ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ 2 ಬಸ್ ಗಳು: 50 ಜನರು ಮೃತಪಟ್ಟಿರುವ ಶಂಕೆ
ಶಿಮ್ಲಾ, ಆ.13: ಭೂಕುಸಿತದಿಂದಾಗಿ ಎರಡು ಬಸ್ ಗಳು ಮಣ್ಣಿನಡಿ ಸಿಲುಕಿದ ಪರಿಣಾಮ ಸುಮಾರು 50 ಜನರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕೊಟ್ರೂಪಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಒಂದು ಬಸ್ ಮನಾಲಿಯಿಂದ ಚಂಬಾಗೆ ಹಾಗೂ ಇನ್ನೊಂದು ಮನಾಲಿಯಿಂದ ಜಮ್ಮುವಿನ ಕಾಟ್ರಾಗೆ ತೆರಳುತ್ತಿತ್ತು ಎನ್ನಲಾಗಿದೆ. ಘಟನೆಯಿಂದ 50 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶದ ಸಾರಿಗೆ ಸಚಿವ ಜಿ.ಎಸ್.ಬಾಲಿ ತಿಳಿಸಿದ್ದಾರೆ. ಶನಿವಾರ ತಡರಾತ್ರಿಯಿಂದಲೇ ರಕ್ಷಣಾ ಕಾರ್ಯ ನಡೆಯುತ್ತಿದೆ.
ಮಧ್ಯರಾತ್ರಿಯ ಹೊತ್ತಿಗೆ ಮಂಡಿ ಜಿಲ್ಲಾಡಳಿತಕ್ಕೆ ದುರ್ಘಟನೆಯ ಮಾಹಿತಿ ಲಭಿಸಿದ್ದು, ತಕ್ಷಣವೇ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸೇನೆ ಹಾಗೂ ಎನ್ ಡಿಆರ್ ಎಫ್ ನ ನೆರವನ್ನು ಜಿಲ್ಲಾಡಳಿತ ಕೋರಿದ್ದು, ಇನ್ನೂ ಹೆಚ್ಚಿನ ಜನರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ.
Next Story