ಸ್ವಾತಂತ್ರ್ಯ ದಿನದಂದು ಜಿಲ್ಲಾ ಕೇಂದ್ರದಲ್ಲಿ ‘ಅಣಕು ಇಂದಿರಾ ಕ್ಯಾಂಟೀನ್’ : ಮುನೀರ್ ಕಾಟಿಪಳ್ಳ
ಮಂಗಳೂರು.ಆ,12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಆ.15ರಂದು ಬೆ.11ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ‘ಅಣಕು ಇಂದಿರಾ ಕ್ಯಾಂಟೀನ್ ’ಆರಂಭಿಸಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿರುವುದು ಉತ್ತಮ ಆದರೆ ಅದನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಿರುವುದು ಸರಿಯಲ್ಲ ಮಂಗಳೂರಿಗೂ ವಿಸ್ತರಿಸಬೇಕಿತ್ತು. ಕ್ಯಾಂಟೀನ್ನನ್ನು ಕೇರಳ ಮಾವೇಲಿ ಮಾದರಿಯ ಕಡಿಮೆ ದರದ ಕ್ಯಾಂಟೀನನ್ನು ಆರಂಭಿಸಬೇಕು.ಜೊತೆಗೆ ಖಾಸಗಿ ಉಪಹಾರ ಗೃಹಗಳ ಬೆಲೆ ನಿಯಂತ್ರಿಸುವ ಬಗ್ಗೆ ಕ್ರಮ ಕೈ ಗೊಳ್ಳಬೇಕು ಎಂದು ಡಿವೈಎಫ್ ಆಗ್ರಹಿಸುತ್ತದೆ.
ಕಳೆದ ಐದು ವರ್ಷಗಳಿಂದ ಉಪಹಾರ ಗೃಹಗಳಲ್ಲಿ ಬೆಲೆ ಇಳಿಕೆ ಮಾಡಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತಾ ಬಂದಿದೆ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ಜೊತೆಗೆ ಜನಸಾಮಾನ್ಯರಿಗೂ ದುಬಾರಿಯಾಗುತ್ತಿದೆ.ಬೆಲೆಗಳು ಕೈಗೆಟಕುತ್ತಿಲ್ಲ ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಗರದಲ್ಲಿ ಆರಂಭಿಸಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಜಿಎಸ್ಟಿ ದರದೊಂದಿಗೆ ಬೆಲೆ ಏರಿಕೆ: ಕೇಂದ್ರ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ )ಯನ್ನು ಜಾರಿಗೊಳಿಸಿದ ಬಳಿಕ ಕೆಲವು ಹೊಟೇಲ್ಗಳಲ್ಲಿ ಸರಕಾರಕ್ಕೆ ಈ ತೆರಿಗೆಯನ್ನು ಕಟ್ಟದೆ ಗ್ರಾಹಕರಿಂದ ಜಿಎಸ್ಟಿ ನೆಪದಲ್ಲಿ ಹಣ ಸುಲಿಯುವುದು ನಡೆಯುತ್ತಿದೆ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈ ಗೊಳ್ಳಬೇಕು ಇಲ್ಲದಿದ್ದರೆ ಜನಸಾಮಾನ್ಯರು ಜಿಎಸ್ಟಿ ಹೆಸರಿನಲ್ಲಿ ಇನ್ನಷ್ಟು ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸಂತೋಷ್ ಬಜಾಲ್,ಬಿ.ಕೆ.ಇಮ್ತಿಯಾಜ್,ಮನೋಜ್ ವಾಮಂಜೂರು, ಸಾದಿಕ್ ಕಣ್ಣೂರು, ರಫೀಕ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.