ಆಳ್ವಾಸ್ ಬಿ.ಇ 10ನೇ ಬ್ಯಾಚ್ ಉದ್ಘಾಟನೆ

ಮೂಡುಬಿದಿರೆ,ಆ.02: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ 10ನೇ ಬಿ.ಇ ಬ್ಯಾಚ್ ಅನ್ನು ಮಿಜಾರಿನಲ್ಲಿರುವ ಕ್ಯಾಂಪಸ್ನಲ್ಲಿ ಬುಧವಾರ ಉದ್ಘಾಟಿಸಲಾಯಿತು.
ಬೆಂಗಳೂರಿನ ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಡಾ.ಪಿ.ಜಿ ದಿವಾಕರ್, ಬಿ.ಇ ಬ್ಯಾಚ್ ಅನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಗುರಿಯನ್ನು ನಿರ್ಧರಿಸಿಕೊಂಡು, ಅದನ್ನು ಸಾಧಿಸಲು ಪರಿಶ್ರಮ ಪಡಬೇಕು. ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ವೈಯಕ್ತಿಕವಾಗಿ ಪ್ರಗತಿಯೊಂದಿಗೆ ಸಾಂಘಿಕ ಶಕ್ತಿಯಿದ್ದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ. ಇಸ್ರೋದಲ್ಲಿರುವ ಸಾಂಘಿಕ ಪ್ರಯತ್ನ, ಸಮರ್ಪಣಾ ಭಾವ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಪಂಚದಲ್ಲೇ ಗುರುತಿಸಿಕೊಳ್ಳುವಂತೆ ಮಾಡಿದೆ. ಇಸ್ರೋ ಸಂಸ್ಥೆ ಯಶಸ್ವಿ ಯೋಜನೆಗಳು ದೈನಂದಿನ ಜೀವನಕ್ಕೆ ಸಹಕಾರಿಯಾಗಿದೆ. ಇಸ್ರೋ ಸಂಸ್ಥೆಯ ಯೋಜನೆಗಳಿಗೆ ಆಳ್ವಾಸ್ನಂತ ಶ್ರೇಷ್ಠ ಸಂಸ್ಥೆ ಸಾಥ್ ನೀಡುವುದು ಅಭಿನಂದನಾರ್ಹ. ಬಾಹ್ಯಾಕಾಶ ಹಾಗೂ ಅದಕ್ಕೆ ಪೂರಕವಾದ ಆಳ್ವಾಸ್ ಜನಪಯೋಗಿ ಯೋಜನೆಗಳಿಗೆ ಇಸ್ರೋ ಮುಕ್ತವಾಗಿ ಪ್ರೋತ್ಸಾಹಿಸುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಬದ್ಧತೆಯಿಂದ ಕೆಲಸ ಮಾಡುವ ಸಂಸ್ಥೆ. ಸಂಸ್ಥೆಯ ಅಧ್ಯಕ್ಷರ ಆಶಯದಂತೆ ವಿದ್ಯಾರ್ಥಿಗಳಲ್ಲಿ ಮನಸ್ಸು ಕಟ್ಟುವ ಕಾಯಕ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಸಾಧನೆ, ಬೋಧಕರ ಸಮರ್ಪಣಾ ಭಾವನೆಯೇ ಸಾಕ್ಷಿ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸಂಸ್ಥೆಯು ಮಾಡಿದ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕ್ರಾಂತಿಯನ್ನು ಅವಲೋಕಿಸಿದಾಗ ಆಳ್ವಾಸ್ನ ಸಾಧನೆ ಏನು ಎಂಬುವುದು ತಿಳಿಯುತ್ತದೆ. ಸಂಸ್ಥೆಯು ಅಪಪ್ರಚಾರಕ್ಕೆ ಎಂದೆಗುಂದುದಿಲ್ಲ. ಆಳ್ವಾಸ್ ಎಂದಿಗೂ ನ್ಯಾಯದ ಪರವಾಗಿದೆ ಎಂದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಇಂಜಿನಿಯರಿಂಗ್ ಡಾ.ಬಸವರಾಜ್, ಡಾ.ದತ್ತಾತ್ರೇಯ, ಡಾ. ಪ್ರವೀಣ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಮಂಜುನಾಥ ಕೊಟ್ಟಾರಿ, ದುರ್ಗಾಪ್ರಸಾದ್ ಬಾಳಿಗ, ಕೆ.ವಿ ಸುರೇಶ್, ಡಾ.ಮಂಜುನಾಥ್, ಜಯಂತ್ ರಾಥೋಡ್, ಡಾ.ರವಿ ಕುಮಾರ್
ಡಾ. ರಾಮ್ ಪ್ರಸಾದ್ ವೇದಿಕೆಯಲ್ಲಿದ್ದರು. ಶುೃತಿ ಕಾರ್ಯಕ್ರಮ ನಿರೂಪಿಸಿದರು.







