ಸಾಗರ: 490 ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ
.jpg)
ಸಾಗರ, ಜು.31: ನಿವೇಶನ ಕೊಡುವುದು ದೊಡ್ಡಸ್ತಿಕೆಯಲ್ಲ. ಆದರೆ ನಿಮಗೆ ಕೊಟ್ಟ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ತನಕ ನಾನು ವಿಶ್ರಮಿಸುವುದಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಸೋಮವಾರ ನಗರಸಭೆ ಹಾಗೂ ಆಶ್ರಯ ಸಮಿತಿ ವತಿಯಿಂದ 490 ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಕ್ಕುಪತ್ರ ವಿತರಿಸಿ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ 1588 ಮನೆಗಳ ನಿರ್ಮಾಣಕ್ಕೆ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಿಮಗೆ ಕೊಟ್ಟ ನಿವೇಶನವನ್ನು ಯಾವುದೆ ಕಾರಣಕ್ಕೂ ಮಾರಾಟ ಮಾಡಬೇಡಿ. ಕೊಟ್ಟ ನಿವೇಶನದಲ್ಲಿ ನೆಲೆ ನಿಂತಾಗ ಮಾತ್ರ ನಾನು ಪಡುತ್ತಿರುವ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ. ವಸತಿ ಸಚಿವರಾದ ಕೃಷ್ಣಪ್ಪ ಅವರಿಗೆ ತಿಳಿಸಿ ಹಾಲಿ ಕೊಟ್ಟಿರುವ ಆಶ್ರಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಸಿಕೊಡುವ ಪ್ರಯತ್ನವನ್ನು ಮಾಡುತ್ತೇನೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಕ್ಕುಪತ್ರ ಕೊಡಲಾಗಿತ್ತು. ಇದೀಗ ಮತ್ತೊಮ್ಮೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಹಕ್ಕುಪತ್ರ ನೀಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಹಾಲಿ ನೀಡಿರುವ ಹಕ್ಕುಪತ್ರದಲ್ಲಿ ಶೇ. 100ರಷ್ಟು ಅರ್ಹರು ಇದ್ದಾರೆ ಎಂದು ಹೇಳುವುದಿಲ್ಲ. ಒಂದೊಮ್ಮೆ ಅನರ್ಹರಿಗೆ ಹಕ್ಕುಪತ್ರ ನೀಡಿದ್ದರೆ ಅಂತಹದ್ದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಊರನ್ನು ಅಭಿವೃದ್ದಿ ಮಾಡುವಾಗ ಕೆಲವರಿಗೆ ತೊಂದರೆ ಆಗುತ್ತದೆ. ನಗರದ ವಿವಿಧ ಭಾಗಗಳಲ್ಲಿ ಸರ್ಕಾರಿ ಯೋಜನೆಗಳಿಗಾಗಿ ಖಾಸಗಿಯವರ ಭೂಮಿಯನ್ನು ವಶಪಡಿಸಿಕೊಂಡು, ಅವರಿಂದ ತೆಗಳಿಕೆಗೆ ನಾನು ಗುರಿಯಾಗಿದ್ದೇನೆ. ಹಾಲಿ ಜಂಬಗಾರು ಬಡಾವಣೆಯಲ್ಲಿ ಸಹ ವಡ್ನಾಲ ಗ್ರಾಮದವರು 15 ಎಕರೆ ಜಾಗ ಪಡೆಯುವಾಗ ಗ್ರಾಮಸ್ಥರು ವಿರೋಧ ಮಾಡಿದ್ದರು. ನಾನು ದಮ್ಮಯ್ಯ, ದತ್ತಯ್ಯ ಎಂದು ಕೈಮುಗಿದು ಜಮೀನು ವಶಪಡಿಸಿಕೊಂಡು ನಿಮಗೆ ಕೊಡುತ್ತಿದ್ದೇನೆ. ಯಾವುದೆ ಕಾರಣಕ್ಕೂ ಕೊಟ್ಟ ನಿವೇಶವನ್ನು ಮಾರಾಟ ಮಾಡಬೇಡಿ ಎಂದು ನಿಮಗೆ ಕೈಮುಗಿದು ಕೇಳುತ್ತಿದ್ದೇನೆ. ನಿವೇಶನ ಪಡೆಯುವುದು ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಕಷ್ಟದ ಕೆಲಸ ಎಂದರು.
