ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ದಾವಣಗೆರೆ, ಆ.2: 1500 ಕೆರೆಗಳನ್ನು ಡಿ ನೋಟಿಫೈ ಮಾಡುವ ಮೂಲಕ ಭೂಗಳ್ಳ ಪಾಲು ಮಾಡಲು ಹೋರಟಿರುವ ಸರ್ಕಾರ ವಿರುದ್ಧ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಕೂಗಿ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಸಾವಿರರು ವರ್ಷಗಳಿಂದ ಕರ್ನಾಟಕದ ಅನೇಕ ರಾಜರುಗಳು ಕೆರೆ, ಕಟ್ಟೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಿಸಿ, ಜನಸಾಮಾನ್ಯರ ನೀರಿನ ಬವಣೆಯನ್ನು ಹೋಗಲಾಡಿಸಿದ ಇತಿಹಾಸ ನಮ್ಮದು. ಆದರೆ ಈಗಿನ ರಾಜ್ಯ ಸರ್ಕಾರ ಕಂದಾಯ ಇಲಾಖೆ ಕೆರೆಗಳನ್ನು ಡಿ ನೋಟಿಫೈ ಮಾಡುವ ಭೂಗಳ್ಳರ ಪಾಲು ಹೋರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಕೃಷಿ ಪ್ರಧಾನ ದೇಶದಲ್ಲಿರುವ ನಾವು ಕೃಷಿಗೆ ಪೂರಕವಾದ ಜಲಮೂಲಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ವಿಧಾನದಲ್ಲಿ ಜಲ ಸಂರಕ್ಷಣೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ ಎಂದರು.
ಬಯಲು ಸೀಮೆಯ ಕೆರೆ, ಕುಂಟೆ, ಬಾವಿ, ಕೊಳವೆ ಬಾವಿಗಳೆಲ್ಲಾ ಬತ್ತಿ ಹೋಗಿ ಅಂತರ್ಜಲ ಪಾತಾಳಕ್ಕೆ ಕುಸಿದು ಹೋಗಿದೆ. ನೆರೆಯ ರಾಜ್ಯಗಳು ಅಂತರ್ಜಲದ ಅಭಿವೃದ್ಧಿಗಾಗಿ ಜಲ ಮೂಲಕ ಸಂರಕ್ಷಣೆ ಹಾಗೂ ರೈತರಿಗೆ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದರೆ. ನಮ್ಮ ಸರ್ಕಾರ ಕೆರೆಗಳನ್ನು ಡಿ ನೋಟಿಫೈ ಮಾಡಿ ಆತಂಕಾರಿ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದರು.
ಶಾಶ್ವತ ನೀರಾವರಿ ಸಮರ್ಪಕ ಜಾರಿಯಲ್ಲಿ ಸರ್ಕಾರದ ವೈಫಲ್ಯ ಹಾಗೂ ಜಲಮೂಲಗಳ ಶೋಷಣೆಯಿಂದ ಈಗಾಗಲೇ ಕಂಗೆಟ್ಟಿರುವ ಪರಿಸ್ಥಿತಿಯಲ್ಲಿ ಮೂಲ ಗುಣಲಕ್ಷಣಗಳನ್ನು ಕಳೆದುಕೊಂಡಿರುವ ನಿರ್ಜೀವ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಕೆರೆಗಳ ಪುನಃಶ್ಚೇತನಕ್ಕಾಗಿ ಕ್ರಮಕೈಗೊಳ್ಳಬೇಕಾದ ಸರ್ಕಾರ ಭೂಗಳ್ಳರ ಹಾಗೂ ಭೂಮಾಫಿಯಾದ ಕೈಗೊಂಬೆಯಾಗಿದೆ.1500 ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡುತ್ತಿದ್ದು ಖಂಡನೀಯ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಟಾರ್ ಖಲೀಲ್, ನಾಗರಾಜ್ ಗೌಡ, ದಯಾನಂದ, ಜಮ್ನಳ್ಳಿ ನಾಗರಾಜ್, ಮುಸ್ತಾಕ್ ಖಾನ್, ಗಿರಿಧರ್, ಜ್ಯೋತಿ ವಿನಯ್, ಕೆ.ಕಾವ್ಯ, ಸುಜಾತ, ಭಾರತಿ, ಮಂಜುಳ, ಇಬ್ರಾಹಿಂ, ಸಂತೋಷ್ ದೊಡ್ಡಮವಿ, ಮೋಹನ್, ಮುನ್ನ ಮತ್ತಿತರರು ಇದ್ದರು.







