ಆ.12 ರಂದು ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

ಮಡಿಕೇರಿ ಜು.24 : 26ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಆಗಸ್ಟ್ 12 ರಂದು ಕಗ್ಗೋಡ್ಲು ಗ್ರಾಮದ ದಿ. ಸಿ.ಡಿ ಬೋಪಯ್ಯನವರ ಗದ್ದೆಯಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಕ್ರೀಡಾಕೂಟದ ಕುರಿತು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ.ಜೋಯಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಾಲಿಬಾಲ್ ಪುರುಷರ ವಿಭಾಗ, ಥ್ರೋಬಾಲ್ ಮಹಿಳೆಯರ ವಿಭಾಗ, ಹಗ್ಗ ಜಗ್ಗಾಟ ಪುರುಷರ ವಿಭಾಗ, ಹಗ್ಗ ಜಗ್ಗಾಟ ಮಹಿಳೆಯರ ವಿಭಾಗ, ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕರಿಗೆ, ಹಗ್ಗ ಜಗ್ಗಾಟ ಸ್ಪರ್ಧೆ ಪ್ರೌಢಶಾಲಾ ಬಾಲಕಿಯರಿಗಾಗಿ ನಡೆಯಲಿದೆ.
ಕಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 50ಮೀ ಓಟ, ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ 50ಮೀ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 100ಮೀ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ 100ಮೀ ಓಟ, ಪ್ರೌಢ ಶಾಲಾ ಬಾಲಕರಿಗೆ 200ಮೀ ಓಟ, ಪ್ರೌಢ ಶಾಲಾ ಬಾಲಕಿಯರಿಗೆ 200ಮೀ ಓಟ, ಪದವಿ ಪೂರ್ವ ಕಾಲೇಜು ಬಾಲಕರಿಗೆ 300 ಮೀ.ಓಟ, ಪದವಿ ಪೂರ್ವ ಕಾಲೇಜು ಬಾಲಕಿಯರಿಗೆ 300 ಮೀ.ಓಟ, ಪ್ರಾಥಮಿಕ, ಪೌಢ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ರಿಲೇ ಓಟ, ಸಾರ್ವಜನಿಕ ಪುರುಷರ ಮುಕ್ತ ಓಟ, ಸಾರ್ವಜನಿಕ ಮಹಿಳೆಯರ ಮುಕ್ತ ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದೆಂದು ಜೋಯಪ್ಪ ತಿಳಿಸಿದರು.
ಕೆಸರು ಗದ್ದೆ ಕ್ರೀಡಾಕೂಟದ ಪುರುಷರ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಕ್ಕೆ 10 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 6 ಸಾವಿರ ರೂ. ನಗದು ಮತ್ತು ಟ್ರೋಫಿ, ಹಗ್ಗಜಗ್ಗಾಟ ಸ್ಪರ್ಧೆಯ ವಿಜೇತ ತಂಡಕ್ಕೆ 10 ಸಾವಿರ ರೂ. ಮತ್ತು ರನ್ನರ್ಸ್ ಅಪ್ ತಂಡಕ್ಕೆ 6 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ.
ಮಹಿಳೆೆಯರ ವಿಭಾಗದ ಥ್ರೋಬಾಲ್ ಪಂದ್ಯಾವಳಿಯ ವಿಜೇತ ತಂಡಕ್ಕೆ 6 ಸಾವಿರ ರೂ. ಮತ್ತು ರನ್ನರ್ಸ್ ಅಪ್ ತಂಡಕ್ಕೆ 4 ಸಾವಿರ ಮತ್ತು ಟ್ರೋಫಿ, ಹಗ್ಗಜಗ್ಗಾಟದಲ್ಲಿ ವಿಜೇತ ತಂಡಕ್ಕೆ 6 ಸಾವಿರ ರೂ. ಮತ್ತು ರನ್ನರ್ಸ್ ಅಪ್ ತಂಡಕ್ಕೆ 4 ಸಾವಿರ ರೂ. ಮತ್ತು ಟೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಜೋಯಪ್ಪ ಮಾಹಿತಿ ನೀಡಿದರು.
ಶನಿವಾರ ಬೆಳಗ್ಗೆ 9 ಗಂಟೆಗೆಕ್ರೀಡೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಮ್ ಉದ್ಘಾಟಿಸಲಿದ್ದು, ಜಿಪಂ ಅಧ್ಯಕ್ಷರಾದ ಬಿ.ಎ. ಹರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭವು ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ಸುನಿಲ್ ಸುಬ್ರಮಣಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ಸುಬ್ರಮಣಿ, ಜಿಲ್ಲಾಧಿಕಾರಿಗಳಾದ ಡಾ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಕಾರ್ಯದರ್ಶಿ ಬಾಳಾಡಿ ದಿಲೀಪ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪಿ.ಪಿ.ಸುಕುಮಾರ್, ಮಡಿಕೇರಿ ತಾಲ್ಲೂಕು ಒಕ್ಕೂಟದ ಖಜಾಂಚಿ ಸಿ.ಯು.ಭೀಮಯ್ಯ ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾದ ಮಡಿಕೆೇರಿ ಘಟಕದ ಉಪಾಧ್ಯಕ್ಷರಾದ ಕೆ.ಬಿ. ವಿಜಯ ಕುಮಾರ್ ಉಪಸ್ಥಿತರಿದ್ದರು. ಹೆಚ್ಚಿನ ವಿವರಗಳಿಗೆ 9449952008, 9740404520, 9901316315, 9480674546, 9481213920 ನ್ನು ಸಂಪರ್ಕಿಸಬಹುದಾಗಿದೆ.







