ಜಿಎಸ್ಟಿ ಕರಡು ಜನರ ಮುಂದಿಡುವಲ್ಲಿ ಜನಪ್ರತಿನಿಧಿಗಳು ವಿಫಲ: ಗುಜ್ಜಾಡಿ ಪ್ರಭಾಕರ ನಾಯಕ್

ಉಡುಪಿ, ಜು.25: ಜಿಎಸ್ಟಿ ತೆರಿಗೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ತಿದ್ದುಪಡಿ ತರುವ ಮೊದಲು ಕೇಂದ್ರ ಸರಕಾರ ಅದರ ಕರಡು ಪ್ರತಿಯನ್ನು ಜನರ ಮುಂದೆ ಇಟ್ಟು ಆರು ತಿಂಗಳ ಕಾಲಾವಕಾಶವನ್ನು ನೀಡಿತ್ತು. ಆದರೆ ಶಾಸಕರು, ಸಂಸದರು ತಮ್ಮ ಕರ್ತವ್ಯವನ್ನು ಮರೆತು ಹೊಸ ಕಾನೂನು ಅನುಷ್ಠಾನದ ಬಗ್ಗೆ ಗಮನ ಕೊಡಲಿಲ್ಲ. ಇದನ್ನು ಜನರ ಮುಂದೆ ಇಡುವ ಕೆಲಸ ಮಾಡಲಿಲ್ಲ. ಇದರಿಂದ ಗ್ರಾಹಕರಿಗೆ ಬೇಕಾದ ರೀತಿಯ ತೆರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಆರೋಪಿಸಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ಮಂಗಳವಾರ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಆಯೋಜಿಸಲಾದ ಜಿಎಸ್ಟಿ ಕುರಿತ ಮಾಹಿತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಸಾರ್ವಜನಿಕರ ಯಾವುದೇ ಆಕ್ಷೇಪ ಬಾರದ ಕಾರಣ ಸರಕಾರ ಈ ಕರಡನ್ನು ಯಥಾವತ್ತಾಗಿ ಜಾರಿಗೆ ತಂದಿತ್ತು. ಆದರೆ ಈಗ ಕೆಲವರು ವಸ್ತುಗಳಿಗೆ ತೆರಿಗೆ ವಿಧಿಸಿರುವುದಕ್ಕೆ ಬೊಬ್ಬೆ ಹಾಕುತ್ತಿದ್ದಾರೆ ಎಂದು ಟೀಕಿಸಿದ ಅವರು, ಜುಲೈ ತಿಂಗಳ ಕೊನೆಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ಸೇರಲಿದ್ದು, ಅದರಲ್ಲಿ ಕೆಲ ವೊಂದು ತಿದ್ದುಪಡಿ ತರುವ ಮೂಲಕ ಗ್ರಾಹಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದರು.
ಜಿಎಸ್ಟಿ ವ್ಯವಸ್ಥೆಯಲ್ಲಿ ಸಾಮಾನ್ಯ ದಿನಬಳಕೆ ವಸ್ತುಗಳ ಮೇಲೆ ಶೇ.5, ಕೈಗಾರಿಕಾ ವಸ್ತುಗಳ ಮೇಲೆ ಶೇ.12, ವಿಲಾಸಿ ವಸ್ತುಗಳ ಮೇಲೆ ಶೇ.18 ಹಾಗೂ ಜನ ಹೆಚ್ಚು ಬಳಕೆ ಮಾಡದಂತಹ ವಸ್ತುಗಳ ಮೇಲೆ ಶೇ.28ರಷ್ಟು ಮತ್ತು ಚಿನ್ನಾಭರಣ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಯಂತೆ ಶೇ.3ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಎಸ್ಟಿ ಜಾರಿಗೆ ಬರುವ ಅಂದರೆ ಜೂ.30ರ ಮೊದಲು ಉತ್ಪಾದನೆ ಯಾಗಿ ಮಾರುಕಟ್ಟೆಯಲ್ಲಿರುವ ವಸ್ತುಗಳ ಮೇಲಿನ ತೆರಿಗೆ ವಿಚಾರವು ಇದೀಗ ಗೊಂದಲದಲ್ಲಿದ್ದು, ಇದು ದಾಸ್ತಾನು ಖಾಲಿಯಾಗುವವರೆಗೆ ಮುಂದುವರೆಯ ಲಿದೆ. ಮುಂದೆ ಎಲ್ಲ ಗೊಂದಲ ನಿವಾರಣೆಯಾಗಿ ಗ್ರಾಹಕರಿಗೆ ಲಾಭವಾಗುವ ದರ ಬರಲಿದೆ ಎಂದರು.
ತೆರಿಗೆ ಮೇಲಿನ ತೆರಿಗೆ ಪದ್ಧತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನೂತನ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಕೆಲ ವಸ್ತುಗಳ ದರ ಕಡಿಮೆ ಆಗಲಿದೆ. ಆದರೆ ಇದರ ಲಾಭ ಗ್ರಾಹಕರಿಗೆ ತಕ್ಷಣಕ್ಕೆ ಸಿಗುವುದು ಕಷ್ಟ. ಸ್ವಲ್ಪ ಸಮಯ ಬೇಕಾಗುತ್ತದೆ. ಸದ್ಯಕ್ಕೆ ಕೇಂದ್ರ ಸರಕಾರ ಜಿಎಸ್ಟಿಯಿಂದ ಗ್ರಾಹಕರಿಗೆ ಆಗುವ ಲಾಭವನ್ನು ಪರಿಶೀಲಿಸಲು ತಂಡವನ್ನು ರಚನೆ ಮಾಡಿದ್ದು, ಅದು ದೇಶಾದ್ಯಂತ ಕಾರ್ಯಾಚರಿಸಲಿದೆ ಎಂದು ಅವರು ಹೇಳಿದರು.
ಜಿಎಸ್ಟಿ ತೆರಿಗೆ ಪದ್ಧತಿಯು ಗ್ರಾಹಕರು ಹಾಗೂ ಬಳಕೆದಾರರ ಜಯ ಆಗಿದೆ. ಮುಂದಿನ ದಿನಗಳಲ್ಲಿ ವಸ್ತುಗಳು ಹಾಗೂ ಸೇವೆಗಳ ಬೆಲೆ ಕಡಿಮೆ ಆಗುತ್ತದೆ. ಸದ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಯಿಂದ ಹೊರಗೆ ಇಡಲಾಗಿದೆ. ಮುಂದೆ ಇದನ್ನು ಕೂಡ ಇದರ ವ್ಯಾಪ್ತಿಗೆ ತಂದಾಗ ದೇಶದ ಎಲ್ಲ ಕಡೆ ಒಂದೇ ದರ ಆಗಲಿದೆ ಎಂದು ಅವರು ತಿಳಿಸಿದರು.
ವೇದಿಕೆಯ ಸಂಚಾಲಕ ದಾಮೋದರ ಐತಾಳ್ ಸ್ವಾಗತಿಸಿದರು. ವಿಶ್ವಸ್ಥ ಎಚ್. ಶಾಂತರಾಮ್ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಚಂದ್ರಶೇಖರ್ ವಂದಿಸಿದರು. ಎ.ಪಿ.ಕೊಡಂಚ ಕಾರ್ಯಕ್ರಮ ನಿರೂಪಿಸಿದರು.







