7 ನಿಮಿಷದಲ್ಲಿಯೇ ಆಸ್ಪತ್ರೆ ತಲುಪಿಸಿದ ಏರ್ ಆ್ಯಂಬುಲೆನ್ಸ್

ಬೆಂಗಳೂರು, ಜು.24: ತುರ್ತು ಚಿಕಿತ್ಸೆಗಾಗಿ ಎರಡು ತಿಂಗಳ ಮಗುವನ್ನು 7 ನಿಮಿಷದಲ್ಲಿಯೇ ಆಸ್ಪತ್ರೆಗೆ ತಲುಪಿಸುವಲ್ಲಿ ಏರ್ ಆ್ಯಂಬುಲೆನ್ಸ್ ಯಶಸ್ವಿಯಾಗಿದೆ.
ಸೋಮವಾರ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಗೆ ಕೇವಲ 7 ನಿಮಿಷಗಳಲ್ಲಿ ಮಗುವನ್ನ ಸ್ಥಳಾಂತರಿಸಲಾಯಿತು. ಎರಡು ತಿಂಗಳ ಮಗುವು ಶ್ವಾಸಕೋಶ ತೊಂದರೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಎರಡು ದಿನಗಳಿಂದ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ತ್ವರಿತ ಮತ್ತು ಹೆಚ್ಚಿನ ಚಿಕಿತ್ಸೆಗೆಗಾಗಿ ಮಗುವನ್ನು ನಾರಾಯಣ ಹೆಲ್ತ್ ಸಿಟಿಗೆ ಸ್ಥಳಾಂತರಿಸಬೇಕಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಗುವನ್ನು ದಾಖಲಿಸಿಕೊಂಡಿರುವ ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಚಿಕಿತ್ಸೆಗ ಆರಂಭಿಸಿದ್ದು, ಮಗು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಶೀಘ್ರವೇ ಮಗುವನ್ನು ಗುಣಮುಖವಾಗಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಮಗುವನ್ನು ಅಷ್ಟು ಬೇಗ ರಸ್ತೆ ಮಾರ್ಗವಾಗಿ ಆಸ್ಪತ್ರೆಗೆ ಸಾಗಿಸುವುದು ಕಷ್ಟವೇ ಆಗಿತ್ತು. ಆಗ ಮಗುವಿನ ಪೋಷಕರು ಏರ್ ಆ್ಯಂಬುಲೆನ್ಸ್ ಸಹಾಯ ಪಡೆದು ಕೇವಲ 7 ನಿಮಿಷಗಳಲ್ಲಿ ಮಗುವನ್ನು ರವಾನಿಸಿದ್ದಾರೆ. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ್ದರು.







