ದಸರಾದಲ್ಲೂ ರಾಜಕೀಯ ಬೆರೆಯುತ್ತಿರುವುದು ವಿಷಾದನೀಯ: ಪಿ.ಎಂ.ರವಿ

ಮಡಿಕೇರಿ, ಜು.23: ಮಾತು ಮನೆ ಕೆಡೆಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನಂತೆ ದಸರಾ ಬೈಲಾ ತಿದ್ದುಪಡಿ ಸಭೆ ಕೇವಲ ಆರೋಪ ಪ್ರತ್ಯಾರೋಪದಿಂದ ಮೊಟಕು ಗೊಂಡಿರುವುದು ವಿಷಾದನೀಯವೆಂದು ತಿಳಿಸಿರುವ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದಸರಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಪಿ.ಎಂ.ರವಿ, ನಾಡಹಬ್ಬ ದಸರಾದಲ್ಲೂ ರಾಜಕೀಯ ಬೆರೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಪಿ.ಎಂ.ರವಿ, ನಾಡಹಬ್ಬ ದಸರಾ ಎಲ್ಲರೂ ಒಗ್ಗೂಡಿ ಆಚರಿಸಬೇಕಾದ ಹಬ್ಬವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ವಾದ, ಪ್ರತಿವಾದ, ವಿವಾದಗಳನ್ನು ಸೃಷ್ಟಿಸುತ್ತಿರುವುದು ಬೇಸರದ ವಿಚಾರವಾಗಿದೆ. ದಸರಾ ಸಭೆಯಲ್ಲಿ ಗುಂಪುಗಾರಿಕೆ ಮತ್ತು ರಾಜಕೀಯ ಪ್ರವೇಶವಾಗಿರುವುದು ಸ್ಪಷ್ಟವಾಗುತ್ತಿದೆ. ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ಗಲಾಟೆಯಿಂದ ಮಡಿಕೇರಿ ಜನತೆ ತಲೆ ತಗ್ಗಿಸುವಂತ್ತಾಗಿದ್ದು, ಇದೀಗ ದಸರಾ ಸಭೆಯಲ್ಲೂ ಇದೇ ಬೆಳವಣಿಗೆ ಕಂಡು ಬರುತ್ತಿರುವುದು ಅಪಮಾನಕಾರಿ ಎಂದು ಪಿ.ಎಂ.ರವಿ ಟೀಕಿಸಿದ್ದಾರೆ.
ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮನೋಸ್ಥಿತಿಗಳು ಕಾರ್ಯಪ್ರವೃತ್ತವಾಗಬೇಕೆ ಹೊರತು ಸ್ವಪ್ರತಿಷ್ಠೆಗಾಗಿ ದಸರಾವನ್ನು ಬಳಸಿಕೊಳ್ಳುವುದು ಸರಿಯಲ್ಲ. ಕೇವಲ ಸ್ಥಾನಮಾನಕ್ಕಾಗಿ ದಸರಾ ಸಭೆಯಲ್ಲೂ ಹೋರಾಟ ಮನೋಭಾವ ಪ್ರದರ್ಶನ ಯಾರಿಗೂ ಶೋಭೆ ತರುವುದಿಲ್ಲ. ನಾಡಿಗೇ ಮಾದರಿಯಾಗಿರುವ ಮಡಿಕೇರಿ ದಸರಾ ಆಚರಣೆಯನ್ನು ಅರ್ಥಪೂರ್ಣಗೊಳಿಸಲು ಆರೋಗ್ಯಕರ ಚರ್ಚೆಯ ಅಗತ್ಯವಿದೆಯೇ ಹೊರತು ಹಾದಿ ತಪ್ಪುವ ಬೆಳವಣಿಗೆಗಳನ್ನು ಜನ ಒಪ್ಪುವುದಿಲ್ಲ. ಮಡಿಕೇರಿ ದಸರಾ ಜನರಿಂದ ಜನರಿಗಾಗಿ ನಡೆಯುತ್ತಿದೆಯೇ ಹೊರತು ಕೆಲವು ವ್ಯಕ್ತಿಗಳಿಗೆ ಸೀಮಿತವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೈಲಾ ತಿದ್ದುಪಡಿ ವಿಚಾರ ದಸರಾ ಸಮಿತಿ ಮಾತ್ರವಲ್ಲದೆ ಸಮಿತಿಯ ಪೋಷಕರು, ಮಹಾಪೋಷಕರ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು. ಜಿಲ್ಲೆಯ ಶಾಸಕರು. ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಬೈಲಾ ತಿದ್ದುಪಡಿ ಸಭೆ ನಡೆಸುವುದು ಸೂಕ್ತವೆಂದು ಪಿ.ಎಂ.ರವಿ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿಯೇ ಅತೀ ವಿಜೃಂಭಣೆಯಿಂದ ನಡೆಯುವ ಮಡಿಕೇರಿ ದಸರಾಕ್ಕೆ ಹೊರ ಜಿಲ್ಲೆಯಿಂದಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಜಿಲ್ಲೆಯ ಜನತೆ ಪ್ರಜ್ಞಾವಂತರು ಹಾಗೂ ಶಾಂತಿ ಪ್ರಿಯರು ಎನ್ನುವ ಮಾತಿದೆ. ಈ ಗೌರವವನ್ನು ಉಳಿಸಿಕೊಳ್ಳುವ ಜವಬ್ದಾರಿ ಜಿಲ್ಲೆಯ ಪ್ರತಿಯೊಬ್ಬರ ಮೇಲಿದೆ. ದಸರಾ ಸಮಿತಿಯ ಮುಂದಿನ ಸಭೆಯನ್ನು ಅರ್ಥಪೂರ್ಣಗೊಳಿಸಲು ಸರ್ವರು ಸಹನೆಯಿಂದ ಸಹಕರಿಸುವ ಅಗತ್ಯವಿದೆ ಎಂದು ರವಿ ತಿಳಿಸಿದ್ದಾರೆ.







