ಸರ್ಕಾರದ ಸೌಲಭ್ಯ ದುರುಪಯೋಗವಾದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ

ಮಡಿಕೇರಿ, ಜು.28: ಸರ್ಕಾರದಿಂದ ಎಲ್ಲಾ ವರ್ಗ ಜನಾಂಗದ ಬಡವರಿಗೂ ಒಂದಲ್ಲ ಒಂದು ರೀತಿಯ ಸೌಲಭ್ಯಗಳು ದೊರಕುತ್ತಿವೆ. ಆದರೆ ಈ ಸೌಲಭ್ಯವನ್ನು ಯಾವ ರೀತಿ ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆ ಅಥವಾ ದುರುಪಯೋಗವಾಗುತ್ತಿದೆಯೇ ಎನ್ನುವ ಬಗ್ಗೆ ಪರಿಶೀಲನೆ ಮಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ, ಐಟಿಡಿಪಿ, ಪಶುಪಾಲನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹೀಗೆ ನಾನಾ ಇಲಾಖೆಗಳಿಂದ ಹಲವು ಸೌಲಭ್ಯ ಪಡೆಯುತ್ತಾರೆ. ಆದರೆ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇದಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತದೆ. ಆದರೆ ಇವು ಎಷ್ಟರ ಮಟ್ಟಿಗೆ ತಲುಪಿವೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು. ಪಶುಭಾಗ್ಯ ಯೋಜನೆಯಡಿ ಹಸು, ಹಂದಿ, ಕೋಳಿ ಘಟಕ, ಮೀನುಮರಿ ವಿತರಣೆ, ಸಮಾಜ ಕಲ್ಯಾಣ ಇಲಾಖೆಯಿಂದ ಕಲ್ಯಾಣ ಕಾರ್ಯಕ್ರಮಗಳು, ವಿವಿಧ ಇಲಾಖೆಗಳಿಂದ ಸಹಾಯಧನ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.
ಸೌಲಭ್ಯ ಪಡೆದವರು ಸ್ವತಃ ಬಳಸಿಕೊಳ್ಳುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ತಿಳಿಯಬೇಕಿದೆ. ಜೊತೆಗೆ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ 2011 ರಿಂದ ಬಾಕಿ ಇರುವ ವಸತಿ, ರಸ್ತೆ, ಸಮುದಾಯ ಭವನ, ಕುಡಿಯುವ ನೀರು ಮತ್ತಿತರ ಕಾರ್ಯಕ್ರಮಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಜಿ.ಪಂ.ಎಂಜಿನಿಯರ್ಗಳಿಗೆ ತಿಳಿಸಿದರು.
ಹುಣಸೆ ಪಾರೆ, ಸಜ್ಜಳ್ಳಿ, ಕೂಪಾಡಿ, ಮಾಲಂಬಿ, ಕೆ.ಪೆರಾಜೆ, ಮೊಣ್ಣಂಗೇರಿ, ಮಂಗಳಪಾರೆ, ಯವಕಪಾಡಿ, ಕಾಡುಹಾಡಿ, ಹಣ್ಣಿನ ತೋಟ, ಅಂಚೆತಿಟ್ಟು, ಕಂಬಿಯಾರ ಭದ್ರಗೋಳ, ಬೊಗ್ಗನಹಡ್ಲು, ಒಳಗುಂದ, ದುಬಾರೆ, ಬೊಮ್ಮಾಡು, ಆಡಿನಾಡೂರು, ಸಿ.ಬಿ.ಹಳ್ಳಿ, ದೊಡ್ಡ ರೇಷ್ಮೆ ಹಡ್ಲು, ಚೊಟ್ಟೆಪಾರೆ, ಗೇಟ್ ಹಾಡಿ, ಮಾವಿನಹಳ್ಳ, ಕಟ್ಟೆಹಾಡಿ, ಮಜ್ಜಿಗೆಹಳ್ಳ, ಗೂಡ್ಲೂರು, ದೇವಮಚ್ಚಿ, ಕಿಬ್ಬೆಟ್ಟ, ಆನೆಪಂದಿ, ಕಟ್ಟೆಪಾಡಿ, ಯಲಕನೂರು, ಚೆನ್ನಂಗಿ ಬಸವನಹಳ್ಳಿ, ಕಬ್ಬಿನಗದ್ದೆ, ಹೈಸೊಡ್ಲೂರು, ಹೆರೂರು, ಬರಡಿ, ದೊಡ್ಡಚೇರಿ, ತನ್ನಿಮಾನಿ, ತಲೈಮಾರು, ರಂಗನಹಾಡಿ, ಅಂಬುಕೋಟೆ, ಅವರೆಗುಂದ, ಆಲಂದೋಡು, ಹಳ್ಳಿಗಟ್ಟು, ಚಂದನಕೆರೆ, ದೊಡ್ಡಬೆಟ್ಟಗೇರಿ ಈ ಹಾಡಿಗಳಲ್ಲಿ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಸಮುದಾಯ ಭವನ, ಕಿರು ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳು ನಡೆಯಬೇಕಿದೆ. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸದಿದ್ದರೆ ಬೇರೆ ಕಡೆಗೆ ಬದಲಾಯಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಹಾಗೆಯೇ ಬಸವನಹಳ್ಳಿ, ನಿಟ್ಟೂರು, ಕೋತೂರು, ಮರೂರು ಆಶ್ರಮ ಶಾಲೆಗಳಲ್ಲಿ ಹೆಚ್ಚುವರಿ ಕಟ್ಟಡ ಕಾಮಗಾರಿ ನಡೆಯಬೇಕಿದೆ. ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು.
ಜಿ.ಪಂ.ಯೋಜನಾ ನಿರ್ದೇಶಕರಾದ ಸಿದ್ದಲಿಂಗಮೂರ್ತಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಯಾದೇವಿ ಗಲಗಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಬಿ.ಆರ್.ಗಿರೀಶ್, ಜಿ.ಪಂ.ಎಂಜಿನಿಯರ್ ರಾಜ್ ಕುಮಾರ್ ರೆಡ್ಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.







