ವಿದ್ಯಾರ್ಥಿ ಪರಿಷತ್ನಿಂದ ಜಿಲ್ಲಾ ಕಾಲೇಜು ಬಂದ್ ಎಚ್ಚರಿಕೆ
ಕಾವ್ಯಾ ಪ್ರಕರಣದ ತನಿಖೆಗೆ 10 ದಿನಗಳ ಗಡುವು

ಉಡುಪಿ, ಆ.4: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವು ಪ್ರಕರಣವನ್ನು ಆ.15ರೊಳಗೆ ಸತ್ಯಾಂಶ ಬಹಿರಂಗ ಪಡಿಸದಿದ್ದರೆ ಉಡುಪಿ ಜಿಲ್ಲೆಯ ಎಲ್ಲ 40 ಕಾಲೇಜುಗಳನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ವಿದ್ಯಾರ್ಥಿ ಪರಿಷತ್ನ ಸ್ಥಾಪಕ ಸಂಚಾಲಕ ಪೃಥ್ವಿರಾಜ್ ಶೆಟ್ಟಿ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಕಾವ್ಯಾಳ ಅಸಹಜ ಸಾವು ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಪರಿಷತ್ ಉಡುಪಿ ವಲಯದ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿ ಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಪ್ರಕರಣದಲ್ಲಿ ಗೊಂದಲ ಮುಂದುವರಿದಿದ್ದು, ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಮೃತ ಕಾವ್ಯಾಳ ತಾಯಿ ಸಂಶಯ ವ್ಯಕ್ತಪಡಿಸಿರುವ ದೈಹಿಕ ಶಿಕ್ಷಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಮೃತಳ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪರಿಷತ್ನ ತಾಲೂಕು ಸಂಚಾಲಕ ವಿಕಾಸ್ ಶೆಟ್ಟಿ, ಜಿಲ್ಲಾಧ್ಯಕ್ಷ ವಿರಾಜ್ ರಾಮ್ಮೋಹನ್, ಉಡುಪಿ ವಲಯ ಸಂಚಾಲಕ ಸಂಜಯ್ ಪೂಜಾರಿ, ವಲಯಾಧ್ಯಕ್ಷ ಪ್ರತೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪೃಥ್ವಿರಾತ್ ಶೆಟ್ಟಿ, ಅಖಿಲೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶೆಟ್ಟಿ, ಅಕ್ಷಯ್ ಪ್ರಭು, ಸಂಘಟನಾ ಕಾರ್ಯದರ್ಶಿ ಸುಶಾಂತ್ ಕುಂದರ್, ಅವಿನಾಶ್ ಪೂಜಾರಿ, ಕಾರ್ಯದರ್ಶಿ ಸಾಜನ್ ಪೂಜಾರಿ, ಆದಿತ್ಯ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.







