ಮಂಗಳೂರು: ಸುನ್ನೀ ಸಾಹಿತ್ಯ ಮಂಡಳಿ ಅಸ್ತಿತ್ವಕ್ಕೆ
ಮಂಗಳೂರು, ಆ.14: ಸುನ್ನೀ ಸಾಹಿತ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಎಸ್ಜೆಎಂ, ಎಸ್ವೈಎಸ್ ಮುಖಂಡ ತೋಕೆ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿರವರ ನೇತೃತ್ವದಲ್ಲಿ ಸುನ್ನೀ ಸಾಹಿತ್ಯ ಮಂಡಳಿ(ಸುಸಾಮ)ಗೆ ಚಾಲನೆ ನೀಡಲಾಯಿತು.
ನಗರದ ದೇರಳಕಟ್ಟೆ ತಾಜುಲ್ ಉಲಮಾ ಸುನ್ನೀ ಸೆಂಟರ್ ಕಚೇರಿಯಲ್ಲಿ ನಡೆದ ಸಭೆಯನ್ನು ಎಂ.ಎಂ ಸಖಾಫಿ ಮಂಗಳಪೇಟೆ ಉದ್ಘಾಟಿಸಿದರು.
ಮುಖ್ಯಪ್ರಭಾಷಣ ಮಾಡಿದ ತೋಕೆ ಕಾಮಿಲ್ ಸಖಾಫಿ, ಪ್ರತಿಯೊಂದು ಕ್ರಾಂತಿಯ ಹಿಂದೆ ಅಕ್ಷರ ಕ್ರಾಂತಿಯ ಪಾತ್ರ ಅತ್ಯಂತ ಪ್ರಬಲ ಮತ್ತು ಪರಿಣಾಮಕಾರಿ ಕ್ರಾಂತಿಯಾಗಿದ್ದು, ಪವಿತ್ರ ಅಹ್ಲುಸುನ್ನತಿ ವಲ್ ಜಮಾಅತಿನ ಆಶಯಾದರ್ಶಗಳಿಗೆ ಚ್ಯುತಿ ಬಾರದಂತೆ ಕಾಪಾಡುವ ಮತ್ತು ಸುನ್ನೀ ಸಾಹಿತ್ಯ ಕ್ಷೇತ್ರವನ್ನು ಜಗದಗಲ ವಿಸ್ತರಿಸುವ ಹೊಣೆಗಾರಿಕೆ ಸುನ್ನೀ ಬರಹಗಾರರ ಹೆಗಲ ಮೇಲಿದೆ ಎಂದರು.
ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಸಮಿತಿಯ ನಿರ್ದೇಶಕರಾಗಿ ತೋಕೆ ಕಾಮಿಲ್ ಸಖಾಫಿ, ಅಧ್ಯಕ್ಷರಾಗಿ ಅಬೂಶಝ ಅಬ್ದುರ್ರಝಾಖ್ ಅಲ್ ಖಾಸಿಮಿ ಪುತ್ತೂರು ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಸ್ನೇಹಜೀವಿ ಹಾರಿಸ್ ಅಡ್ಕ, ಮಾಧ್ಯಮ ಕಾರ್ಯದರ್ಶಿಯಾಗಿ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಬಜ್ಪೆ ಮತ್ತು ಕೋಶಾಧಿಕಾರಿಯಾಗಿ ಹೈದರ್ ಅಳಕೆಮಜಲು ರವರನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸಿರಾಜುದ್ದೀನ್ ನಿಝಾಮಿ ಕೂಳೂರು, ನವಾಝ್ ಸಖಾಫಿ ಉಳ್ಳಾಲ, ಹಾರಿಸ್ ಪೆರಿಯಪಾದೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಹಸನ್ ಝುಹ್ರಿ ಮಂಗಳಪೇಟೆ, ಟಿ.ಎಂ ಅನ್ಸಾರ್ ತಂಬಿನಮಕ್ಕಿ, ಯಂಶ ಬೇಂಗಿಲ ಮತ್ತು ಇಪ್ಪತ್ತು ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಕರ್ಮಶಾಸ್ತ್ರ ಸೆಮಿನಾರ್, ದಅವಾ ಸೆಮಿನಾರ್, ಬರಹ ಸಂಗಮ ಮತ್ತು ರಿಲೀಫ್ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಮುನ್ನುಡಿ ಹಾಕಲಾಯಿತು.
ಹಸನ್ ಝುಹ್ರಿ ಮಂಗಳಪೇಟೆ ಸ್ವಾಗತಿಸಿ ವಂದಿಸಿದರು.