ನಕಲಿ ಜ್ಯೋತಿಷಿಯ ಬಂಧನ
ಮಂಗಳೂರು, ಜು. 24: ಜ್ಯೋತಿಷ್ಯ ಶಾಸ್ತ್ರದ ಮೂಲಕ ವಶೀಕರಣ ಮಾಡಿ ಜನರಿಗೆ ಸಾವಿರಾರು ರೂ. ವಂಚಿಸಿದ ನಕಲಿ ಜ್ಯೋತಿಷಿ ಮಂಜುನಾಥ ಯಾನೆ ಲಕ್ಷ್ಮಣ್ ರಾವ್ (27) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ, ಹಣಕಾಸಿನ ತೊಂದರೆ, ಮಾಂಗಲ್ಯ ಭಾಗ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನೆಪದಲ್ಲಿ ಜನರಿಂದ ಸಾವಿರಾರು ರೂ. ಪಡೆದು ವಂಚಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಮೂಲತಃ ರಾಯಚೂರು ಜಿಲ್ಲೆಯವನಾದ ಮಂಜುನಾಥ ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನಲ್ಲಿ ನೆಲೆಸಿದ್ದು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತಿದ್ದ. ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದ ಜನರಿಂದ ಹಣವನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಈತನ ಜೊತೆಗೆ ಹನುಮಂತರಾವ್ ಎಂಬಾತನೂ ಇದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story