ಪ್ರಶ್ನೆಗಳನ್ನು ಬಗ್ಗು ಬಡಿಯುವ ಅಘೋಷಿತ ತುರ್ತುಪರಿಸ್ಥಿತಿ
ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯಂತಹ ನಾಯಕರು ಈ ದೇಶಕ್ಕೆ ಈಗಲೂ ಯಾಕೆ ಆಪ್ತರಾಗುತ್ತಾರೆ ಯಾಕೆಂದರೆ, ಅವರು ಬಡವರ ಹೆಸರಿನಲ್ಲಿ ರಾಜಕೀಯ ಮಾಡಿದರು. ‘ಅಣೆಕಟ್ಟುಗಳು ಈ ದೇಶದ ಆಧುನಿಕ ದೇವಸ್ಥಾನಗಳು’ ಎಂದು ಘೋಷಿಸಿದ ನೆಹರೂ, ಅಭಿವೃದ್ಧಿಗೆ ನಿಜವಾದ ಅರ್ಥದಲ್ಲಿ ತಳಹದಿಯನ್ನು ಹಾಕಿದವರು. ನೆಹರೂ ಅವರ ದೂರದೃಷ್ಟಿಯ ಆಡಳಿತದ ಪರಿಣಾಮವಾಗಿಯೇ, ಈ ದೇಶ ಇಷ್ಟರ ಮಟ್ಟಿಗಾದರೂ ವಿಶ್ವದಲ್ಲಿ ತಲೆಯೆತ್ತಿ ನಿಂತಿದೆ. ಈ ದೇಶದ ಬೃಹತ್ ಅಣೆಕಟ್ಟುಗಳು, ಕೃಷಿ ಯೋಜನೆಗಳು, ಕೈಗಾರಿಕೆಗಳು, ಸಂಶೋಧನಾ ಕೇಂದ್ರಗಳು ನೆಹರೂ ದೂರದೃಷ್ಟಿಯ ಫಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿರಾಗಾಂಧಿಯೂ ಬಡವರ ಹೆಸರಲ್ಲೇ ರಾಜಕೀಯ ನಡೆಸಿದರು. ಭೂಸುಧಾರಣೆ ಕಾನೂನನ್ನು ಜಾರಿಗೊಳಿಸಲು ಮುಂದಾಗಿ ಜಮೀನ್ದಾರರ ಕೆಂಗಣ್ಣನ್ನು ಎದುರಿಸಿದರು. ಗರೀಬಿ ಹಟಾವೋ ಘೋಷಿಸಿದರು. ಬ್ಯಾಂಕ್ ರಾಷ್ಟ್ರೀಕರಣಗೊಳಿಸುವ ಮೂಲಕ ಬಡವರೂ ಬ್ಯಾಂಕ್ ಮೆಟ್ಟಿಲು ಹತ್ತುವುದಕ್ಕೆ ಕಾರಣವಾದರು.
ಎರಡನೆ ಹಸಿರು ಕ್ರಾಂತಿಯನ್ನು ಘೋಷಿಸಿ ದೇಶದ ಬಡಬಾನಲವನ್ನು ತಣಿಸಿದರು. ದಲಿತರ ಓಲೈಕೆಯ ಮೂಲಕ ಪಕ್ಷವನ್ನು ಬೆಳೆಸುವುದಕ್ಕೆ ಯತ್ನಿಸಿದರು. ಅವರು ಹಮ್ಮಿಕೊಂಡ ಎಲ್ಲ ಯೋಜನೆಗಳ ಹಿಂದೆಯೂ ರಾಜಕೀಯ ಉದ್ದೇಶಗಳಿರಬಹುದು. ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿರಬಹುದು. ಆದರೆ, ಘೋಷಿಸಿದ ಯೋಜನೆಗಳು ಯಾರೂ ನಿರಾಕರಿಸುವಂತೆ ಇದ್ದಿರಲಿಲ್ಲ. ರಾಜೀವ್ಗಾಂಧಿ ಕೂಡ ಇದೇ ಹಾದಿಯಲ್ಲಿ ಮುಂದುವರಿದರು. ‘ಕಂಪ್ಯೂಟರ್ ಯುಗ’ದ ಹೆಬ್ಬಾಗಿಲನ್ನು ತೆರೆದುಕೊಟ್ಟವರು ರಾಜೀವ್ ಗಾಂಧಿ. ಇಂದು ಹೊಸ ತಲೆಮಾರು ಎರಡೂ ಕೈಗಳಲ್ಲಿ ಮೊಬೈಲ್ಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರೆ ಅದರ ಹಿಂದೆ ರಾಜೀವ್ಗಾಂಧಿ ಕನಸುಗಳಿವೆ.