ಒಂದು ಸಾರಿ ಸಮಾಜ ಡೊಂಕಾದರೆ ಅದನ್ನು ಮತ್ತೆ ತಿದ್ದಲು ಸಾಧ್ಯವಿಲ್ಲ. ಸಮಾಜ ಡೊಂಕಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಜನರು ನಿಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಅದನ್ನು ಸದ್ಭಳಕೆ ಮಾಡಿಕೊಂಡು ಅರ್ಹರನ್ನು ಗುರುತಿಸಿ ಸೂಕ್ತ ಸೌಲಭ್ಯ ಕಲ್ಪಿಸಿ ಎಂದು ಸಲಹೆ ನೀಡಿದ ಕಾಗೋಡು, ಇನ್ನು ಸುಮಾರು 2ಸಾವಿರ ನಿವೇಶನ ರಹಿತರು ಇದ್ದಾರೆ ಎನ್ನುವ ಮಾಹಿತಿ ಇದ್ದು, ಶೀಘ್ರದಲ್ಲಿ ಅವರಿಗೂ ನಿವೇಶನದ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಈಗಾಗಲೆ ಹೊಸನಗರದಲ್ಲಿ 9 ಎಕರೆ ಪ್ರದೇಶವನ್ನು ವಶಪಡಿಸಿಕೊಂಡು ಆಶ್ರಯ ನಿವೇಶನ ಹಂಚಿಕೆ ಮಾಡಲಾಗಿದೆ. ಕಾರ್ಗಲ್ನಲ್ಲಿ 9 ಎಕರೆ ಪ್ರದೇಶ ಗುರುತಿಸಿದ್ದು, ಶೀಘ್ರ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಜಿಲ್ಲೆಯ ಯಾವುದೆ ತಾಲ್ಲೂಕಿನಲ್ಲಿ ನಿವೇಶನ ಹಂಚಿಕೆ ಆಗಿಲ್ಲ. ರಾಜಕಾರಣ ಮಾಡುವಾಗ ಬದ್ದತೆ ಇಲ್ಲದೆ ಇದ್ದರೆ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನನ್ನ ಪ್ರಯತ್ನದಿಂದ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ 1588 ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದ್ದು, ಇದು ಜಿಲ್ಲೆಯಲ್ಲಿಯೆ ಮೊದಲು. ಮುಂದಿನ ದಿನಗಳಲ್ಲಿ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಇನ್ನಷ್ಟು ಮನೆ ನಿರ್ಮಾಣ ಮಾಡಿಕೊಡುವ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ನಗರಸಭೆ ಉಪಾಧ್ಯಕ್ಷೆ ಮರಿಯಾ ಲೀಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರಾಲಿ ಖಾನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಗೋಡು ಅಣ್ಣಪ್ಪ, ಕಲಗೋಡು ರತ್ನಾಕರ್, ತಾಲ್ಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್, ಕೊಳಗೇರಿ ಅಭಿವೃದ್ದಿ ಮಂಡಳಿಯ ಆಯುಕ್ತ ಬಿ.ಭೀಮಪ್ಪ, ತಾಂತ್ರಿಕ ನಿರ್ದೇಶಕ ಎಚ್.ಎಂ.ಮೋಹನ್ ಕುಮಾರ್, ನಗರಸಭಾ ಸದಸ್ಯರು ಹಾಜರಿದ್ದರು.
ಪೌರಾಯುಕ್ತ ಎಸ್.ರಾಜು ಸ್ವಾಗತಿಸಿದರು. ಆಶ್ರಯ ಸಮಿತಿ ಅಧ್ಯಕ್ಷ ಮಕ್ಬೂಲ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು.







