ರಾಜ್ಯ ಸರಕಾರದಿಂದ ಇಬ್ಬಗೆ ನೀತಿ: ಜಗದೀಶ್ ಶೇಣವ

ಉಡುಪಿ, ಜು.31: ಅಲ್ಪಸಂಖ್ಯಾತರಿಗೆ ತೊಂದರೆಯಾದರೆ ಸರಕಾರ ಅವರ ಪರ ನಿಲ್ಲುತ್ತದೆ. ಆದರೆ ಹಿಂದು ಮುಖಂಡರ ಹತ್ಯೆಯಾದರೆ ಸರಕಾರ ಕಾನೂನು ಕ್ರಮ ಕೈಗೊಳ್ಳದೆ ಇಬ್ಬಗೆಯ ನೀತಿಯನ್ನು ಅನುಸರಿಸುತ್ತದೆ. ಇದನ್ನು ಸರಕಾರ ಕೂಡಲೇ ನಿಲ್ಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಜಗದೀಶ್ ಶೇಣವ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿ ಯಿಂದ ರಾಜ್ಯ ಸರಕಾರದ ಹಿಂದು ದಮನ ನೀತಿ ಖಂಡಿಸಿ ಚಿಟ್ಪಾಡಿಯ ಯು. ಎಸ್.ಸಭಾಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಖಂಡನಾ ಸಭೆಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಂಟ್ವಾಳದಲ್ಲಿ ಹತ್ಯೆಯಾದ ಶರತ್ ಹಂತಕರನ್ನು ತಿಂಗಳು ಕಳೆದರೂ ಈವರೆಗೆ ಬಂಧಿಸಿಲ್ಲ. ಶರತ್ ಹಂತಕರಿಗೆ ಸರಕಾರವೇ ರಕ್ಷಣೆ ನೀಡುತ್ತಿದೆ. ಹಿಂದು ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಹಿಂದುಗಳನ್ನು ಮಣಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಬಜರಂಗದಳ ಪ್ರಾಂತ ಸಂಯೋಜಕ ರಘು ಸಕಲೇಶ್ಪುರ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿದರು. ಬಜರಂಗದಳ ವಿಭಾಗ ಸಂಚಾಲಕ ಸುನಿಲ್ ಕೆ.ಆರ್., ಜಿಲ್ಲಾ ಉಪಾಧ್ಯಕ್ಷ ನಾರಾಯಣ ಮಣಿ ಯಾನಿ ಉಪಸ್ಥಿತರಿದ್ದರು. ಬಜರಂಗ ದಳದ ಸಂಯೋಜಕ ದಿನೇಶ್ ಮೆಂಡನ್ ಸ್ವಾಗತಿಸಿದರು. ಸುಪ್ರಭಾ ಆಚಾರ್ಯ ವಂದಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.







