ಗುಜರಾತ್:ಮೂವರು ಕಾಂಗ್ರೆಸ್ ಶಾಸಕರ ರಾಜೀನಾಮೆ,ಬಿಜೆಪಿಗೆ ಸೇರಲು ಸಜ್ಜು

ಅಹ್ಮದಾಬಾದ್,ಜು.27: ರಾಜ್ಯದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿ ರುವ ಚುನಾವಣೆಗಳ ನಡುವೆಯೇ ಗುಜರಾತ್ನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆಯನ್ನು ನೀಡಿ ಬಿಜೆಪಿಯನ್ನು ಸೇರಲು ಸಜ್ಜಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಕಾಂಗ್ರೆಸ್ ಶಾಸಕರಾದ ಬಲ್ವಂತ್ ಸಿಂಗ್ ರಾಜಪುತ್, ತೇಜಶ್ರೀ ಪಟೇಲ್ ಮತ್ತು ಪಿ.ಐ.ಪಟೇಲ್ ಅವರು ಗುರುವಾರ ವಿಧಾನಸಭಾ ಸ್ಪೀಕರ್ ರಮಣಲಾಲ ವೋರಾ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು.
ಬಿಜೆಪಿಯು ವಿಧಾನಸಭೆಯಲ್ಲಿ ಕಾಂಗ್ರೆಸ್ನ ಮುಖ್ಯ ಸಚೇತಕರಾಗಿದ್ದ ರಾಜಪುತ್ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಏಕೈಕ ಅಭ್ಯರ್ಥಿಯಾಗಿರುವ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.
ಹಿರಿಯ ಕಾಂಗ್ರೆಸ್ ಶಾಸಕ ರಾಜಪುತ್ ಅವರು ಇತ್ತೀಚಿಗಷ್ಟೇ ಪ್ರತಿಪಕ್ಷ ನಾಯಕ ಸ್ಥಾನವನ್ನು ತೊರೆದಿರುವ ಶಂಕರಸಿಂಹ ವೇಲಾ ಅವರ ಸಂಬಂಧಿಯಾಗಿದ್ದಾರೆ. ಪಿ.ಐ.ಪಟೇಲ್ ವಿಜಾಪುರ ಕ್ಷೇತ್ರದ ಶಾಸಕರಾಗಿದ್ದರು.
ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿಯು ತನ್ನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರನ್ನು ಕಣಕ್ಕಿಳಿಸಿದೆ.
ಇತ್ತೀಚಿನ ರಾಷ್ಟ್ರಪತಿ ಚುನಾವಣೆಯಲ್ಲಿ 11 ಕಾಂಗ್ರೆಸ್ ಶಾಸಕರು ಪಕ್ಷದ ಆದೇಶವನ್ನು ಉಲ್ಲಂಘಿಸಿ ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಪರ ಮತಗಳನ್ನು ಚಲಾಯಿಸಿದ್ದರೆನ್ನಲಾಗಿದೆ.





