ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸಲ್ಲ: ಮುಖ್ಯಮಂತ್ರಿ

ಬೆಂಗಳೂರು, ಜು.25: ಪೊಲೀಸ್ ಇಲಾಖೆಯಲ್ಲಿ ಯಾವುದೆ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ. ಒಂದು ವೇಳೆ ಅಶಿಸ್ತು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಹಿಂದೇಟು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬೀದರ್ನಿಂದ ಬೆಂಗಳೂರಿನವರೆಗೆ ಜು.12 ರಿಂದ 25ರವರೆಗೆ ಹಮ್ಮಿಕೊಂಡಿದ್ದ 1750 ಕಿ.ಮೀ.ಗಳ ‘ಕರ್ನಾಟಕ ದರ್ಶನ ಸೈಕಲ್ ಜಾಥಾ’ದ ಮುಕ್ತಾಯ ಸಮಾರಂಭ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಲಾಗಿತ್ತು.
ಸಶಸ್ತ್ರ ಮೀಸಲು ಪಡೆಯ ಪೊಲೀಸರ ಮೇಲೆ ಹೆಚ್ವಿನ ಒತ್ತಡ ಇರುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಸಮಾಜದಲ್ಲಿ ಅನೇಕ ಉತ್ತಮ ಶಕ್ತಿಗಳ ಜೊತೆಗೆ ದುಷ್ಟ ಶಕ್ತಿಗಳು ಇರುತ್ತವೆ. ದುಷ್ಟ ಶಕ್ತಿಗಳಿಂದ ಸಮಾಜವನ್ನು ಕಾಪಾಡುವ ಜವಾಬ್ದಾರಿಯೂ ಇದೆ ಎಂದು ಸಿದ್ದರಾಮಯ್ಯ ಹೇಳಿದರು. ಸಮಾಜದಲ್ಲಿ ಶಾಂತಿ ಮೂಡಿಸುವ ಸಂದರ್ಭದಲ್ಲಿ ಪೊಲೀಸರು ಕಠಿಣವಾಗಿ ವರ್ತಿಸಬೇಕಾಗುತ್ತದೆ. ಆದರೆ, ಸಾರ್ವಜನಿಕರೊಂದಿಗೆ ಮಧುರ ಬಾಂಧವ್ಯ ಇರಿಸಿಕೊಳ್ಳುವುದು ಅಷ್ಟೇ ಮುಖ್ಯ. ಪೊಲೀಸರಲ್ಲಿ ಆತ್ಮಸ್ಥೈರ್ಯ ಮುಖ್ಯ. ಅದು ಇರಬೇಕಾದರೆ ಪೊಲೀಸರು ಸಮಾಜಮುಖಿ ಜೊತೆಗೆ ಕ್ರಿಯಾಶೀಲರಾಗಿ ಇರಬೇಕು ಎಂದು ಅವರು ತಿಳಿಸಿದರು.
ಸೈಕಲ್ ಜಾಥಾ ಸಂದರ್ಭದಲ್ಲಿ ಪೊಲೀಸರು ಎರಡು ಸಾವಿರ ಹಳ್ಳಿಗಳಿಗೆ ಹೋಗಿದ್ದಾರೆ. ಮಂದಿರ, ಮಸೀದಿ, ಚರ್ಚ್, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಸಮಾಜದಲ್ಲಿರುವವರ ಬದುಕಿನ ದರ್ಶನವೂ ಆಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಪೊಲೀಸ್ ಇಲಾಖೆಯ ಪೇದೆಗಳಲ್ಲಿ ಉತ್ತರ ಕರ್ನಾಟಕದವರ ಸಂಖ್ಯೆ ಹೆಚ್ಚು. ಯಾರೆ ಆಗಿರಲಿ, ಕರ್ತವ್ಯ ಮುಖ್ಯ. ಪೊಲೀಸರು ಖಿನ್ನತೆಗೆ ಒಳಗಾಗಬಾರದು. ಹೀಗಾಗಿ ಅವರನ್ನು ಚಟುವಟಿಕೆಯಲ್ಲಿಡಬೇಕು. ಸೈಕಲ್ ಜಾಥಾ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಲ ಕಾಲಕ್ಕೆ ಆಯೋಜಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಪೊಲೀಸರು ಸಾಹಸ ಪ್ರವೃತ್ತಿ ಬೆಳೆಸಿಕೊಂಡರೆ ಎಂಥದ್ದೇ ಕಠಿಣ ಪರಿಸ್ಥಿತಿ ಎದರಿಸಲು ಮಾನಸಿಕ ಸ್ಥೈರ್ಯ ಸಿಗುತ್ತದೆ. ಪೊಲೀಸರು ದೈಹಿಕವಾಗಿ ಸದೃಢವಾಗಿರಬೇಕು. ಹೊಟ್ಟೆ ಬೆಳೆಸಿಕೊಳ್ಳಬಾರದು. ಕರ್ತವ್ಯದಲ್ಲಿ ಅದನ್ನು ಒಂದು ಭಾಗವಾಗಿ ಇಟ್ಟುಕೊಳ್ಳಬೇಕು. ಆಗ ಯಾವುದೇ ಪರಿಸ್ಥಿತಿ ಎದುರಿಸಲು ನಿಮಗೆ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸ್ಪಂದಿಸುವುದು ಹಿರಿಯ ಅಧಿಕಾರಿಗಳ ಕರ್ತವ್ಯಗಳ ಒಂದು ಭಾಗ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ಕುಮಾರ್ ದತ್ತ ಮಾತನಾಡಿ, ಕೆಎಸ್ಆರ್ಪಿ ಸೈಕಲಿಸ್ಟ್ ಕ್ರೀಡಾಪಟುಗಳು ಜು.12ರಂದು ಬೀದರ್ನಿಂದ ಪ್ರಾರಂಭಿಸಿ 14 ದಿನಗಳಕಾಲ 1750 ಕಿ.ಮೀ ಕ್ರಮಿಸಿ ಮಾಗಡಿ ಮೂಲಕ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧವನ್ನು ಇಂದು ಪ್ರವೇಶಿಸಿದ್ದಾರೆ ಎಂದರು.
ಸಾಮಾಜಿಕ ಐಕ್ಯತೆ, ಪೊಲೀಸ್ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ, ಪರಿಸರ ರಕ್ಷಣೆ, ಕ್ರೀಡಾ ಮನೋಭಾವ, ಸ್ವಚ್ಛತೆ ಇವುಗಳ ಕುರಿತು ಜಾಥಾದುದ್ದಕ್ಕೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಒಟ್ಟು 28 ಜಿಲ್ಲೆಗಳನ್ನು ಕ್ರಮಿಸಿದ್ದಾರೆ ಎಂದು ಅವರು ವಿವರಿಸಿದರು.
ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದ 59 ಮಂದಿ ಪೊಲೀಸ್ ಕ್ರೀಡಾಪಟುಗಳು ಮತ್ತು ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ರಾವ್ ಸೇರಿದಂತೆ ಪೊಲೀಸ್ ಅಧಿಕಾರಿಗಳಾದ ಅಯ್ಯಪ್ಪ ಮತ್ತು ಸಮಂತ್ರನ್ನು ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಸನ್ಮಾನಿಸಿ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಿದರು.
ಕ್ರೀಡಾ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮದ್ವರಾಜ್, ಇದೇ ಸಂದರ್ಭದಲ್ಲಿ ಕೆಎಸ್ಆರ್ಪಿಗೆ 5 ಲಕ್ಷ ರೂ.ಗಳ ಚೆಕ್ಕನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಗೃಹಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೊಟ್ಟೆ ಬೆಳೆಸಿಕೊಳ್ಳಬೇಡಿ
ಕೆಲವು ಪೊಲೀಸರು ನಮ್ಮಂತೆ ಹೊಟ್ಟೆ ಬೆಳೆಸಿಕೊಂಡಿರುತ್ತಾರೆ. ಅದು ಸರಿಯಲ್ಲ. ಒಮ್ಮೆ ಸಚಿವ ಪ್ರಮೋದ್ ಮಧ್ವರಾಜ್ಗೆ ಯಾವತ್ತಾದರೂ ಕುದುರೆ ಸವಾರಿ ಮಾಡಿದ್ದೀಯಾ ಎಂದು ಕೇಳಿದ್ದೆ. ಆಗ, ಊಟಿಗೆ ಹೋದಾಗ ಕುದುರೆ ಮೇಲೆ ಹತ್ತಿದ್ದೆ. ಆದರೆ, ನಾನು ಹತ್ತಿದ ಕೂಡಲೆ ಕುದುರೆ ಬಿದ್ದೋಯಿತು ಸಾರ್ ಎಂದಿದ್ದನ್ನು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡರು.







