ತಾರತಮ್ಯ ಬೇಡ, ಸರ್ವರಿಗೂ ಮಾತನಾಡಲು ಅವಕಾಶವಿರಲಿ
ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಸದಸ್ಯರ ಭಿನ್ನಹ

ಹೊಸದಿಲ್ಲಿ, ಆ.11: ರಾಜ್ಯಸಭೆಯ ನೂತನ ಸಭಾಪತಿ ವೆಂಕಯ್ಯ ನಾಯ್ಡುರಿಗೆ ರಾಜ್ಯಸಭೆಯ ಸದಸ್ಯರು ಇಂದು ಹಾರ್ದಿಕ ಸ್ವಾಗತ ಕೋರಿದರು.
ನಾಯ್ಡುರಿಗೆ ಅಭಿನಂದನೆ ಸಲ್ಲಿಸಿದ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್, ರಾಜ್ಯಸಭೆಯ ಸಭಾಪತಿ ಸ್ಥಾನ ಪಡೆದ ಬಳಿಕ ಈಗ ನಾಯ್ಡು ಯಾವುದೇ ಪಕ್ಷಕ್ಕೆ ಸೇರದ ಸ್ವತಂತ್ರ ವ್ಯಕ್ತಿಯಾಗಿದ್ದಾರೆ .ವೆಂಕಯ್ಯ ನಾಯ್ಡು ತಮ್ಮ ಧರ್ಮ ಅಥವಾ ಪಕ್ಷದ ಕುರಿತ ಭಾವನೆಯನ್ನು ಕಾರ್ಯದಲ್ಲಿ ವ್ಯಕ್ತಪಡಿಸದೆ ತನ್ನ ಮನಸ್ಸಿನಲ್ಲೇ ಇರಿಸಿಕೊಳ್ಳಬೇಕು ಎಂದರು.
ರಾಜ್ಯಸಭೆಯ ಅಧ್ಯಕ್ಷ (ಸಭಾಪತಿ)ಯ ಪೀಠವು ಸಮತೋಲನದ ಸಂಕೇತವಾಗಿದೆ. ಇಲ್ಲಿ ಕುಳಿತವರು ಎಲ್ಲರಿಗೂ ನ್ಯಾಯ ಒದಗಿಸಬೇಕೆಂಬ ಅಪೇಕ್ಷೆಯಿದೆ. ಅಲ್ಲದೆ ಸಣ್ಣ, ದೊಡ್ಡ ಪಕ್ಷಗಳ ಸದಸ್ಯರೆಂಬ ಪಕ್ಷಪಾತವಿಲ್ಲದೆ ಸರ್ವರಿಗೂ ಸ್ಥಳಾವಕಾಶ ಕಲ್ಪಿಸುವ , ಮಾತನಾಡಲು ಅವಕಾಶ ನೀಡುವ ಸಂಪ್ರದಾಯವಿದೆ ಎಂದವರು ಹೇಳಿದರು. ಯಾವುದೇ ಮಸೂದೆಯನ್ನು ಕೋಲಾಹಲದ ಮಧ್ಯೆ ಅಂಗೀಕರಿಸಿದ ಸಂಪ್ರದಾಯ ಇಲ್ಲಿಲ್ಲ. ಇದೇ ಸಂಪ್ರದಾಯ ಮುಂದುವರಿಯಲಿ ಎಂದವರು ಹೇಳಿದರು.
ಸಣ್ಣ ಪಕ್ಷಗಳ ಸದಸ್ಯರಿಗೂ ಮಾತಾಡಲು ಅವಕಾಶ ಸಿಗಬಹುದು ಎಂದು ಆಶಿಸಿದ ಸಮಾಜವಾದಿ ಪಕ್ಷದ ರಾಮ್ಗೋಪಾಲ್ ಯಾದವ್, ಸದನದ ಕಲಾಪ ಸುಸೂತ್ರವಾಗಿ ಸಾಗುವುದು ಸಭಾಪತಿಯವರೊಬ್ಬರ ಜವಾಬ್ದಾರಿಯಲ್ಲ. ಗದ್ದಲ ಎಬ್ಬಿಸುವವರೂ ಈ ಬಗ್ಗೆ ಯೋಚಿಸಬೇಕು ಎಂದರು.