ಯುವಕರನ್ನು ರಾಜಕೀಯವಾಗಿ ಮುನ್ನೆಲೆಗೆ ತಂದ ಹೆಗ್ಗಳಿಕೆಯೂ ಇವರಿಗೇ ಸಲ್ಲಬೇಕು. 18 ವರ್ಷದ ಯುವಕರಿಗೆ ಮತಹಾಕುವ ಹಕ್ಕು ನೀಡಿರುವುದು ರಾಜೀವ್ಗಾಂಧಿಯೇ. ತದನಂತರ ಆಡಳಿತ ನಡೆಸಿದ ಯುಪಿಎ ಸರಕಾರದ ಕೆಲವು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನೂ ನಾವು ಇಲ್ಲಿ ಉಲ್ಲೇಖಿಸಬಹುದಾಗಿದೆ. ಆಹಾರ ಭದ್ರತೆಯ ಹಕ್ಕು, ಆರ್ಟಿಐ, ಆರ್ಟಿಇ, ಉದ್ಯೋಗ ಭದ್ರತೆ ಮುಂತಾದ ಮಹತ್ವದ ಯೋಜನೆಗಳನ್ನು ದೇಶ ಇಂದಿಗೂ ಸ್ಮರಿಸಲೇಬೇಕಾಗುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಬಡವರಿಗೆ ಒಂದು ರೂಪಾಯಿಗೆ ಅಕ್ಕಿ ಕೊಡುವ ಮೂಲಕ ಜನರಿಗೆ ಹತ್ತಿರವಾಗಲು ಹವಣಿಸುತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿ ಅಭಿವೃದ್ಧಿ ರಾಜಕಾರಣದ ವಿರುದ್ಧ ಭಾವನಾತ್ಮಕ ರಾಜಕಾರಣವನ್ನು ಮುಂದೊಡ್ಡಿತು. ಭಾವನಾತ್ಮಕವಾಗಿ ಜನರನ್ನು ಆಕರ್ಷಿಸುವುದು ಬಹು ಸುಲಭ.
ರಾಮಜನ್ಮಭೂಮಿ ಮತ್ತು ರಥಯಾತ್ರೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸುಲಭ ದಾರಿಯಲ್ಲಿ ಜನರನ್ನು ವಿಭಜಿಸಿ ಅವರನ್ನು ತನ್ನೆಡೆಗೆ ಮಾಡಿಕೊಂಡವು. ಅನ್ನ, ನೀರು, ವಸತಿ, ಉದ್ಯೋಗ ಇವುಗಳ ಬಗ್ಗೆ ಚಿಂತೆ ಮಾಡುತ್ತಿದ್ದ ಜನರನ್ನು ರಾಮಜನ್ಮಭೂಮಿ, ರಾಮಸೇತುವೆ ಎಂಬಿತ್ಯಾದಿ ವಿಸ್ಮತಿಗೆ ಕೆಡವಿತು. ಮಾಧ್ಯಮಗಳನ್ನು ಇದಕ್ಕಾಗಿ ಸಮರ್ಥವಾಗಿ ಬಳಸಿಕೊಂಡಿತು. ಈ ಭಾವನಾತ್ಮಕ ವಿಷಯಗಳಿಗಿರುವ ರೋಚಕತೆ ಅಭಿವೃದ್ಧಿ ರಾಜಕಾರಣಕ್ಕೆ ಇರಲಿಲ್ಲ. ಪರಿಣಾಮವಾಗಿ ಬಡವರ ಪರವಾಗಿ ಮಾತನಾಡುವುದೇ ಈ ದೇಶದಲ್ಲಿ ‘ಅಪರಾಧ’ ಎನ್ನುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುವಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಯಶಸ್ವಿಯಾಯಿತು.
