ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ : ಆರೋಪಿ ಬಂಧನ
ಮಂಗಳೂರು, ಆ. 12: ಕತಾರ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕುಲಶೇಖರ ನಿವಾಸಿ ಜೇಮ್ಸ್ ಡಿಮೆಲ್ಲೋ(35) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಜೇಮ್ಸ್ ಏಜೆಂಟ್ ಆಗಿದ್ದು, ಕಾರ್ಕಳದ ಮುದರಂಗಡಿ ನಿವಾಸಿ ಜೆಸಿಂತಾ ಎಂಬವರನ್ನು ಕತಾರ್ನಲ್ಲಿ ಹೋಂ ನರ್ಸಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಮುಂಬಯಿಗೆ ಕಳುಹಿಸಿದ್ದರು. ಮುಂಬಯಿಯ ಏಜೆಂಟ್ ಶಾಬಾ ಖಾನ್ ಎಂಬಾತ ಆಕೆಯನ್ನು ಕತಾರ್ಗೆ ಕಳುಹಿಸದೆ, ಸೌದಿ ಅರೇಬಿಯಾ ವ್ಯಕ್ತಿಯೊಬ್ಬನಿಂದ ಹಣ ಪಡೆದು 1 ವರ್ಷದ ಹಿಂದೆ ಅಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಇದರಿಂದ ಜೆಸಿಂತಾ ಸೌದಿಯಲ್ಲಿ ದಿಗ್ಬಂಧನ ಸ್ಥಿತಿಗೆ ತಲುಪಿ, ಭಾರತಕ್ಕೆ ಮರಳದ ಸ್ಥಿತಿಯಲ್ಲಿದ್ದಾರೆ. ತನಗಾಗಿರುವ ಮೋಸವನ್ನು ಜೆಸಿಂತಾ ಮನೆಯವರಿಗೆ ತಿಳಿಸಿದ್ದಾರೆ.
ಮುಂಬಯಿಯ ಶಾಬಾಖಾನ್ ಸೌದಿ ವ್ಯಕ್ತಿಯಿಂದ 5 ಲಕ್ಷ ರೂ. ಹಣ ಪಡೆದುಕೊಂಡಿದ್ದು, ಅದರಲ್ಲಿ 25 ಸಾವಿರ ರೂ. ಜೇಮ್ಸ್ ಡಿಮೆಲ್ಲೋಗೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಡಿಮೆಲ್ಲೋನನ್ನು ಬಂಧಿಸಲಾಗಿದೆ.
ಕದ್ರಿ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯ್ಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.