ಸಭಾಪತಿ ಯಾವಾಗಲೂ ವಿಪಕ್ಷದ ಅಭಿಪ್ರಾಯಕ್ಕೆ ಕಿವಿಗೊಡುತ್ತಾರೆ ಎಂದು ಆಶಿಸುವುದಾಗಿ ಟಿಎಂಸಿಯ ಮುಖಂಡ ಡೆರೆಕ್ ಒ’ಬ್ರಿಯಾನ್ ಹೇಳಿದರು. ಅಲ್ಲದೆ ಗದ್ದಲದ ನಡುವೆ ಮಸೂದೆ ಅಂಗೀಕರಿಸುವ ತಪ್ಪನ್ನು ನಾಯ್ಡು ಮಾಡುವುದಿಲ್ಲ. ಅವರು ತಮ್ಮ ಹಾಸ್ಯಪ್ರಜ್ಞೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಅಚಲ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಪ್ರಾಸಬದ್ಧವಾಗಿ ಮಾತನಾಡುವ ಚಾತುರ್ಯವನ್ನು ನಾಯ್ಡು ಮುಂದುವರಿಸಬೇಕು ಎಂದ ಅವರು, ನಾಯ್ಡು ಈಗ ‘ಅಖಿಲ ಭಾರತ ಒಲವಿನ ಅಂಪೈರ್’ ಎಂಬರ್ಥ ಬರುವ ಪ್ರಾಸಬದ್ಧ ನುಡಿಗಟ್ಟನ್ನು ಉಚ್ಚರಿಸಿದರು.
ಎಐಎಡಿಎಂಕೆಯ ಎ.ನವನೀತಕೃಷ್ಣನ್ ಮಾತನಾಡಿ, ಸಭಾಪತಿ ದೇಶದ ಯಾವುದೇ ಮೂಲೆಯ ಜೊತೆ ಅಥವಾ ರಾಜ್ಯಸಭೆಯ ಯಾವುದೇ ಸದಸ್ಯರ ಜೊತೆ ಪರಿಣಾಮಕಾರಿ ಸಂಪರ್ಕ ಸಾಧಿಸಬಹುದಾಗಿದೆ ಎಂದರು.
ರಾಜ್ಯಸಭೆಯಲ್ಲಿ ನಾಯ್ಡು ಅವರ ಹೊಸ ಇನ್ನಿಂಗ್ಸ್ ಪ್ರಸಿದ್ಧಿ ಪಡೆಯಲಿ ಎಂದು ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ ಆಶಿಸಿದರು. ಸಭಾಪತಿಯಾಗಿ ನಾಯ್ಡು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಾರೆ. ನಾನು ಅವರನ್ನು ಕಳೆದ 40 ವರ್ಷಗಳಿಂದ ಬಲ್ಲೆ. ರಾಜ್ಯಸಭೆಯ ಕಲಾಪಗಳನ್ನು ನ್ಯಾಯೋಚಿತವಾಗಿ ಹಾಗೂ ಘನತೆಯಿಂದ ನಿರ್ವಹಿಸಲು ಅವರು ಸಮರ್ಥರು ಎಂದು ಯೆಚೂರಿ ನುಡಿದರು.