ಬೃಹತ್ ಕಂಪೆನಿಗಳಿಗೆ, ಕಾರ್ಪೊರೇಟ್ ಶಕ್ತಿಗಳಿಗೆ ಬಡವರನ್ನು ಸುಲಭದಲ್ಲಿ ಬಾಯಿಮುಚ್ಚಿಸುವ ಪಕ್ಷ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಮುವಾದಿ ಪಕ್ಷಗಳನ್ನು ಬಳಸಿಕೊಂಡು ಈ ದೇಶದ ಕಾರ್ಮಿಕ ಸಂಘಟನೆಗಳನ್ನು ಬಗ್ಗು ಬಡಿಯಿತು. ರೊಟ್ಟಿ, ವಸತಿ ಕೇಳುತ್ತಿದ್ದ ಜನರ ಬಾಯಿಯೊಳಗೆ ರಾಮಮಂದಿರವನ್ನು ತುರುಕಿ ಧ್ವನಿ ಹೊರಡದಂತೆ ಮಾಡಿತು. ಕಾರ್ಪೊರೇಟ್ ವಲಯ ಮತ್ತು ವೈದಿಕ ಶಕ್ತಿಗಳು ಜೊತೆಜೊತೆಯಾಗಿ ರೂಪಿಸಿದ ಕಾರ್ಯಯೋಜನೆಯ ಫಲವಾಗಿ ನರೇಂದ್ರ ಮೋದಿ ಎನ್ನುವ ವಿಸ್ಮತಿ ಈ ದೇಶವನ್ನು ಆವರಿಸಿಕೊಂಡಿದೆ. ಮಾಧ್ಯಮಗಳನ್ನು ನಿಯಂತ್ರಿಸುವ ಮೂಲಕ ಜನರ ಅಭಿಪ್ರಾಯವನ್ನು ತನಗೆ ಪೂರಕವಾಗಿ ರೂಪಿಸುವಲ್ಲೂ ಸರಕಾರ ಬಹುತೇಕ ಯಶಸ್ವಿಯಾಗಿದೆ.
ಒಂದು ಕಾಲದಲ್ಲಿ ಬಜೆಟ್ ಮಂಡನೆಯಾದಾಗ, ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎನ್ನುವ ಆಧಾರದಲ್ಲಿ ಅದರ ಒಳಿತು ಕೆಡುಕುಗಳನ್ನು ಅಳೆಯಲಾಗುತ್ತಿತ್ತು. ಶಿಕ್ಷಣ, ಆರೋಗ್ಯ ಕ್ಷೇತ್ರವೂ ಸೇರಿದಂತೆ ಸಾಮಾಜಿಕ ಕ್ಷೇತ್ರಕ್ಕೆ ಎಷ್ಟು ಹಣ ನಿಗದಿ ಮಾಡಲಾಗಿದೆ ಎನ್ನುವ ಮಾನದಂಡದಲ್ಲಿ ಬಜೆಟ್ ದೇಶವನ್ನು ಒಳಿತಿನ ಕಡೆಗೆ ಒಯ್ಯುತ್ತದೆಯೋ, ಕೆಡುಕಿನ ಕಡೆಗೆ ಒಯ್ಯುತ್ತಿದೆಯೋ ಎನ್ನುವ ತೀರ್ಮಾನಕ್ಕೆ ಬರಲಾಗುತ್ತಿತ್ತು. ದುರದೃಷ್ಟವಶಾತ್, ಸರಕಾರಿ ನಿಯಂತ್ರಿತ ಮಾಧ್ಯಮಗಳು ಮೋದಿ ಆಡಳಿತದಲ್ಲಿ ವಿಭಿನ್ನ ಮಾನದಂಡವನ್ನು ಅನುಸರಿಸತೊಡಗಿದೆ. ಬಜೆಟ್ನಲ್ಲಿ ಸಾಮಾಜಿಕ ಕ್ಷೇತ್ರಗಳಿಗೆ ನಿಧಿಯನ್ನು ಕಡಿತ ಮಾಡಿದರೆ ಅದನ್ನು ‘ಅಭಿವೃದ್ಧಿ ಪರ’ ಬಜೆಟ್, ‘ಓಲೈಕೆ ರಹಿತ ಬಜೆಟ್’ ಎಂದು ವಿಮರ್ಶಿಸುವ ಮಟ್ಟಕ್ಕೆ ಮಾಧ್ಯಮಗಳು ಇಳಿದವು.
