ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ಧಾಳಿ
ಜೆಡಿಎಸ್ ಕಾರ್ಯಕರ್ತರ ಸಭೆ

ಮಡಿಕೇರಿಜು,ಜು. 27: ಭ್ರಷ್ಟಾಚಾವನ್ನು ಬುಡಸಹಿತ ಕಿತ್ತೊಗೆಯುವ ಭರವಸೆಯೊಂದಿಗೆ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು, ಇದೀಗ ಭ್ರಷ್ಟಾಚಾರವನ್ನು ನಿಯಂತ್ರಿಸುವುದಿರಲಿ ಅದನ್ನೇ ಹೊದ್ದು ಮಲಗಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡ ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್ ಆರೋಪಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಭೆೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಇಲ್ಲಿಯವರೆಗಿನ ಆಡಳಿತಾವಧಿಯಲ್ಲಿ ನುಡಿದಂತೆ ನಡೆದು 185 ಭರವಸೆಗಳನ್ನು ಈಡೇರಿಸಿರುವುದಾಗಿ ಹೇಳುವ ಸಿದ್ದರಾಮಯ್ಯ ಅವರಿಗೆ ತಾವು ಈಡೇರಿಸಿರುವ ವಚನಗಳಾದರು ಏನೆಂಬುದೆ ತಿಳಿದಿಲ್ಲವೆಂದು ವ್ಯಂಗ್ಯವಾಡಿದರು.ಇವರನ್ನು ಜನತೆ ಆಯ್ಕೆ ಮಾಡಿರುವುದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ ಮತ್ತು ರಾಜ್ಯದ ಅರಣ್ಯ ಮತ್ತು ಖನಿಜ ಸಂಪತ್ತಿನ ಲೂಟಿಯನ್ನು ತಡೆಗಟ್ಟಿ ಕೋಟ್ಯಾಂತರ ಹಣವನ್ನು ಖಜಾನೆಗೆ ತುಂಬುವ ಭರವಸೆಗಳಿಗಾಗಿ. ಆದರೆ, ಇಂತಹ ಭರವಸೆಗಳನ್ನೆ ಸಿದ್ದರಾಮಯ್ಯ ಮರೆತು ವಚನ ಭ್ರಷ್ಟರಾಗಿರುವುದಾಗಿ ಕಟು ಟೀಕೆಗಳನ್ನು ಮಾಡಿದರು.
ರಾಜ್ಯದಲ್ಲಿ ಹರಿಯುವ ಕೃಷ್ಣ, ಕಾವೇರಿ, ಮಹದಾಯಿ ನದಿಗಳ ನೀರನ್ನು ಮತ್ತು ನದಿಯ ಮರಳನ್ನು ನಿಯಂತ್ರಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಲೇವಡಿಯಾಡಿ, ಗಣಿಧಣಿಗಳೆದುರು ತೊಡೆತಟ್ಟಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಅವರಿಗೆ ತಮ್ಮನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆನ್ನುವುದನ್ನೆ ಮರೆತಿರುವುದಾಗಿ ಟೀಕಿಸಿದರು.
