ಮಹಾರಾಷ್ಟ್ರದಲ್ಲಿ ಗೋರಕ್ಷಕರಿಗೆ ಐಡಿ ಕಾರ್ಡ್!
ನಾಗ್ಪುರ, ಆ.13: ಮಹಾರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಗೋರಕ್ಷಕರಿಗೆ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಮುಖಂಡರೊಬ್ಬರು ಪ್ರಕಟಿಸಿದ್ದಾರೆ. ಗೋರಕ್ಷಕರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಹಾಗೂ ದೇಶದ ವಿವಿಧೆಡೆ ಗುಂಪು ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಬಲಪಂಥೀಯ ಸಂಘಟನೆ ಈ ಸಾಹಸಕ್ಕೆ ಕೈಹಾಕಿದೆ.
"ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗುತ್ತದೆ ಹಾಗೂ ಅವರ ಹೆಸರನ್ನು ಕೂಡಾ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ" ಎಂದು ಪ್ರಾಂತ ಮಂತ್ರಿ ಅಜಯ್ ನಿಲ್ದವಾರ್ ಹೇಳಿದ್ದಾರೆ. ಗೋರಕ್ಷರು ಹಿಂಸಾಚಾರಕ್ಕೆ ಇಳಿಯುತ್ತಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಅಜಯ್ ಮೇಲಿನಂತೆ ಉತ್ತರಿಸಿದರು..
ವಿಎಚ್ಪಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಮೂರು ಬಾರಿ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ನೈಜ ಕಾರ್ಯಕರ್ತರು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಸ್ಪಷ್ಟವಾಗಿ ಬೇರ್ಪಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು.