ ಕದಡುವ ದುಷ್ಕೃತ್ಯಗಳು ನಡೆಯುತ್ತಲೇ ಇವೆ.ಅದರಲ್ಲೂ ಮುನ್ನೂರು, ನೆರೆಯ ಅಂಬ್ಲಮೊಗರು ಗ್ರಾಮದಲ್ಲಿ ಎರಡು ಬಾರಿ ಇರಿತ ಪ್ರಕರಣಗಳು ನಡೆದಿದ್ದು ಪ್ರದೇಶದ ಜನರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮಗಳಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸಮನ್ವಯತೆಯಿಂದಿರುವ ನಿಟ್ಟಿನಲ್ಲಿ ಉಳ್ಳಾಲ ಪೊಲೀಸರು ಆದಷ್ಟು ಬೇಗನೆ ಜನಸ್ನೇಹಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿಯವರು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.
ತೆಂಗಿನ ಮರಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಇಲ್ಲವೇ:
ಈಗಾಗಲೇ ಉಳ್ಳಾಲ, ತೊಕ್ಕೊಟ್ಟು,ಕಲ್ಲಾಪು ಪ್ರದೇಶಗಳ ತೆಂಗಿನ ಮರಗಳು ಕಪ್ಪು ತಲೆ ಹುಳಗಳ ಭಾಧೆಯಿಂದ ಸಂಪೂರ್ಣ ನಶಿಸಿ ಹೋಗಿದ್ದು, ರೋಗವು ನಮ್ಮ ಗ್ರಾಮಕ್ಕೆ ಹರಡದಂತೆ ಏನಾದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೀರ ಎಂದು ತೆಂಗು ಬೆಳೆಗಾರರಾದ ಬಾಬು ಶೆಟ್ಟಿಯವರು ತೋಟಗಾರಿಕಾ ಇಲಾಖಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಯು ಕಲ್ಲಾಪು, ತೊಕ್ಕೊಟ್ಟು ಪ್ರದೇಶದ ಸಂತ್ರಸ್ಥರಿಗೆ ತೆಂಗು ಬೆಳೆ ಪುನಶ್ಚೇತನ ಸ್ಕೀಮಿನಡಿ ಪರಿಹಾರ ನೀಡುತ್ತಿದ್ದು, ಮುನ್ನೂರು ಗ್ರಾಮಕ್ಕೆ ರೋಗ ಭಾಧಿಸದಂತೆ ಮರಗಳಿಗೆ ಪರೋಪ ಜೀವಿ ಹುಳುಗಳನ್ನು ಬಿಡಲಾಗುವುದು. ಸದ್ಯ ಪರೋಪ ಜೀವಿಗಳ ಉತ್ಪತ್ತಿಯಿಲ್ಲದಿರುವುದರಿಂದ ಮಳೆಗಾಲ ಕಳೆದ ನಂತರ ತೆಂಗು ಬೆಳೆಗಾರರಿಗೆ ಪರೋಪ ಜೀವಿ ಹುಳಗಳನ್ನು ನೀಡಲಾಗುವುದೆಂದು ಹೇಳಿದರು.





.jpg.jpg)