ಕೆರೆಗಳನ್ನು ಮಾರಲು ಹೊರಟಿದ್ದಾರೆ
ರಾಜ್ಯದ ಗಣಿಗಳ ತೆರಿಗೆಯಿಂದ ಸಂಗ್ರಹವಾದ 12 ಸಾವಿರ ಕೋಟಿ ರೂ.ಗಳಿಗೆ ಕನಿಷ್ಠ ಕ್ರಿಯಾಯೋಜನೆ ಮಾಡಲಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಬೆಂಗಳೂರಿನ 193 ಹಾಗೂ ರಾಜ್ಯ ವ್ಯಾಪ್ತಿಯಲ್ಲಿರುವ 1300 ಕೆರೆಗಳನ್ನು ಡಿನೋಟಿಫೈ ಮಾಡಲು ಹೊರಟಿದೆ. ಇಂತಹ ಡಿನೋಟಿಫೈ ಮಾಡುವ ಮೂಲಕ ಕೆರೆಗಳನ್ನು ರಿಯಲ್ ಎಸ್ಟೇಟ್ಗೆ ಹೊರಟಿದೆ. ಹೀಗೆ ಕೆರೆಗಳನ್ನು ಮುಚ್ಚಿ ನೀರಿನ ಸೆಲೆಯನ್ನೆ ಬತ್ತಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ಕುಡಿಯುವ ನೀರನ್ನಾದರು ಎಲ್ಲಿಂದ ನೀಡುತ್ತದೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಧೋರಣೆ ಮತ್ತು ನೀತಿಗಳು ಈ ರೀತಿಯದ್ದಾಗಿದ್ದರೆ, ಕೇಂದ್ರದ ಬಿಜೆಪಿ ಸರ್ಖಾರ ವಿದೇಶಗ್ಳಲ್ಲಿರುವ ಕಪ್ಪುಹಣವನ್ನು ವಾಪಾಸು ತಂದು ಪ್ರತಿ ಭಾರತೀಯ ಪ್ರಜೆಯ ಖಾತೆಗೆ 15 ಲಕ್ಷ ನೀಡುವುದಾಗಿ ತಿಳಿಸಿತ್ತಾದರೂ, ಈಗೇನಾಗಿದೆಯೆಂದು ಪ್ರಶ್ನಿಸಿ, ನೋಟು ಅಮಾನ್ಯೀಕರಣದಿಂದ ಮೆಟ್ರೋ ಸಿಟಿಗಳಲ್ಲಿ 4 ಲಕ್ಷ ಯುವ ಜನರು ಉದ್ಯೋಗವನ್ನು ಕಡೆದುಕೊಂಡಿದ್ದಾರೆ. ಹೀಗೆ ಕೇಂದ್ರ್ರದ ಎಲ್ಲ ಧೋರಣೆಗಳು ಗೊಂದಲಮಯವಾಗಿದೆಯೆಂದು ಲೇವಡಿ ಮಾಡಿದರು. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸೇರಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ದುಃಖ ದುಮ್ಮಾನ, ಸಂಕಷ್ಟಗಳಿಗೆ ಸ್ಪಂದಿಸುವ ಬದಲು ತಮ್ಮ ಧೋರಣೆ ನೀತಿಗಳಿಂದ ಭ್ರಷ್ಟತೆಗೆ ನಾಂದಿ ಹಾಡುವ ಪಕ್ಷಗಳಾಗಿರುವುದರಿಂದ ಪ್ರಸ್ತುತ ಕರ್ನಾಟಕಕ್ಕೆ ಕನ್ನಡಿಗರ ದುಃಖ ದುಮ್ಮಾನಗಳನ್ನು ಅರಿತು ನಡೆಯುವ ಪ್ರಾಂತೀಯ ಪಕ್ಷದ ಅಗತ್ಯತೆ ಇದ್ದು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಕುಮಾರ ಪಥ
ಕಳೆೆದ ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಥದಲ್ಲಿ ನಡೆಯುತ್ತಿದ್ದ ತಾನು, ಆ ಪಕ್ಷದ ನಾಯಕರ ನಡವಳಿಕೆಗಳಿಂದ ಬೆೇಸತ್ತಿದ್ದೇನೆ. ಈ ಸುದೀರ್ಘ ರಾಜಕೀಯ ಬದುಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ರಾಷ್ಟ್ರೀಯ ಪಕ್ಷಗಳು ದೆಹಲಿಯ ಹಿಂದಿ ಜನರ ದರ್ಪಕ್ಕೆ ಒಳಪಟ್ಟು ನಡೆಯುವ ಪಕ್ಷಗಳಾಗಿದ್ದು, ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೂ ದೆಹಲಿಯತ್ತ ಮುಖಮಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಸಂಕಷ್ಟಗಳಿಗೆ ಇಲ್ಲಿಯೆ ಸ್ಪಂದಿಸಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಜೆಡಿಎಸ್ಗೆ ತಾನು ಸೇರ್ಪಡೆಗೊಂಡಿದ್ದು, ಇನ್ನು ನನ್ನ ನಡೆ ಕುಮಾರ ಪಥದಲ್ಲಿ ಎಂದು ಹೇಳಿದರು.







