ಜಿನೇವಾ ಒಪ್ಪಂದ ದಿನಾಚರಣೆ: ಆ.12 ನಿಧಿ ಸಂಗ್ರಹಣಾ ಜಾಥಾ
ಉಡುಪಿ, ಆ.10: ಜಿನೇವಾ ಒಪ್ಪಂದ ದಿನಾಚರಣೆಯನ್ನು ಆ.12ರಂದು ಬೆಳಗ್ಗೆ 9:30ಕ್ಕೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಆಚರಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಲಿರುವರು.
ಆ ಪ್ರಯುಕ್ತ ಬೆಳಗ್ಗೆ 9:45ಕ್ಕೆ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಮೆರವಣಿಗೆ ನಡೆಯಲಿದೆ. ಜಿನೇವಾ ಒಪ್ಪಂದ ದಿನಾಚರಣೆಯೊಂದಿಗೆ ನಿಧಿ ಸಂಗ್ರಹಣಾ ಕಾರ್ಯಕ್ರಮವೂ ನಡೆಯಲಿದೆ. ಅಜ್ಜರಕಾಡು ಕ್ರೀಡಾಂಗಣದಿಂದ ರಥಬೀದಿಯ ರಾಜಾಂಗಣದ ತನಕ ಸಾಗುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹುಂಡಿ(ಡಬ್ಬಿ)ಗಳೊಂದಿಗೆ ಸಾರ್ವಜನಿಕರನ್ನು ಸಂಪರ್ಕಿಸಲಿದ್ದು, ಸಾರ್ವಜನಿಕರು ಉದಾರ ದೇಣಿಗೆ ನೀಡಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ಸಮಾರೋಪ ಸಮಾರಂಭ ಅಪರಾಹ್ನ 12:30ಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದ್ದು, ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮಿ ಆಶೀರ್ವಚನ ನೀಡುವರು ಎಂದು ರೆಡ್ಕ್ರಾಸ್ನ ಪ್ರಕಟಣೆ ತಿಳಿಸಿದೆ.