ಸಂಸತ್ತು ನಿಷ್ಕ್ರಿಯವಾಗಿದ್ದರೆ ಅಥವಾ ತನ್ನ ಜವಾಬ್ದಾರಿ ನಿರ್ವಹಿಸಲು ವಿಫಲವಾದರೆ ಜನತೆಯ ಸಾರ್ವಭೌಮತೆ ಅರ್ಥ ಕಳೆದುಕೊಳ್ಳುತ್ತದೆ. ಇದಕ್ಕೆ ಅವಕಾಶ ನೀಡಲಾಗದು. ನಾಯ್ಡು ಅವರೀಗ ನಮ್ಮ ಸಂವಿಧಾನದ ರಕ್ಷಕರ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಬಿಎಸ್ಪಿಯ ಎಸ್.ಸಿ.ಮಿಶ್ರ ಮಾತನಾಡಿ, ತಾನು ನಾಯ್ಡು ಅವರ ಪ್ರಶಂಸಕನಾಗಿದ್ದು ಸದನದ ಎಲ್ಲಾ ಸದಸ್ಯರಿಗೂ ಮಾತನಾಡಲು ಸಮಾನ ಅವಕಾಶ ನಿರೀಕ್ಷಿಸುವುದಾಗಿ ಹೇಳಿದರು. ಜುಲೈ 18ರಂದು ಪಕ್ಷದ ನಾಯಕಿ ಮಾಯಾವತಿಗೆ ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗಿತ್ತು. ಈ ರೀತಿಯ ಘಟನೆ ಮರುಕಳಿಸದು ಎಂದು ನಿರೀಕ್ಷಿಸುವುದಾಗಿ ಮಿಶ್ರ ಹೇಳಿದರು. ಈಗ ಕಟ್ಟುನಿಟ್ಟಿನ ಪ್ರಾಂಶುಪಾಲರ ಆಗಮನವಾಗಿದೆ. ಆದ್ದರಿಂದ ವಿಪಕ್ಷಗಳು ಹೆಚ್ಚು ಜಾಗರೂಕವಾಗಿರಬೇಕು ಎಂದು ಕೆಲವರು ತನ್ನ ಬಳಿ ಹೇಳಿದ್ದರು. ಆದರೆ ಜಾಗರೂಕವಾಗಿರಬೇಕಿರುವುದು ಆಡಳಿತ ಪಕ್ಷದ ಸದಸ್ಯರು ಎಂಬುದು ತನ್ನ ಭಾವನೆ ಎಂದವರು ನುಡಿದರು. ಬಹು ಪಕ್ಷಗಳನ್ನು ಒಳಗೊಂಡಿರುವ ಪ್ರಜಾಪ್ರಭುತ್ವದ ಮಹತ್ವಕ್ಕೆ ನಾಯ್ಡು ಮನ್ನಣೆ ನೀಡುತ್ತಾರೆ ಎಂಬುದು ತನ್ನ ನಿರೀಕ್ಷೆಯಾಗಿದೆ ಎಂದು ಸಿಪಿಐ ಪಕ್ಷದ ಡಿ.ರಾಜ ಹೇಳಿದರು.
ರಾಜ್ಯಸಭೆಯಲ್ಲಿ ಚರ್ಚೆಯ ಗುಣಮಟ್ಟ ಕುಂದುತ್ತಾ ಹೋಗುತ್ತಿರುವ ಬಗ್ಗೆ ನಾಯ್ಡು ಗಮನ ಹರಿಸಬೇಕು ಎಂದು ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಹೇಳಿದರು. ರೈತನ ಮಗನೋರ್ವ ಉಪರಾಷ್ಟ್ರಪತಿಯಾಗಬೇಕು ಮತ್ತು ದಲಿತನ ಮಗನೋರ್ವ ರಾಷ್ಟ್ರಪತಿಯಾಗಬೇಕು ಎಂಬ ಕನಸು ಸುದೀರ್ಘ ಕಾಲದ ಬಳಿಕ ನನಸಾಗಿದೆ ಎಂದು ಶಿರೋಮಣಿ ಅಕಾಲಿ ದಳದ ಬಲ್ವಿಂದರ್ ಸಿಂಗ್ ಭುಂದರ್ ಹೇಳಿದರು.
ಕಳೆದ ಕೆಲ ವರ್ಷಗಳಿಂದ ರಾಜ್ಯಸಭೆಯ ಕಲಾಪ ನೀರಸವಾಗಿ ಸಾಗುತ್ತಿದ್ದು ಈಗ ನಾಯ್ಡು ಅವರ ವಾಕ್ಚಾತುರ್ಯ ಕಲಾಪಕ್ಕೆ ವಿನೋದದ ಮೆರುಗು ನೀಡಬಹುದು ಎಂದು ಟಿಆರ್ಎಸ್ನ ಕೇಶವ್ ರಾವ್ ನುಡಿದರು.
