ಕೈರಂಗಳ: ನೂತನ ಸಭಾಭವನಕ್ಕೆ ಶಿಲಾನ್ಯಾಸ
ಕೊಣಾಜೆ, ಆ. 14: ಹೂಹಾಕುವ ಕಲ್ಲು ಸಮೀಪದ ಕೈರಂಗಳ ನಂದರಪದವು ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಎಸ್.ಕೆ. ಸಭಾಭವನಕ್ಕೆ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಶಿಲಾನ್ಯಾಸ ನೆರವೇರಿಸಿದರು.
ಸೈಯ್ಯದ್ ಅಶ್ರಫ್ ತಂಙಳ್ ಆದೂರು ಅವರು ದುವಾ ನೆರವೇರಿಸಿದರು. ಅಲ್ ಹಾಜ್ ಅಬ್ಬಾಸ್ ಮುಸ್ಲಿಯಾ ಅಲ್ಮದೀನ ಮಂಜನಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಲಾನ್ಯಾಸ ಕಾರ್ಯಕ್ರಮಕ್ಕಿಂತ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂ. ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಅವರು, ಸಮಾಜದಲ್ಲಿ ಸೌಹಾರ್ದತೆಯ ವಾತಾವಾರಣವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಅಲ್ಲದೆ ಅನೋನ್ಯತೆಯ ಜೀವನವು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಯಾರಿಗೂ ಅರಿಯದಂತೆ ಬಡವರಿಗೆ ಸಹಾಯ ಮಾಡುವರು ಕೆಲವೇ ಜನರು ಇರುತ್ತಾರೆ. ಅಂತವರಲ್ಲಿ ಮುಡಿಪುವಿನ ಎಸ್.ಕೆ. ಖಾದರ್ ಹಾಜಿ ಕೂಡಾ ಒಬ್ಬರು. ಈಗ ಅವರು ಸಭಾಭವನ ನಿರ್ಮಿಸುವುದರ ಮೂಲಕ ಇನ್ನಷ್ಟು ಸಮಾಜಸೇವೆಯು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂ. ಸದಸ್ಯ ಚಂದ್ರಹಾಸ್ ಕರ್ಕೇರಾ, ತಾಲೂಕು ಪಂ. ಸದಸ್ಯ ಹೈದರ್ ಕೈರಂಗಳ, ನವೀನ್ ಪಾದಲ್ಪಾಡಿ, ನೂತನ ಸಭಾಭವನ ಎಸ್.ಕೆ.ಮಲ್ಟಿ ಪರ್ಪಸ್ ಹಾಲ್ನ ಎಸ್.ಕೆ.ಖಾದರ್ ಹಾಜಿ, ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಡಾ.ಮುನೀರ್ ಹಾಜಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಜಿಲ್ಲಾ ಪಂ. ಮಾಜಿ ಸದಸ್ಯ ಎನ್.ಎಸ್.ಕರೀಂ, ಪಜೀರು ಪಂ. ಮಾಜಿ ಅಧ್ಯಕ್ಷ ನಝೀರ್ ಮೊಯ್ದಿನ್, ಇಂಜಿನಿಯರ್ ಸಮದ್, ಸಿರಾಜ್, ರಫೀಕ್ ಮುದುಂಗಾರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಶೀರ್ ಮುಡಿಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.