ವಿಟ್ಲ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬಂಟ್ವಾಳ, ಜು. 31: ನೋಟ್ ಬ್ಯಾನ್ನಿಂದ ದೇಶದ 1.50 ಲಕ್ಷ ಜನರು ಕೆಲಸ ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್ ಸರಕಾರ ಉತ್ತಮ ರೀತಿಯಲ್ಲಿ ಜನ ಉಪಯೋಗಿ ಕಾರ್ಯಗಳ ಮೂಲಕ ಜನಪ್ರಿಯತೆ ಗಳಿಸಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬರಲಿದೆ ಎಂದು ಎಐಸಿಸಿ ಕಾಂಗ್ರೆಸ್ ಉಸ್ತುವಾರಿ, ಮೈಸೂರು ವಿಭಾಗೀಯ ಕಾರ್ಯದರ್ಶಿ ವಿಷ್ಣುನಾಥನ್ ಹೇಳಿದರು.
ಅವರು ಸೋಮವಾರ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಟ್ಲದ ಚಂದಳಿಕೆ ಮಂಗಳ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದ 5ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳು ಬಂದಿದ್ದರು. ಕಾಂಗ್ರೆಸ್ ಆಡಳಿತದಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ ಆಗಿ ಜನಪ್ರೀಯಗಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಪೂರ್ಣ ವಿಶ್ವಾಸ ಇರಿಸಿಕೊಳ್ಳಲಾಗಿದೆ. ಬೂತ್ ಮಟ್ಟದ ಕಾರ್ಯಕರ್ತರು ಒಟ್ಟು ಸೇರಿ ಶ್ರಸಿದಾಗ ಗೆಲುವಿನ ಹಾದಿ ಸುಗಮ. ಸಿದ್ದರಾಮಯ್ಯ ಸರ್ಕಾರ ಎಲ್ಲಾ ವರ್ಗದ ಜನರಿಗೆ ಬೇಕಾದ ಸೌಲಭ್ಯಗಳನ್ನು ವಿವಿಧ ಭಾಗ್ಯಗಳ ಮೂಲಕ ನೀಡಿದೆ. ಅಬ್ಬರದ ಪ್ರಚಾರದಿಂದ ಜನಪ್ರಿಯತೆ ಪಡೆದ ನರೇಂದ್ರ ಮೋದಿಯಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಮೋದಿ ಕಳೆದ ಕೆಲ ವರ್ಷದಿಂದ ಮಾಧ್ಯಮದ ಮುಂದೆ ಬರಲು ಭಯ ಪಡುತ್ತಿದ್ದು, ರೇಡಿಯೋದಲ್ಲಿ ಯಾರೂ ಪ್ರಶ್ನಿಸಲ್ಲ ಎಂಬ ಕಾರಣದಿಂದ ಅಲ್ಲಿ ವಾತಾಡುತ್ತಿದ್ದಾರೆ ಎಂದು ಟೀಕಿಸಿದರು.
ಅರಣ್ಯ ಸಚಿವ ಬಿ. ರಮಾನಾಥ್ ರೈ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ತಡವಾಗಿ ಜಾರಿಗೆ ಬರಲು ಬಿಜೆಪಿ ಕಾರಣವಾಗಿತ್ತು. ಕಾಂಗ್ರೆಸ್ ಗಟ್ಟಿಯಾಗಲು ಪರಿಣಾಮಕಾರಿಯಾದ ಮಾತು ಎಲ್ಲರಿಂದ ಬರಬೇಕು. ಬಿಜೆಪಿ ಸುಳ್ಳಿನ ಗದಾ ಪ್ರಹಾರ ಮಾಡಿಕೊಂಡು ಅಧಿಕಾರವನ್ನು ಪಡೆದುಕೊಂಡಿದೆ. ಬಡವರಿಗೆ ಸ್ವಾಭಿಮಾನದ ಬದುಕು ಕಟ್ಟುವ ಪ್ರೇರಣೆಯನ್ನು ಕಾಂಗ್ರೆಸ್ ನೀಡಿದೆ. ಬಲಾಡ್ಯರಲ್ಲಿದ್ದ ಜಾಗ ಬಡವರಿಗೆ ಸಿಕ್ಕಿದ್ದು, ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ಎಂದು ತಿಳಿಸಿದರು. ಇಲ್ಲಿವರೆಗಿನ ಕೊಲೆಗಳಲ್ಲಿ ಕಾಂಗ್ರೆಸ್ ಪಕ್ಷದವರಿದ್ದರೆ ರಾಜಕೀಯ ರಾಜಿನಾಮೆಗೆ ಸಿದ್ಧ. ಜಲೀಲ್ ಕರೋಪಾಡಿ ಹಾಗೂ ಅಶ್ರಫ್ ಮನೆಗೆ ಯಾಕೆ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸುವವರು ಯಾರಿದ್ದಾರೆ ಎಂದು ರೈ ಪ್ರಶ್ನಿಸಿದರು.