ಸಿಲಿಂಡರ್ಗಳ ಮೇಲಿನ ಸಬ್ಸಿಡಿಗಳನ್ನು ಕಿತ್ತು ಹಾಕಿದರೆ, ಅದೊಂದು ಯಶಸ್ವೀ ಕ್ರಮ ಎಂದು ವಿಶ್ಲೇಷಿಸುವ ನೀಚ, ಜನದ್ರೋಹಿ ಕೆಲಸಗಳಿಗೆ ಮಾಧ್ಯಮಗಳು ಮುಂದಾಗಿವೆ. ಇದರಿಂದ ಸರಕಾರಕ್ಕೆ ಆದಾಯಗಳು ಹೆಚ್ಚುತ್ತವೆ ಎನ್ನುವ ಈ ಮಾಧ್ಯಮಗಳು, ಜನರ ಯೋಗಕ್ಷೇಮಗಳನ್ನು ಕಿತ್ತುಕೊಂಡು ಸರಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೂ, ರೈತರಿಂದ ಬಡ್ಡಿ ವಸೂಲಿ ಮಾಡಿ ಆತ್ಮಹತ್ಯೆಗೆ ತಳ್ಳುತ್ತಿರುವ ಬ್ಲೇಡ್ ಕಂಪೆನಿಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎನ್ನುವುದನ್ನು ಮರೆತಿವೆ.ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸಾಮಾಜಿಕ ಕ್ಷೇತ್ರಗಳಿಗೆ ಅನುದಾನವನ್ನು ಕಡಿತಗೊಳಿಸಿದೆ. ನೋಟು ನಿಷೇಧ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಉದ್ದಿಮೆಗಳನ್ನು ಸರ್ವನಾಶ ಮಾಡಿದ ಬೆನ್ನಿಗೇ ಜಿಎಸ್ಟಿ ತೆರಿಗೆಯನ್ನು ಅನುಷ್ಠಾಗೊಳಿಸಲಾಯಿತು. ಅತ್ಯಂತ ಅವೈಜ್ಞಾನಿಕವಾಗಿ ವಿಧಿಸಲಾಗಿರುವ ಈ ತೆರಿಗೆಯನ್ನೂ ಮಾಧ್ಯಮಗಳು ಸಂಭ್ರಮಿಸಿದವು.
ಇದರಿಂದ ಜನರಿಗಾದ ಒಳಿತುಗಳು ಏನು ಎಂದು ಕೇಳಿದರೆ ಒಂದೇ ಮಾತು ‘‘ಸರಕಾರದ ಆದಾಯ ಹೆಚ್ಚಿತು’. ಸರಕಾರವೆಂದರೆ ಒಂದು ಉದ್ದಿಮೆಯೆ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಸರಕಾರವಿರುವುದು ಶ್ರೀಸಾಮಾನ್ಯನ ಸೇವೆಗೇ ಹೊರತು, ಅದು ಸುಂಕ ವಸೂಲಿ ಮಾಡುವ ಕೊತ್ವಾಲನಲ್ಲ. ಜನರ ಸಬ್ಸಿಡಿಗಳನ್ನು ಕಿತ್ತು, ರೈತರ ಭೂಮಿಯನ್ನು ಕಿತ್ತು, ಬಡಜನರ ಬದುಕುವ ಹಕ್ಕನ್ನು ಕಿತ್ತು ಸರಕಾರ ಸಂಗ್ರಹಿಸುವ ಹಣದಿಂದ ದೇಶ ಅಭಿವೃದ್ಧಿ ಆಗುತ್ತಿದೆ ಎಂದು ಹೇಗೆ ನಂಬುವುದು? ಬರೇ ಕಾರ್ಪೊರೇಟ್ ಮಂದಿಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದನ್ನೇ ಅಭಿವೃದ್ಧಿ ಎಂದು ಕರೆಯುವುದಾದರೆ, ಈ ದೇಶದ ಶೇ. 75ಜನರಿಗೂ ಭಾರತಕ್ಕೂ ಯಾವ ಸಂಬಂಧವೂ ಇಲ್ಲ ಎಂದಾಯಿತಲ್ಲವೆ ?
