ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಬ್ಲಡ್ ಡೊನೊರ್ಸ್, ಸ್ಮಾಲ್ ಹೆಲ್ಪ್ ಡೆಸ್ಕ್ ಗ್ರೂಪ್ ಸ್ವಾತಂತ್ರ್ಯೋತ್ಸವ
ಮೈಸೂರು, ಆ. 16: ಬ್ಲಡ್ ಡೊನೊರ್ಸ್ ಮಂಗಳೂರು ಮತ್ತು ಸ್ಮಾಲ್ ಹೆಲ್ಪ್ ಡೆಸ್ಕ್ ಗ್ರೂಪ್ ಮೈಸೂರು ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಮೈಸೂರು: ಸ್ಮಾಲ್ ಹೆಲ್ಪ್ ಡೆಸ್ಕ್ ತಂಡದ ಮತ್ತು ಬ್ಲಡ್ ಡೊನೊರ್ಸ್ ಮಂಗಳೂರು, ಮ್ಯಸೂರ್ ಘಟಕದ ವತಿಯಿಂದ ಮೈಸೂರಿನ ಟಿ ನರಸೀಪುರದಲ್ಲಿ ಸರಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಮೂಲಕ, ಸಸ್ಯಗಳನ್ನು ವಿತರಿಸುವ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ, ರಕ್ತದಾನ, ನೇತ್ರದಾನ, ದೇಹದಾನ ಮುಂತಾದಳವುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಆಹಾರ ಅಧಿಕಾರಿ ಶ್ರೀಕಂಠಯ್ಯ, ಬ್ಲಡ್ ಡೊನೊರ್ಸ್ ಮಂಗಳೂರು ತಂಡದ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಅಡ್ಮಿನ್ ಗಳಾದ, ಇಮ್ತಿಯಾಝ್ ಬಜ್ಪೆ, ಕಲಂದರ್ ನೌಶಾದ್ ಕರ್ನಿರೆ, ಮುಸ್ತಾಫಾ ಕೆ ಸಿ ರೋಡ್, ಝಹೀರ್ ಶಾಂತಿನಗರ, ಆರಿಫ್ ಕರ್ನಿರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪಟ್ಟುಬುದ್ದಿ, ಪ್ರಭು, ಪುಟ್ಟಮ್ಮ, ಯಾರಗನಹಳ್ಳಿ ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ, ಹೊಸುರುಹುಂಡಿ ಶಾಲೆಯ ಮುಖ್ಯೋಪಾಧ್ಯಾಯ ರಾಜೇಶ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲಾಯಿತು ಮತ್ತು ಗ್ರಾಮದ 50 ಕ್ಕೂ ಅಧಿಕ ಫಲಾನುಭವಿಗಳಿಗೆ ಭೂಮಿಯ ಪಟ್ಟೆ ಕಡತವನ್ನು ವಿತರಿಸಲಾಯಿತು. ಗ್ರಾಮದಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸದವರಿಗೆ ಬ್ಯಾಂಕ್ ಅಕೌಂಟ್ ಮಾಡಿಸಿಕೊಡಲಾಯಿತು. ಅರಣ್ಯಾಧಿಕಾರಿ ಯಮುನಾ ಹಾಗೂ ಪರಮೇಶ್ವರಪ್ಪರವರಿಂದ ಅರಣ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ಹಾಗೂ ಗ್ರಾಮಸ್ಥರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸ್ಮಾಲ್ ಹೆಲ್ಪ್ ಡೆಸ್ಕ್ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು. ಬ್ಲಡ್ ಡೊನೊರ್ಸ್ ಮಂಗಳೂರು ವತಿಯಿಂದ ರಕ್ತದಾನ ಮತ್ತು ಅರೋಗ್ಯ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸ್ವಯಂಪ್ರೇರಿತರಾಗಿ ದೇಹದಾನ ಮಾಡಲು ಇಚ್ಛಿಸಿದ ಇಬ್ಬರು ವ್ಯಕ್ತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಮತ್ತು ಮಂಗಳೂರಿನಿಂದ ಮೈಸೂರಿನ ಟಿ ನರಸೀಪುರಕ್ಕೆ ಬಂದು ಕಾರ್ಯಕ್ರಮಕ್ಕೆ ಸಹಕರಿಸಿದ ಬ್ಲಡ್ ಡೊನೊರ್ಸ್ ಮಂಗಳೂರು ತಂಡವನ್ನು ಸ್ಮಾಲ್ ಹೆಲ್ಪ್ ಡೆಸ್ಕ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸ್ಮಾಲ್ ಹೆಲ್ಪ್ ಡೆಸ್ಕ್ ತಂಡದ ವೃತ್ತಿಯಲ್ಲಿ ಗ್ರಾಮಲೆಕ್ಕಿಗರಾಗಿರುವ ಶ್ರುತಿ, ಜಬೀನಾ, ನೂರುಲ್ಲಾ, ಪದ್ಮ ಮತ್ತ್ತು ಲಕ್ಷ್ಮಿ ಯಶಸ್ವಿಯಾಗಿ ಸಂಘಟಿಸಿದರು. ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು, ಜಬೀನಾ ಸ್ವಾಗತಿಸಿ ನೂರುಲ್ಲಾ ಧನ್ಯವಾದ ಸಮರ್ಪಿಸಿದರು, ಕೊನೆಯದಾಗಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು