ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರಿಂದ ಮುಷ್ಕರ
ಉಡುಪಿ, ಆ.16: ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ನೇತೃತ್ವದಲ್ಲಿ ಬುಧವಾರ ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಧರಣಿ ನಡೆಸಲಾಯಿತು.
ಜಿಡಿಎಸ್ ನೌಕರರ ಕೆಲಸದ ಅವಧಿ ಎಂಟು ಗಂಟೆ ಮಾಡಿ ಖಾಯಂ ನೌಕರರಂತೆ ಪರಿಗಣಿಸಬೇಕು. ಕಮಲೇಶ ಚಂದ್ರ ವರದಿಯನ್ನು ಕೂಡಲೇ ಜಾರಿ ಗೊಳಿಸಬೇಕು. ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ನೀಡಿದ ಬದಲಾವಣೆ ಸಹಿತ ಜಾರಿಗೊಳಿಸಬೇಕು ಎಂದು ಸಂಘದ ಕಾರ್ಯದರ್ಶಿ ಸಂತೋಷ ಮಧ್ಯಸ್ಥ ಒತ್ತಾಯಿಸಿದರು.
ದೆಹಲಿ ಸಿಎಟಿ ಮತ್ತು ಮದ್ರಾಸ್ ಸಿಎಟಿ ಶಾಖೆ ನೀಡಿದ ಆದೇಶದಂತೆ ನಿಚ್ಛಳ ನಿವೃತ್ತಿ ವೇತನವನ್ನು ನೀಡಬೇಕು. ಅಧಿಕಾರಿಗಳು ಗುರಿ ನೆಪದಲ್ಲಿ ನೌಕರರರಿಗೆ ಹಿಂಸೆ ನೀಡುವುದನ್ನು ನಿಲ್ಲಿಸಬೇಕು. ಇಲಾಖಾ ವರಿಷ್ಠರು 2011ರಲ್ಲಿ ಮಾಡಿದ ಆದೇಶದಂತೆ 2014ರ ಮಾರ್ಚ್ ನಂತರ ನಿವೃತ್ತರಾಗುವ ನೌಕರರಿಗೆ ನಿವೃತ್ತಿ ವೇತನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವ ಬಿಲ್ಲವ, ಕೋಶಾಧಿಕಾರಿ ರಮಾ ನಾಥ ಮೊಲಿ, ಸಹಕಾರ್ಯದರ್ಶಿ ದಿವಾಕರ ಶೆಟ್ಟಿ, ನಾರಾಯಣ, ಪ್ರಮೀಳಾ ಫೆರ್ನಾಂಡಿಸ್, ಕೃಷ್ಣ, ಅನಿತಾ, ಪೂರ್ಣಿಮಾ, ರೈತ ಸಂಘದ ಜಿಲ್ಲಾಧ್ಯಕ್ಷ ರಂಗ ನಾಥ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ಶಂಕರ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.