ಆಹಾರ ಸಚಿವ ಯು. ಟಿ ಖಾದರ್ ಮಾತನಾಡಿ ಜನರನ್ನು ಗೊಂದಲ ಮಾಡುವ ಕಾರ್ಯವನ್ನು ಬಿಜೆಪಿ ಬೇರೆ ಬೇರೆ ರೀತಿಯಲ್ಲಿ ಮಾಡುತ್ತಿದೆ. ಬೂತು ಮಟ್ಟದ ಕಾರ್ಯಕರ್ತರು ಸಮತೋಲನ ಕಳೆದುಕೊಳ್ಳುವ ಕಾರ್ಯವಾಗಬಾರದು. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದರೆ ಕೈಗೆ ತಟ್ಟೆ ಕೊಟ್ಟು ಬಿಕ್ಷಾಟನೆಗೆ ಹೇಳುತ್ತಿತ್ತು. ಹೊಸಬರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯವಾಗದಿದ್ದರೆ ಕಾಂಗ್ರೆಸ್ ಗೆಲ್ಲಲು ಅಸಾಧ್ಯ ಎಂದರು.
ವಿಧಾನ ಪರಿಷತ್ತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ ಜನರಿಗೆ ನೀಡಿದ ಭರವಸೆಯನ್ನು ನಾಲ್ಕು ವರ್ಷದಲ್ಲೇ ಸಂಪೂರ್ಣವಾಗಿ ಪೂರೈಸುವ ಕಾರ್ಯ ರಾಜ್ಯ ಸರ್ಕಾರ ಮಾಡಿದೆ. ಬಿಜೆಪಿ ಮನೆ ಮನೆಗೆ ಭೇಟಿ ಮಾಡಿ ಪುಸ್ತಕ ನೀಡಿ ನಾಟಕ ಕಂಪನಿ ಆರಂಬಿಸಿದೆ. ಮುಂದಿನ ಚುನಾವಣೆಯನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಮತ್ತೆ ಗೆದ್ದು ಬರುವ ಭರವಸೆ ಇದೆ ಎಂದು ಹೇಳಿದರು.
ಪುತ್ತೂರು ಶಾಸಕಿ ಶಾಕುಂತಳಾ ಟಿ. ಶೆಟ್ಟಿ ಮಾತನಾಡಿ ನಮ್ಮ ಒಗ್ಗಟ್ಟು ನಮ್ಮ ಗೆಲುವಿಗೆ ಕಾರಣವಾಗುತ್ತದೆ. ನಮ್ಮ ಕಾರ್ಯಗಳನ್ನು ಸರಿಯಾದ ರೀತಿಯಲ್ಲಿ ಮನೆ ಮನೆಗೆ ಪ್ರಚಾರ ಮಾಡುವ ಕಾರ್ಯವಾಗಬೇಕು ಎಂದು ಹೇಳಿದರು.
ದ ಕ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಎಚ್. ಸಿ. ಸವಿತಾ ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆಎಂ ಇಬ್ರಾಹಿಂ, ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಎಂ ರಾಜ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಿಸಾನ್ ಘಟಕ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಝಲ್ ರಹಿಮ್, ಬಂಟ್ವಾಳ ಇಂಟಕ್ ಅಧ್ಯಕ್ಷ ರಮಾನಾಥ್ ವಿಟ್ಲ, ಪದವೀಧರ ಕ್ಷೇತ್ರದ ಅಭ್ಯರ್ಥಿ ದಿನೇಶ್ ಉಪಸ್ಥಿತರಿದ್ದರು.
ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ತಾಲೂಕು ಪಂ. ಉಪಾದ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂ. ಸದಸ್ಯೆ ಮಂಜುಳಾ, ಅಕ್ರಮ ಸಕ್ರಮ ಸಮಿತಿಯ ವಾಸು ನಾಯ್ಕ, ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೆ ನಝೀರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಮುರಳೀಧರ ಶೆಟ್ಟಿ ಕಲ್ಲಾಜೆ, ಹಿಂದುಳಿದ ವರ್ಗ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ಸೋಮನಾಥ, ಯೂತ್ ಕಾಂಗ್ರೆಸ್ ಅಧ್ಯಕ್ಷ ತೌಸಿಫ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಪೆರುವಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಲತಾ ಎಂ. ಶೆಟ್ಟಿ, ಕವಿತಾ ಮತ್ತಿತರರು ಇದ್ದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ.ಪ್ರವೀಣ್ ಚಂದ್ರ ಆಳ್ವ ಸ್ವಾಗತಿಸಿದರು. ರಾಜೇಶ್ ಬಾಳೆಕಲ್ಲು ವಂದಿಸಿದರು. ನಿರಂಜನ ರೈ ಮಟಂದಬೆಟ್ಟು, ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.







