ಜಂತುಹುಳು ಸಮಸ್ಯೆ ನಿವಾರಣೆಗೆ ಮುಂದಾಗಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕರೆ
ಚಿಕ್ಕಮಗಳೂರು, ಜು.31: ಜಂತು ಹುಳು ನಿವಾರಣ ಮಾತ್ರೆಯನ್ನು 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ನೀಡುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಸೂಚಿನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಂತುಹುಳುಗಳಿಂದ ಮಕ್ಕಳಲ್ಲಿ ರಕ್ತ ನ್ಯೂನತೆ ಉಂಟಾಗುವುದಲ್ಲದೆ. ಇದರಿಂದ ಮಕ್ಕಳ ಬೆಳವಣಿಗೆ ಕುಂಟಿತಗೊಂಡು ದೈನದಿನ ಚಟುವಟಿಕೆ ಹಿನ್ನೆಡೆಯಾಗಿ ಕಲಿಕೆ ಮತ್ತು ಏಕಗ್ರತೆಗೆ ತೊಂದರೆ ಉಂಟಾಗುತ್ತದೆ. ಜಂತು ಹುಳು ಸಾಮಾನ್ಯವಾಗಿ ಒಂದು ಬಾರಿಗೆ 11ರಿಂದ 14 ಸಾವಿರ ಮೊಟ್ಟೆ ಇಡುತ್ತವೆ ಎಂದು ಹೇಳಿದರು.
ಇವುಗಳು ನೀರಿನ ಮೂಲಕ ಅಥವಾ ಇನ್ನಿತ್ತರೆ ಮಾರ್ಗವಾಗಿ ಮನುಷ್ಯನ ದೇಹ ಪ್ರವೇಶಿಸುತ್ತವೆ. ಸ್ವಚ್ಛತೆ ಹಾಗೂ ಬಯಲು ಮುಕ್ತ ಬಹಿರ್ ದೆಸೆಯಿಂದ ಜಂತುಹುಳು ಹರಡುವಿಕೆಯನ್ನು ತಡೆಯಲು ಸಾಧ್ಯ. ಜಂತು ಹುಳುಗಳಿಂದ ಮಕ್ಕಳಲ್ಲಿ ದೇಹದಲ್ಲಿ ಕಿರಿ ಕಿರಿ ಉಂಟಾಗುತ್ತದೆ. ಇದರ ನಿಯಂತ್ರಣ ಔಷಧಿ ಸೇವನೆಯಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಂದು ಮಕ್ಕಳು ತಪ್ಪದೆ ಜಂತುಹುಳು ಮಾತ್ರೆ ಸೇವನೆ ಮಾಡುವುದರೊಂದಿಗೆ ಉತ್ತಮ ಆರೋಗ್ಯ ಹೊಂದಿ ಒಳ್ಳೆಯ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ಜಂತುಹುಳು ನಿವಾರಕ ಮಾತ್ರೆ ನೀಡಲು ಜಿಲ್ಲೆಯಲ್ಲಿ ಅಂಗನವಾಡಿ, ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆ, ವಸತಿ ಶಾಲೆ, ಪದವಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಶಾಲೆಯಿಂದ ಹೊರಗುಳಿದವರು ಸೇರಿದಂತೆ ಒಟ್ಟು 3.53ಲಕ್ಷ ಮಕ್ಕಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಶಾಲೆಯಲ್ಲಿಯೂ ಮಾತ್ರೆಯನ್ನು ಯಾವ ಸಂದರ್ಭದಲ್ಲಿ ಸೇವನೆ ಮಾಡಬೇಕೆಂಬ ಬಗ್ಗೆ ಶಿಕ್ಷಕರು ಸೂಚನೆ ನೀಡಬೇಕು, ಸೇವನೆಯ ನಂತರ ಯಾವುದೇ ತೊಂದರೆ ಕಂಡು ಬಂದಲ್ಲಿ. ನೆರವಿಗೆ ಅನುಕೂಲವಾಗಲು ಶಾಲೆಯ ಕಪ್ಪುಹಲಗೆಯ ಮೇಲೆ ವೈದ್ಯರ ಹಾಗೂ ಎ.ಎನ್ಎಂ ಗಳ ಮೊಬೈಲ್ ಸಂಖ್ಯೆಯನ್ನು ನಮೊದಿಸಬೇಕೆಂದು ಸಲಹೆ ನೀಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮನ್ವಯದೊಂದಿಗೆ ಆಶಾ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಪಡೆಯಬೇಕೆಂದರು.
ಸಭೆಯಲ್ಲಿ ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ಮಂಜುನಾಥ, ಸಮಗ್ರ ಗಿರಿಜನ ಯೋಜನಯ ಸಮನ್ವಯ ಅಧಿಕಾರಿ ಲಲಿತಾ ಬಾಯಿ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ವೀರೇಶ್, ಆರೋಗ್ಯ ಶಿಕ್ಷಣ ಅಧಿಕಾರಿ ಜಲಜಾಕ್ಷಿ ಉಪಸ್ಥಿತರಿದ್ದರು.







