ಅಪಹರಣ ಪ್ರಹಸನ ಸೃಷ್ಠಿಸಿ ಚಕ್ಕರ್: ವಿದ್ಯಾರ್ಥಿಗಳ ನಡೆಯಿಂದ ಪರಿಸರದಲ್ಲಿ ಆತಂಕ

ಉಡುಪಿ, ಜು. 26: ಶಾಲೆಗೆ ಹೋಗಲು ಮನಸ್ಸಿಲ್ಲದೆ ಅನಾರೋಗ್ಯ ನೆಪವನ್ನು ಹೇಳುವುದು ಸಮಾನ್ಯವಾಗಿರುತ್ತದೆ. ಆದರೆ ಬ್ರಹ್ಮಾವರದ ಖಾಸಗೀ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಿಬ್ಬರ ಅಪಹರಣ ಪ್ರಹಸನ ಸೃಷ್ಠಿಸಿ ಪೋಷಕರಿಗೆ, ಪೊಲೀಸರಿಗೆ, ಶಾಲ ಶಿಕ್ಷಕರಿಗೆ ವಂಚಿಸಿ ಚಕ್ಕರ್ ಹೊಡೆದ ಅಪರೂಪದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಶಾನ್ ಮತ್ತು ಹುಸೇನ್ ( ವಿದ್ಯಾರ್ಥಿಗಳ ಹೆಸರು ಬದಲಿಸಲಾಗಿದೆ) ಬ್ರಹ್ಮಾವರದಲ್ಲಿ ಖಾಸಗಿ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿ ಓದುತಿದ್ದರು. ಓದಿನಲ್ಲಿ ಹಿಂದಿರುವ ಇವರು, ಶಾಲೆಗೆ ಹೋಗುವ ಆಸಕ್ತಿ ಕಡಿಮೆ ಇತ್ತು ಶಿಕ್ಷಕರು ಮತ್ತು ಹೆತ್ತವರ ಒತ್ತಡಕ್ಕೆ ಮಣಿದೇ ದಿನಾಲು ಶಾಲೆಗೆ ಒಲ್ಲದ ಮನಸ್ಸಿನಿಂದಲೇ ತೆರಳುತಿದ್ದರು ಎಂದು ತಿಳಿದು ಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಅಸೈನ್ಮೆಂಟ್ ಒಂದು ನೀಡಿದ್ದರು ಇದನ್ನು ಶುಕ್ರವಾರ ಶಾಲೆಯಲ್ಲಿ ಒಪ್ಪಿಸಬೇಕಿತ್ತು ವಿದ್ಯಾರ್ಥಿಗಳು ಇದಕ್ಕೆ ತಯಾರಿ ನಡೆಸಿರಲಿಲ್ಲ. ಹೇಗಾದರು ಶಾಲೆ ತಪ್ಪಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಿ ಅಪಹರಣ ಪ್ರಹಸನಕ್ಕೆ ಮುಂದಾಗಿದ್ದಾರೆ.
ಕಿಡ್ನಾಪ್, ಕಿಡ್ನಾಪ್
ವಿದ್ಯಾರ್ಥಿಗಳಿಬ್ಬರು ಗುರುವಾರ ಎಂದಿನಿಂತೆ ಮನೆಯಿಂದ ಶಾಲೆಗೆ ಹೊರಟಿದ್ದಾರೆ ಮನೆಯ ಸಮೀಪ ಇರುವ ನಿರ್ಜನ ಪ್ರದೇಶದಲ್ಲಿ ಸೈಕಲ್ ಬೀಳಿಸಿ, ವಾಚಿನ ಬೆಲ್ಟನ್ನು ತುಂಡರಿಸಿ, ಊಟದ ಬುತ್ತಿಯನ್ನು , ಗುರುತಿನ ಚೀಟಿಯನ್ನು ಸ್ವಲ್ಪ ದೂರದಲ್ಲಿ ಎಸೆದು, ಅಂದರೆ ಹಿಂಸೆಯಿಂದ ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿದಂತೆ ಸೃಷ್ಠಿ ಮಾಡಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರಿಗೆ ಅಪಹರಣದಂತೆ ಭಾಸವಾಗಿದ್ದು, ಮನೆಯವರಿಗೆ ತಿಳಿಸಿದ್ದಾರೆ. ನಂತರ ಪೊಲೀಸರಿಗೂ ವಿಷಯ ಮುಟ್ಟಿಸಲಾಗಿದೆ. ವಿದ್ಯಾರ್ಥಿಗಳ ಕಿಡ್ನಾಪ್ ಆಗಿರಬಹುದೆಂದು ಪೋಷಕರು, ಶಿಕ್ಷಕರು ಭಯಗೊಂಡಿದ್ದರು. ಮಕ್ಕಳನ್ನು ಬ್ರಹ್ಮಾವರದಿಂದ ಅಪಹರಿಸಿ ತೆಗೆದುಕೊಂಡು ಹೊಗಲಾಗಿದೆ ಎಂದು ಸುದ್ದಿ ಹರಡಿದ್ದೂ ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.
ಅಪಹರಣ ನಾಟಕ ಕಂಡುಹಿಡಿದ ಪೊಲೀಸರು
ಬ್ರಹ್ಮಾವರ ಪೊಲೀಸ್ ನಿರೀಕ್ಷಕ ಮಧು, ವೃತ್ತ ನಿರೀಕ್ಷಕ ಶ್ರೀಕಾಂತ್ ನಾಯಕ್ ಅವರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದೂ ಅಷ್ಟರಲ್ಲಾಗಲೇ ಪೊಲೀಸರು ಅಪಹರಣ ಪ್ರಹಸನವನ್ನು ಅರಿತುಕೊಂಡಿದ್ದಾರೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮೊದಲಾದ ಕಡೆಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಇಬ್ಬರು 15 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಬಾರ್ಕೂರ್ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಾಣಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲಿಸರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ನೋಡಿದಾಗ ಈ ಇಬ್ಬರು ಹುಡುಗರೊಂದಿಗೆ ಮತ್ತೊಂದು ಹುಡುಗನು ಇದ್ದೂ ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕಾನೂನು ಪ್ರಕ್ರಿಯೆ ಪ್ರಕಾರ ನ್ಯಾಯಾಲಯದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಪೋಷಕರಿಗೆ ಹಸ್ತಾಂತರಿಸಿ ಬುದ್ದಿವಾದ ಹೇಳಿದ್ದು, ಇಲ್ಲಿಗೆ ಅಪಹರಣ ನಾಟಕ ಸುಖಾಂತ್ಯ ಕಂಡಿದೆ.
ಅಪಹರಣಕ್ಕೆ ಸ್ಪೂರ್ತಿ ನೀಡಿದ ಸೀರಿಯಲ್
ಅಪರಾಧಕ್ಕೆ ಸಂಬಂಧಿಸಿದ ಕಿರುತೆರೆ ಧಾರಾವಾಹಿಗಳನ್ನು ಈ ವಿದ್ಯಾರ್ಥಿಗಳಿಬ್ಬರು ಸಾಮಾನ್ಯವಾಗಿ ವಿಕ್ಷಿಸುತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಸೀರಿಯಲ್ ಒಂದರಲ್ಲಿ ಬರುವ ಅಪಹರಣ ಸನ್ನಿವೇಶದಿಂದ ಪ್ರೇರಿತರಾಗಿ ಈ ಯೋಜನೆಯನ್ನು ರೂಪಿಸಿರಬಹುದು ಎಂದು ಅಂದಾಜಿಸಲಾಗಿದೆ.







