ಜನಪರ ಕಾರ್ಯಕ್ರಮದ ಮೂಲಕವೇ ಜನಮಾನಸದಲ್ಲಿ ದೇವರಾಜ ಅರಸು ಉಳಿದರು : ಬಿ.ಎ.ಹರೀಶ್ ಶ್ಲಾಘನೆ

ಮಡಿಕೇರಿ,ಆ.18 :ಸಾಮಾಜಿಕ ಕ್ರಾಂತ್ರಿಯ ಹರಿಕಾರ ಡಿ.ದೇವರಾಜ ಅರಸು ಅವರ ಜನಪರ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿ.ದೇವರಾಜ ಅರಸುರವರ 102ನೇ ಜನ್ಮ ದಿನಾಚರಣೆಯ ಅಂಗವಾಗಿ ಡಿ.ದೇವರಾಜ ಅರಸು ಅವರ ಜೀವನ ಸಾಧನೆ ಬಗ್ಗೆ ನಗರದ ದೇವರಾಜ ಅರಸು ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಪರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ರಾಜ್ಯಾಧಿಕಾರ ನಡೆಸಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಶ್ರಮಿಸಿದ ಡಿ.ದೇವರಾಜ ಅರಸು ಅವರು ವಿಶಿಷ್ಟ ಹಾಗೂ ವಿಭಿನ್ನ ಮುಖ್ಯಮಂತ್ರಿ ಎನಿಸಿಕೊಂಡರು ಎಂದು ಜಿ.ಪಂ.ಅಧ್ಯಕ್ಷರು ನುಡಿದರು.
ವಿದ್ಯಾರ್ಥಿ ನಿಲಯಗಳ ಆರಂಭ, ಶಿಷ್ಯ ವೇತನ, ಹಾವನೂರು ವರದಿ ಜಾರಿ, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ, ಜೀತಪದ್ಧತಿ ರದ್ದು, ಮಲ ಹೊರುವ ಪದ್ಧತಿ ನಿಷೇಧ ಹೀಗೆ ಹಲವು ಕ್ರಾಂತಿಕಾರಕ ಕಾರ್ಯಕ್ರಮ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯ, ಮುತ್ಸದ್ಧಿ ಮುಖ್ಯಮಂತ್ರಿ ಎನಿಸಿಕೊಂಡರು ಎಂದು ಬಿ.ಎ.ಹರೀಶ್ ಹೇಳಿದರು.
ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಅವರು ಮಾತನಾಡಿ ಡಿ.ದೇವರಾಜ ಅರಸು ಅವರು ಕೈಗೊಂಡ ಸುಧಾರಣಾ ಕಾರ್ಯಕ್ರಮಗಳು ಶಾಶ್ವತವಾದವು. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಡಿ.ದೇವರಾಜ ಅರಸು ಅವರ ಕಾರ್ಯಕ್ರಮಗಳಾಗಿದ್ದು, ಅವರ ಆಡಳಿತ ವೈಖರಿ, ಮುಂದಾಲೋಚನೆ ಸ್ಮರಿಸುವಂತದ್ದು ಎಂದು ಅವರು ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಕೆ.ಸಿ.ದಯಾನಂದ ಅವರು ಮಾತನಾಡಿ ಡಿ.ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು ಎಂದು ಅವರು ಹೇಳಿದರು.
80ರ ದಶಕದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ 20 ಅಂಶಗಳನ್ನು ಜಾರಿಗೊಳಿಸಿದರು. ಈ 20 ಅಂಶಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಅವರು ಬಣ್ಣಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ, ಪ್ರಕಾಶ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕರಾದ ಪುಟ್ಟರಾಜು ಇತರರು ಇದ್ದರು. ಲಿಖಿತ ಪ್ರಾರ್ಥಿಸಿದರು.







