ಸೆ.21 ರಿಂದ 30ರವರೆಗೆ ಪ್ರಸಕ್ತ ಸಾಲಿನ ಮೈಸೂರು ದಸರಾ: ಸಿದ್ದರಾಮಯ್ಯ

ಬೆಂಗಳೂರು, ಜು.24: ಪ್ರಸಕ್ತ ಸಾಲಿನ ಮೈಸೂರು ದಸರಾವನ್ನು ಸೆ.21 ರಿಂದ 30ರವರೆಗೆ ಸಾಂಪ್ರದಾಯಿಕ ಹಾಗೂ ಆಕರ್ಷಣೀಯವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ದಸರಾ ಆಚರಣೆ 2017 ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸೆ.21ರಂದು ಬೆಳಗ್ಗೆ ದಸರಾ ಉದ್ಘಾಟನೆಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಅಂದೇ ಚಾಲನೆ ನೀಡಲಾಗುವುದು. ನವರಾತ್ರಿಯು ಸೆ.29ರಂದು ಅಂತ್ಯ ಗೊಳ್ಳುತ್ತದೆ ಎಂದು ಅವರು ಹೇಳಿದರು. ವಿಜಯ ದಶಮಿ ಅಂಗವಾಗಿ ಸೆ.30ರಂದು ಮಧ್ಯಾಹ್ನ 1.15 ಕ್ಕೆ ನಂದಿ ಪೂಜೆ, 3.15ಕ್ಕೆ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರನ್ನು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ದಸರಾ ಉತ್ಸವದ ಪ್ರಚಾರದ ಉಸ್ತುವಾರಿಯನ್ನು ಪ್ರಿಯಾಂಕ್ ಖರ್ಗೆಗೆ ವಹಿಸಲಾಗಿದೆ. ಈ ಬಾರಿ ಜಿಲ್ಲಾ ಪಂಚಾಯತ್ ಗಳ ಮಳಿಗೆಗಳನ್ನು ತೆರೆಯುವ ಬದಲು, ರಾಜ್ಯ ಸರಕಾರದ ಪ್ರಮುಖ 15-30 ಇಲಾಖೆಗಳ ಸಾಧನೆಗಳು, ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ದಸರಾ ಮಹೋತ್ಸವವು ಸುಂದರ, ಆಕರ್ಷಕ, ಸಾಂಪ್ರದಾಯಿಕವಾಗಿ ನಮ್ಮ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಇರಬೇಕು. ದೇಶ ವಿದೇಶಗಳಿಂದ ಬರುವ ಜನರಿಗೆ ಹೆಚ್ಚು ಆಕರ್ಷಣೀಯ ವಾಗಿ ದಸರಾ ಕಾಣುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಜಂಬೂ ಸವಾರಿ ಹಾದು ಹೋಗುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಮೈಸೂರಿನ ಇತರೆ ರಸ್ತೆಗಳನ್ನು ದಸರಾ ಆರಂಭವಾಗುವುದಕ್ಕಿಂತ ಮುಂಚೆ ಗುಂಡಿ ಮುಕ್ತ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವಂತೆ ಮೈಸೂರು ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ದಸರಾ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ರಾಜ್ಯದ ಕಲಾ ತಂಡಗಳೊಂದಿಗೆ, ಬೇರೆ ರಾಜ್ಯಗಳ ವಿಶಿಷ್ಟ ಕಲಾ ತಂಡಗಳನ್ನು ಸೇರಿಸಿಕೊಳ್ಳುವಂತೆ ಹೇಳಿದ್ದೇನೆ. ಮೆರವಣಿಗೆ ಆಕರ್ಷಕವಾಗಿರಬೇಕು. ನಮ್ಮ ನಾಡು ಹಾಗೂ ದೇಶದ ಸಂಸ್ಕೃತಿ ಬಿಂಬಿಸುವಂತಿರಬೇಕು ಎಂದು ಅವರು ತಿಳಿಸಿದರು.
ಕಳೆದ ಬಾರಿ ದಸರಾ ಆಚರಣೆಗೆ 13.25 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಬಾರಿ 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ 10.90 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಉಳಿದ ಹಣ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸೆ.27ರಂದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಇದ್ದು, ಅದನ್ನು ಮೈಸೂರಿನಲ್ಲಿ ದಸರಾ ಸಂದರ್ಭದಲ್ಲೇ ಆಚರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬ ಜವಾಬ್ದಾರಿಯನ್ನು ಉನ್ನತಮಟ್ಟದ ಸಮಿತಿ ನನಗೆ ನೀಡಿದೆ. 8-10 ಹೆಸರು ನಮ್ಮ ಪರಿಶೀಲನೆಯಲ್ಲಿದ್ದು ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.







