ವೀರಶೈವ ಲಿಂಗಾಯತ ಸಮಾಜದಲ್ಲಿ ಕ್ಷೋಬೆ ಉಂಟು ಮಾಡುವುದು ಖಂಡನೀಯ: ಟಿ.ಪಿ.ಜಗದೀಶ್

ಚಿಕ್ಕಮಗಳೂರು, ಆ.1: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಒತ್ತಾಯದ ನಂತರ ಎದ್ದಿರುವ ವಿವಾದ ಸಮಾಜದಲ್ಲಿ ಕ್ಷೋಬೆ ಉಂಟು ಮಾಡುವ ವಾತಾವರಣ ನಿರ್ಮಿಸುತ್ತಿದೆ. ಸಣ್ಣ ಲೋಪದೋಷಗಳನ್ನು ದೊಡ್ಡದು ಮಾಡಿ ಸಮಾಜ ಒಡೆಯುವ ಕುಂತ್ರ ನಡೆಸುತ್ತಿರುವವರ ನಡವಳಿಕೆಯನ್ನು ಉಗ್ರವಾಗಿ ಖಂಡಿಸುವುದಾಗಿ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಶಿವಶಂಕರ್ ಹೇಳಿದರು.
ಅವರು ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಗತ್ತಿಗೆ ಅನ್ನದಾಸೋಹ, ಜ್ಞಾನ ದಾಸೋಹದಂತಹ ಪರಿಕಲ್ಪನೆಯನ್ನು ನೀಡಿದಂತಹ ಅಸ್ಪಷ್ಯತೆ ವಿರುದ್ದ ಹೋರಾಡಿದ, ಪಂಕ್ತಿಬೇಧ ಮರೆತು ಸಮಾನತೆ ಸಾದ ಶ್ರೇಷ್ಠ ಧರ್ಮ ಪರಂಪರೆ ವೀರಶೈವ ಲಿಂಗಾಯತರದ್ದಾಗಿದೆ. ಸ್ವತಂತ್ರ ಧರ್ಮವಾಗುವ ಎಲ್ಲಾ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ದೃಶ್ಯ ಮಾದ್ಯಮಗಳಲ್ಲಿ ಚರ್ಚಿಸುವ ಕೆಲವರು ವೀರಶೈವ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಧರ್ಮದ ಸವಲತ್ತುಗಳಿಗಾಗಿ ಸ್ವತಂತ್ರ ಧರ್ಮದ ಮಾನ್ಯತೆ ಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ ಎನ್ನುತ್ತಿರುವುದು ಸರಿಯಲ್ಲ ಎಂದರು.
ಕೆಲವರು ಧರ್ಮದ ವ್ಯಾಖ್ಯಾನವನ್ನು ತಪ್ಪಾಗಿ ಚಿತ್ರಿಸಿ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷ ವಾಕ್ಯವನ್ನು ಸಮಾಜಕ್ಕೆ ನೀಡಿ ಶೋಷಣೆ, ಅಸಮಾನತೆ, ಮೂಡನಂಬಿಕೆ ವಿರುದ್ದ ಸಮರ ಸಾರಿದ್ದ ಶರಣರ ಪರಂಪರೆ ಮತ್ತು ಗುರು ಪರಂಪರೆಗೆ ಅಪಮಾನಿಸಲಾಗುತ್ತಿದ ಎಂದು ತಿಳಿಸಿದರು.
ಈಗಾಗಲೇ ವೀರಶೈವ ಲಿಂಗಾಯತರು ಒಳ ಪಂಗಡಗಳನ್ನು ಮರೆತು ಭಾಂಧವ್ಯಗಳನ್ನು ಬೆಳೆಸುತ್ತಿದ್ದು, ಪರ ವಿರೋಧ ಧೋರಣೆ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ವೀರಶೈವ ಪಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಒಲ್ಲಿಯವರೆಗೆ ಒಗ್ಗಟ್ಟಾಗಿ ಹೋರಾಡಿದ ಸಮಾಜ ಹೊರಗಿನ ಶಕ್ತಿಗಳ ಕಾರಣದಿಂದ ವಿಭಜನೆಯಾಗುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಗೊಷ್ಟಿಯಲ್ಲಿ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಟಿ.ಪಿ.ಜಗದೀಶ್ ಮತ್ತು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಈಶ್ವರ್ ಕೋಟೆ ಮತ್ತಿತರರಿದ್ದರು.







