ಆಹಾರ ಪೂರೈಕೆ ಮಾಹಿತಿಯನ್ನು ಆನ್ಲೈನ್ ತಂತ್ರಾಂಶ ಮೂಲಕ ವ್ಯವಸ್ಥೆ: ಡಾ.ಆರ್.ರಾಗಪ್ರಿಯ
ರಾಜ್ಯದಲ್ಲಿಯೇ ಮೊದಲ ಪ್ರಯತ್ನ

ಚಿಕ್ಕಮಗಳೂರು, ಜು.27: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಆಹಾರ ಪೂರೈಕೆಯ ಮಾಹಿತಿಯನ್ನು ಆನ್ಲೈನ್ ತಂತ್ರಾಂಶ ಮೂಲಕ ವ್ಯವಸ್ಥೆಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯತ್ನ ವಾಗಿದೆ ಎಂದು ಜಿಪಂ ಸಿಇಓ ಡಾ.ರಾಗಪ್ರಿಯ ತಿಳಿಸಿದ್ದಾರೆ.
ಅವರು ಗುರುವಾರ ನಗರದ ಜಿಪಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 1825 ಅಂಗನವಾಡಿಗಳ ಮೂಲಕ ಈ ಯೋಜನೆಯಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರೊಂದಿಗೆ ಕಿಶೋರಿಯರಿಗೆ ಅಗತ್ಯ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆ ಈಗ ಆನ್ಲೈನ್ ಮೂಲಕ ದಾಖಲಿಸಲಾಗುತ್ತಿದ್ದು ಇದರಿಂದ ಯಾವುದೇ ಅಕ್ರಮಗಳು ನಡೆಯಲು ಆಸ್ಪದವಿಲ್ಲ ದಂತಾಗಿದೆ ಎಂದರು.
6 ತಿಂಗಳಿನಿಂದ 6 ವರ್ಷದ ವರೆಗಿನ 53291 ಮಕ್ಕಳು, 6937 ಗರ್ಭಿಣಿಯರು, 7997 ಬಾಣಂತಿಯರು ಮತ್ತು 16046 ಕಿಶೋರಿಯರು ಸದ್ಯಕ್ಕೆ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನಾ ಮಟ್ಟದಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಸಿಬ್ಬಂದಿಗಳ ಕೊರತೆಯ ನಡುವೆಯೂ ವ್ಯವಸ್ಥಿತವಾಗಿ ಪೂರೈಸುವ ದೃಷ್ಟಿಯಿಂದ ತಾವು ಆನ್ಲೈನ್ ಮೂಲಕ ಎಲ್ಲಾ ವಿವರ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈಗಾಗಲೇ ಪ್ರಯೋಗಿಕವಾಗಿ ಮಾಡಲಾದ ವ್ಯವಸ್ಥೆ ಯಶಸ್ವಿಯಾಗಿದ್ದು, ಈಗ ಜಿಲ್ಲೆಯಲ್ಲಿ ಆನ್ಲೈನ್ ತಂತ್ರಾಂಶ ಪದ್ಧತಿ ಜಾರಿಯಲ್ಲಿದೆ ಎಂದರು.
ಈ ವ್ಯವಸ್ಥೆಯಲ್ಲಿ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರು ತಮ್ಮ ವೃತ್ತದ ವ್ಯಾಪ್ತಿಯಲ್ಲಿ ಅಂಗನವಾಡಿಗಳಲ್ಲಿನ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರದ ಬೇಡಿಕೆಯನ್ನು ಪರಿಶೀಲಿಸಿ ಆನ್ಲೈನ್ ತಂತ್ರಾಂಶದಲ್ಲಿ ಅಳವಡಿಸುತ್ತಾರೆ. ನಂತರ ಲೆಕ್ಕಿಗರು ಆಹಾರ ಸರಬರಾಜಿನ ಪ್ರಮಾಣವನ್ನು ಪರಿಗಣಿಸಿ ಮೇಲ್ವಿಚಾರಕರು ದಾಖಲಿಸುವ ಆಹಾರದ ಬೇಡಿಕೆಯನ್ನು ಪರಿಶೀಲಿಸಿ ಒಪ್ಪಿಗೆ ನೀಡುತ್ತಾರೆ. ಅಂತಿಮವಾಗಿ ಶಿಶು ಅಭಿವೃದ್ಧಿ ಅಧಿಕಾರಿ ಬೇಡಿಕೆಗೆ ಅಂಗೀಕಾರ ನೀಡುತ್ತಾರೆ ಎಂದು ವಿವರಿಸಿದರು.
ಹೀಗೆ ದಾಖಲಾದ ಪೌಷ್ಟಿಕ ಆಹಾರದ ಬೇಡಿಕೆವಾರು ಪ್ರತಿ ಅಂಗನವಾಡಿ ಕೇಂದ್ರಕ್ಕೆ ಸಂಬಂಪಟ್ಟಂತೆ ಸರಬರಾಜು ಆದೇಶ ಮಾಗದರ್ ಪಟ್ಟಿಯೊಂದಿಗೆ ಸಿದ್ಧವಾಗುತ್ತದೆ. ಅದರಂತೆ ಆಹಾರ ಪೂರೈಕೆಗಳಾಗುತ್ತದೆ. ಮೇಲ್ವಿಚಾರರು ಆಹಾರ ವಿತರಣೆಯ ದಿನಾಂಕಗಳಂದು ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಆಹಾರ ತಲುಪಿರುವ ಬಗ್ಗೆ ಅಂದೇ ಖಾತ್ರಿಪಡಿಸುತ್ತಾರೆ. ಆಹಾರ ಪೂರೈಕೆಯ ಪ್ರಮಾಣದಲ್ಲಿ ಕೊರತೆ ಉಂಟಾದರೆ ಅಂಗನವಾಡಿ ಕಾರ್ಯಕರ್ತೆಯರು ರಶೀದಿಯಲ್ಲಿ ಅದನ್ನು ನಮೂದು ಮಾಡಬಹುದಾಗಿದ್ದು, ಅದನ್ನು ಮೇಲ್ವಿಚಾರಕರ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಒಮ್ಮೆ ದಾಖಲಾಗುವ ಪ್ರಮಾಣವನ್ನು ಮಧ್ಯದಲ್ಲಿ ಯಾರು ಬದಲಾವಣೆ ಮಾಡಲು ಅವಕಾಶವಿಲ್ಲ. ನ್ಯೂನತೆ ಕಂಡುಬಂದಾಗ ಲೆಕ್ಕಿಗರಿಗೆ ತಿದ್ದುಪಡಿ ಮಾಡಲು ಸಾಧ್ಯವಿದೆ ಎಂದ ಅವರು, ಈ ವ್ಯವಸ್ಥೆಯಿಂದ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ನಿಗದಿತವಾಗಿ ಆಹಾರಗಳು ಪೂರೈಕೆಯಾಗುತ್ತದೆ. ಸಮಯದ ಉಳಿತಾಯವೂ ಆಗುತ್ತದೆ. ಈಗ ಎದುರಾಗುತ್ತಿರುವ ಅನೇಕ ಅಡಚಣೆಗಳು ಇಲ್ಲವಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಪಿ.ಬಸವರಾಜಯ್ಯ ಉಪಸ್ಥಿತರಿದ್ದರು.







