ಅಸ್ಸಾಂ: ಶಾಲೆ ನೆರೆ ಆವೃತ್ತವಾಗಿದ್ದರೂ ಧ್ವಜಾರೋಹಣ ನಡೆಸಿದ ಮುಖ್ಯೋಪಾಧ್ಯಾಯ
ಗುವಾಹತಿ, ಆ. 15: ಶಾಲೆಯ ಅಂಗಳದಲ್ಲಿ ಮೊಣಕಾಲು ಮಟ್ಟ ನೀರಿದ್ದರೂ ಅಸ್ಸಾಂನ ಅಧ್ಯಾಪಕರೊಬ್ಬರ ಉತ್ಸಾಹ ಕುಂದಲಿಲ್ಲ. ಅವರು ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯಂದು ಮೂವರು ಸಹೋದ್ಯೋಗಿಗಳು ಹಾಗೂ ಇಬ್ಬರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದರು.
ಬಾಂಗ್ಲಾದೇಶದ ಗಡಿಯಲ್ಲಿರುವ ಪಶ್ಚಿಮ ಅಸ್ಸಾಂನ ಧುಬ್ರಿ ಜಿಲ್ಲೆಯ ಫಕೀರ್ಗಂಜ್ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಝೀಮ್ ಸಿಕ್ದರ್, ಮೂರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಝಿಯಾರುಲ್ ಅಲಿ ಖಾನ್ ಹಾಗೂ ಹೈದರ್ ಅಲಿ ಖಾನ್ ಜೊತೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡರು.
"ಇಂದು ಸ್ವಾತಂತ್ರ ದಿನಾಚರಣೆ. ಭಾರತೀಯರಿಗೆ ಅತೀ ದೊಡ್ಡ ಆಚರಣೆ. ಸೋಮವಾರ ನಮ್ಮ ಶಾಲೆ ನೆರೆಯಿಂದ ಆವೃತವಾಗಿತ್ತು. ಆದರೆ, ಮೂವರು ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸೋಣ ಎಂದು ನಾನು ನನ್ನ ಮೂವರು ಸಹೋದ್ಯೋಗಿಗಳಲ್ಲಿ ಹೇಳಿದೆ. ಈ ಸಂದರ್ಭ ನಾವು ಈಜು ಗೊತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಕರೆದೊಯ್ದೆವು. ಇದು ತುಂಬಾ ಅಪಾಯ. ಆದರೂ ನಾವು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದೆವು. ಉಳಿದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಮೀಪದ ರಸ್ತೆಯಲ್ಲಿ ನಿಂತು ರಾಷ್ಟ್ರಧ್ವಜ ಆರೋಹಣ ವೀಕ್ಷಿಸಿದರು" ಎಂದು 49ರ ಹರೆಯದ ತಝೀಮ್ ಸಿಕ್ದರ್ ತಿಳಿಸಿದ್ದಾರೆ.
"ಸ್ವಾತಂತ್ರ್ಯಕ್ಕಿಂತ ಹಿಂದೆ ನಮ್ಮ ದೇಶವನ್ನು ಯಾರು ಆಳುತ್ತಿದ್ದರು. ನಾವು ಹೇಗೆ ಸ್ವಾತಂತ್ರ ಪಡೆದುಕೊಂಡೆವು. ಸ್ವಾತಂತ್ರ ಚಳವಳಿಯ ನೇತೃತ್ವವನ್ನು ಯಾರು ವಹಿಸಿದರು ಎಂಬ ಬಗ್ಗೆ ನಾನು ಭಾಷಣದಲ್ಲಿ ಹೇಳಿದೆ. ನಮ್ಮ ದೇಶ ರಕ್ಷಿಸುವ ದಿಶೆಯಲ್ಲಿ ನಾವೆಲ್ಲರೂ ಪರಸ್ಪರ ಪ್ರೀತಿ, ಗೌರವ ಹೊಂದಬೇಕು ಹಾಗೂ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು" ಎಂದು ಕೂಡ ನಾನು ಹೇಳಿದ್ದೆ ಎಂದು ಸಿಕ್ದರ್ ತಿಳಿಸಿದ್ದಾರೆ.
"ನಮ್ಮ ಶಾಲೆಯ ಸ್ವಾತಂತ್ರ ದಿನಾಚರಣೆ ಫೋಟೋಗಳು ಪ್ರಧಾನಿ ಅವರ ಕಚೇರಿಗೆ ತಲುಪಿದೆ ಎಂಬ ವಿಚಾರವನ್ನು ನನ್ನ ಗೆಳೆಯರಿಂದ ನಾನು ತಿಳಿದೆ" ಎಂದು ಅವರು ತಿಳಿಸಿದ್ದಾರೆ.