ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಕಡಬ ಸೈಂಟ್ ಆ್ಯನ್ಸ್ ಮುಖ್ಯೋಪಾಧ್ಯಾಯರಿಂದ ದಬ್ಬಾಳಿಕೆ ಆರೋಪ

ಕಡಬ, ಜು.20. ಕಡಬದ ಪ್ರತಿಷ್ಠಿತ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಸೈಂಟ್ ಆ್ಯನ್ಸ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿ ಸಂಸ್ಥೆಯ ಸಂಚಾಲಕರಾದ ಫಾ ರೊನಾಲ್ಡ್ ಲೋಬೋ ರವರಲ್ಲಿ ದೂರಿಕೊಂಡ ಘಟನೆ ಗುರುವಾರದಂದು ನಡೆದಿದೆ.
ಸೈಂಟ್ ಆ್ಯನ್ಸ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ ಪೌಲ್ ಡಿ. ಕ್ರಾಸ್ತಾರ ಹಾಗೂ ಸಿಸ್ಟರ್ ಜೆಸಿಂತಾ ರೋಡ್ರಿಗಸ್ ರವರು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕ ವೃಂದವನ್ನು ಅವಹೇಳಿಸುತ್ತಿದ್ದಾರೆ. ಅಲ್ಲದೆ ಅವರನ್ನು ವಿನಾಕಾರಣ ದಂಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಪೋಷಕ ವೃಂದ ಈ ಹಿಂದಿನ ಕೆಲವು ಸಂಚಾಲಕರು ಶಾಲೆಯನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿದ್ದು, ಆದರೆ ಇವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಕಳೆದ ವರ್ಷ ಇವರು ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದರು. ಹೇಳಿಕೊಳ್ಳುಲು ಶಾಲೆಯಲ್ಲಿ ಹಿರಿಯ ಅಧಿಕಾರಿಗಳಿಲ್ಲದ ಕಾರಣದಿಂದ ಮತ್ತು ಶಾಲೆಯ ಹೆಸರು ಹಾಳಾಗುವುದು ಬೇಡವೆನ್ನುವ ಉದ್ದೇಶದಿಂದ ಅವರಲ್ಲಿ ಸುಮ್ಮನಿರುವಂತೆ ಮನವಿ ಮಾಡುತ್ತಿದ್ದೆವು. ಇದೀಗ ಅವರು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕ ವೃಂದವನ್ನು ಕಾಡಿಸುತ್ತಿದ್ದು, ಇಲ್ಲಿನ ಸಮಸ್ಯೆಯನ್ನು ಕ್ಯಾಥೋಲಿಕ್ ಬೋರ್ಡ್ಗೆ ತಿಳಿಸಿ ಇವರಿಬ್ಬರನ್ನು ಕಡಬದಿಂದ ವರ್ಗಾಯಿಸಬೇಕು. ಒಂದು ದಿನದಲ್ಲಿ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಾದ ಜಯಚಂದ್ರ ರೈ ಕುಂಟೋಡಿ, ಅಶ್ರಫ್ ಶೇಡಿಗುಂಡಿ, ಜಯರಾಮ ಗೌಡ ಆರ್ತಿಲ, ಶರೀಫ್ ಬದ್ರಿಯಾ, ಸತೀಶ್ ನಾಯ್ಕಿ ಮೇಲಿನಮನೆ, ಪುತ್ತುಮೋನು ಅನ್ನಡ್ಕ, ಸಂತೋಷ್ ಸೀತಾರಾಮ ಉಷಾ ಸ್ಟುಡಿಯೋ, ಅಯ್ಯೂಬ್ ಹಿಂದುಸ್ಥಾನ್ ಮೊದಲಾದವರು ಉಪಸ್ಥಿತರಿದ್ದರು.