ಮಾಧ್ಯಮಗಳನ್ನು ಒಂದೆಡೆ ಬಾಯಿ ಮುಚ್ಚಿಸಿರುವ ಕೇಂದ್ರ ಸರಕಾರ, ವಿಪಕ್ಷಗಳನ್ನೂ ತಮ್ಮ ಗೂಂಡಾಗಳ ಮೂಲಕ ಬೆದರಿಸುವ ಕೆಲಸವನ್ನು ಮಾಡುತ್ತಿದೆ. ಇತ್ತೀಚೆಗೆ ಗುಜರಾತ್ಗೆ ತೆರಳಿದ ರಾಹುಲ್ಗಾಂಧಿಯ ಮೇಲೆ ನಡೆದಿರುವ ಬರ್ಬರ ಹಲ್ಲೆ, ತನ್ನ ವಿರುದ್ಧ ಮಾತನಾಡಿದರೆ ಎಂತಹ ಕೃತ್ಯಕ್ಕೂ ಇಳಿಯಬಲ್ಲೆವು ಎಂದು ವಿರೋಧ ಪಕ್ಷಗಳಿಗೆ ನೀಡಿದ ಎಚ್ಚರಿಕೆಯಾಗಿದೆ. ತಮ್ಮನ್ನು ಯಾರೂ ಪ್ರಶ್ನಿಸಬಾರದು. ಪ್ರಶ್ನಿಸಿದ್ದೇ ಆದರೆ ಅವರ ಮೇಲೆ ಸಿಬಿಐ, ಐಟಿ ದಾಳಿಗಳನ್ನು ನಡೆಸಲಾಗುತ್ತದೆ. ಅದಕ್ಕೂ ಬಗದಿದ್ದಲ್ಲಿ ಸಂಘಪರಿವಾರದ ಗೂಂಡಾಗಳನ್ನು ಬಳಸಿ ಹಲ್ಲೆ ನಡೆಸಲಾಗುತ್ತದೆ.
ಇದೊಂದು ರೀತಿಯಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಹೈಜಾಕ್ ಮಾಡುವ ಪ್ರಯತ್ನ. ತನ್ನ ಆಡಳಿತವನ್ನು ಯಾರೂ ಯಾವ ರೀತಿಯಲ್ಲೂ ಪ್ರಶ್ನಿಸಲೇಬಾರದು ಎನ್ನುವಂತಹ ಸ್ಥಿತಿ ನಿರ್ಮಾಣ ಮಾಡುವುದೆಂದರೆ ಅದು ಅಘೋಷಿತ ತುರ್ತು ಪರಿಸ್ಥಿತಿಯೇ ಸರಿ. ಅಳಿದುಳಿದ ಜಾತ್ಯತೀತ ಪಕ್ಷಗಳು ಇನ್ನೂ ಒಂದಾಗದೇ ಇದ್ದರೆ ಶೀಘ್ರದಲ್ಲೇ ಈ ದೇಶ ತುರ್ತು ಪರಿಸ್ಥಿತಿ ಘೋಷಣೆಯನ್ನೇ ಪಟಾಕಿ ಸಿಡಿಸಿ ಸಂಭ್ರಮಿಸಲಿದೆ ಮತ್ತು ಈ ಬಾರಿಯ ತುರ್ತುಪರಿಸ್ಥಿತಿ 70ರ ದಶಕದಲ್ಲಿ ಇಂದಿರಾಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿಗಿಂತ ಕಠೋರವಾಗಲಿದೆ. ಯಾಕೆಂದರೆ ಹಿಂದಿನ ತುರ್ತುಪರಿಸ್ಥಿತಿ ದೇಶದ ಬಡವರನ್ನು, ತಳಸ್ತರವನ್ನು ಬಾಧಿಸಿರಲಿಲ್ಲ. ಆದರೆ ಮುಂದೆ ವಿಧಿಸಬಹುದಾಗಿರುವ ತುರ್ತುಪರಿಸ್ಥಿತಿಯ ಬಲಿಪಶುಗಳು ಈ ದೇಶದ ತಳಸ್ತರದ ಜನರಾಗಿರುತ್ತಾರೆ.