ಸದನದ ಸುಗಮ ಕಲಾಪಕ್ಕೆ ನಾಯ್ಡು ಅವರಿಗೆ ಪೂರ್ಣ ಸಹಕಾರ ನೀಡುವುದಾಗಿ ಜೆಡಿಯು ಪಕ್ಷದ ವಶಿಷ್ಟ ನಾರಾಯಣ್ ಸಿಂಗ್, ಬಿಜೆಡಿಯ ದಿಲೀಪ್ ಟಿರ್ಕೆ, ಟಿಡಿಪಿಯ ಪಿ.ಎಂ.ರಮೇಶ್, ಡಿಎಂಕೆಯ ತಿರುಚಿ ಶಿವ ಹೇಳಿದರು.
ವೆಂಕಯ್ಯ ನಾಯ್ಡು ಅವರೋರ್ವ ಕ್ರಾಂತಿಕಾರಿ ಎಂದು ಬಣ್ಣಿಸಿದ ಶಿವಸೇನೆಯ ಸಂಜಯ್ ರಾವತ್, ಅವರು ದ್ವಿತೀಯ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು ಎಂದು ತುರ್ತುಪರಿಸ್ಥಿತಿಯ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು. ತುರ್ತುಪರಿಸ್ಥಿತಿ ಸಂದರ್ಭ ಜೈಲಿಗೂ ಹೋಗಿದ್ದ ನಾಯ್ಡು, ಆ ಬಳಿಕ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಗೆ ಸೇರಿಕೊಂಡರು. ಹೋರಾಟ ಎಂದರೆ ಏನೆಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ರಾವತ್ ನುಡಿದರು. ಓರ್ವ ವಿದ್ಯಾರ್ಥಿ ಮುಖಂಡನಾಗಿ ರಾಜಕೀಯಕ್ಕೆ ಕಾಲಿರಿಸಿದ್ದ ನಾಯ್ಡು ಆ ಬಳಿಕ ಬಿಜೆಪಿಯ ವಿದ್ಯಾರ್ಥಿ ವಿಭಾಗದ ಮುಖಂಡರಾದರು. ಈಗ ನನ್ನಂತಹ ‘ವಿದ್ಯಾರ್ಥಿಗಳಿರುವ’ ತರಗತಿಯ ಮುಖಂಡರಾಗಿದ್ದಾರೆ ಎಂದ ಅವರು , ಆದರೆ ಇವರೆಲ್ಲಾ ಒಳ್ಳೆಯ ವಿದ್ಯಾರ್ಥಿಗಳು. ನಿಮ್ಮ ರಕ್ತದೊತ್ತಡ ಏರಲು ಅವಕಾಶ ನೀಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದರು .
ಸದನದ ಕಲಾಪವನ್ನು ನಿರ್ವಹಿಸುವುದು ಬಹಳ ಕಷ್ಟದ ಕೆಲಸ ಎಂದು ವಿನೋದವಾಗಿ ಹೇಳಿದ ವೈಎಸ್ಆರ್-ಸಿ ಪಕ್ಷದ ಮುಖಂಡ ರಾಮದಾಸ್ ಅಠವಳೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುವುದು ಸುಲಭವಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು. ನನಗೆ ಮಾತನಾಡಲು ಅವಕಾಶ ನೀಡಿ, ಇಲ್ಲವಾದರೆ ಸದನದ ಕಲಾಪ ನಿರ್ವಹಿಸುವುದು ಕಷ್ಟವಾದೀತು. ನಮ್ಮನ್ನು ಸುಮ್ಮನಿರಿಸಲು ನಿಮಗೊಂದು ಅವಕಾಶ ನೀಡಲಾಗಿದೆ. ಆದರೆ ನಾವಿಲ್ಲಿ ಸುಮ್ಮನಿರಲು ಬಂದವರಲ್ಲ, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಬಂದವರು ಎಂದವರು ಹೇಳಿದರು.







