‘ಜಿಎಸ್ಟಿ ಜಾಗೃತಿ-ರಿಟರ್ನ್ಸ್ ಅಪ್ಲೋಡ್ ಮತ್ತಿತರ ವಿಚಾರಗಳು’ ಕಾರ್ಯಕ್ರಮ
‘ದೇಶದಲ್ಲಿ ತೆರಿಗೆ ಪಾವತಿಸುವ ಜವಾಬ್ದಾರಿಯುತ ಸಮಾಜ ರೂಪುಗೊಳ್ಳಲಿ’

ಮಂಗಳೂರು, ಆ.3: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವ ಮೂಲಕ ಸುಧಾರಣೆ ಕಂಡು ಬಂದಿದೆ. ಈ ತೆರಿಗೆ ಕ್ರಮದಿಂದಾಗಿ ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ಜವಾಬ್ದಾರಿಯುತ ಸಮಾಜ ರೂಪುಗೊಳ್ಳಲಿ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಎಸ್ಟಿ ಜಾಗೃತಿ-ರಿಟರ್ನ್ಸ್ ಅಪ್ಲೋಡ್ ಮತ್ತಿತರ ವಿಚಾರಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಭಾರತೀಯರು ಅಧಿಕ ತೆರಿಗೆ ಪಾವತಿಸುವ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಈ ಜಾಗೃತಿ ಕಡಿಮೆ ಇದೆ. ಇದರಲ್ಲಿ ಕೆಲವು ತೆರಿಗೆ ಸಲಹೆಗಾರರೂ ವ್ಯಾಪಾರಿಗಳನ್ನು ತೆರಿಗೆ ತಪ್ಪಿಸುವ ಬಗ್ಗೆ ಪ್ರಚೋದಿಸುತ್ತಾರೆ. ತೆರಿಗೆ ಯಾಕೆ ಪಾವತಿಸಬೇಕು ಎಂದು ಕೂಡ ಪ್ರಶ್ನಿಸುವವರಿದ್ದಾರೆ. ಇದೀಗ ಜಿಎಸ್ಟಿಯಿಂದಾಗಿ ಬಹಳಷ್ಟು ಸುಧಾರಣೆ ಕಂಡು ಬರಲಿದೆ. ದೇಶದ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಜನರು ಮತ್ತು ಸಂಸ್ಥೆಗಳ ಸಾಲ ಶ್ರೇಯಾಂಕ (ಕ್ರೆಡಿಟ್ ಸ್ಕೋರ್) ರಿಜಿಸ್ಟ್ರಿ ಸ್ಥಾಪಿಸುವುದಾಗಿ ಹೇಳಿದೆ. ಇದರಿಂದಾಗಿ ವ್ಯಕ್ತಿಯೊಬ್ಬ ಸಾಲ ಪಡೆಯಲು ತನ್ನ ಹಿಂದಿನ ಸಾಲ ಮರುಪಾವತಿಯನ್ನು ಹೇಳಿಕೊಂಡು ಹೋಗಬೇಕಿಲ್ಲ. ಸಮಗ್ರವಾಗಿ ಆತನ ಸಾಲದ ಅರ್ಹತೆಯನ್ನು ಈ ರಿಜಿಸ್ಟ್ರಿ ನೀಡಲಿದೆ. ಇದು ಸಿಬಿಲ್(ಸಾಲ ಪಡೆಯುವ ಅರ್ಹತಾ ದರ)ಸ್ಕೋರ್ಗಿಂತಲೂ ಹೆಚ್ಚು ವೈಜ್ಞಾನಿಕವಾಗಿರಲಿದೆ ಎಂದ ಮಹಾಬಲೇಶ್ವರ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ 25 ಮೂಲಾಂಶಗಳಷ್ಟು ಕಡಿಮೆ ಮಾಡಿದೆ. ಇದು ದೇಶ ಸಾಗುವ ದಿಶೆಯನ್ನು ತೋರಿಸುತ್ತದೆ. ದೇಶವು ಸದ್ಯ ಉನ್ನತಿಯೆಡೆಗೆ ಸಾಗುತ್ತಿರುವುದು ಖಚಿತ. ಸಾಲದ ಬಡ್ಡಿದರ ಮತ್ತು ಠೇವಣಿ ಈ ಎರಡರ ಬಡ್ಡಿದರಗಳೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದರು.
ವ್ಯಾಪಾರಿಗಳು ದೇಶದ ಯಾವುದೇ ಭಾಗದಲ್ಲೂ ಕಚ್ಚಾವಸ್ತು ಕಡಿಮೆ ದರದಲ್ಲಿ ಲಭ್ಯವಿದ್ದರೆ ತರುವುದಕ್ಕೆ ಜಿಎಸ್ಟಿ ಪದ್ಧತಿ ನೆರವಾಗುತ್ತದೆ. ಹಿಂದೆ ಹೊಸದೆಹಲಿಯಿಂದ ಮಂಗಳೂರಿಗೆ ವಸ್ತು ಸಾಗಾಟ ಮಾಡಲು ಲಾರಿಗಳಿಗೆ ಕೆಲವು ದಿನ ಬೇಕಾಗುತ್ತಿತ್ತು. ರಾಜ್ಯಗಳ ಗಡಿಭಾಗದ ಚೆಕ್ಪೋಸ್ಟ್ನಲ್ಲಿ ಸಾಲು ಗಟ್ಟಿ ನಿಲ್ಲಬೇಕಿತ್ತು. ಆದರೆ ಈಗ ಅದೆಲ್ಲವೂ ಹೋಗಿ ಎರಡು-ಮೂರು ದಿನದಲ್ಲಿ ಬರುವಂತಾಗಿದೆ ಎಂದು ಜಿಎಸ್ಟಿ ವಿಭಾಗದ ಜಂಟಿ ಆಯುಕ್ತ ಎಚ್.ಜಿ.ಪವಿತ್ರನ್ ನುಡಿದರು.
ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ (ಅಪೀಲು) ಕೆ.ಎಂ.ಸುಲೋಚನಾ, ಜಂಟಿ ಆಯುಕ್ತ (ಜಾರಿ) ಹೇಮಾಜಿ ನಾಯಕ್, ಕೆಸಿಸಿಐ ಉಪಾಧ್ಯಕ್ಷೆ ವಟಿಕಾ ಪೈ, ಖಜಾಂಚಿ ಗಣೇಶ್ ಭಟ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಜೀವನ್ ಸಾಲ್ದಾನಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಕಲ್ಬಾವಿ ವಂದಿಸಿದರು.







