ದೇವತೆಗೆ ಅವಹೇಳನಕಾರಿ ಪೋಸ್ಟ್: ಇನ್ನೊಬ್ಬನ ಬಂಧನ
ಮಂಗಳೂರು, ಆ. 18: ಫೇಸ್ಬುಕ್ನಲ್ಲಿ ಜಬ್ಬಾರ್ ಬಿಸಿರೋಡ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಹಿಂದೂ ಧರ್ಮದ ದೇವತೆಗೆ ಅವಹೇಳನಕಾರಿ ಪದ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವಹೇಳಕಾರಿ ಪೋಸ್ಟ್ ಬಗ್ಗೆ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕಲಂದರ್ ಶಾಪಿ ಬಿ.ಎಂ. ಮತ್ತು ದರ್ವೆಜ್ ಮೊಹಿದಿನ್ ಎಂದು ತಿಳಿದು ಬಂದಿತ್ತು. ಸದ್ರಿಯವರು ವಿದೇಶದಲ್ಲಿದ್ದು ಎಲ್ ಒಸಿ ಯನ್ನು ಹೊರಡಿಸಲಾಗಿತ್ತು. ಅದರಂತೆ 2016ರ ಅ.9ರಂದು ಆರೋಪಿ ಕಲಂದರ್ ಶಾಫಿ ಎಂಬಾತನು ವಿದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವೇಳೆ ಉತ್ತರ ಪೊಲೀಸ್ ಠಾಣಾ ನಿರೀಕ್ಷಕ ಶಾಂತರಾಮ ಮತ್ತು ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಪ್ರಕರಣದ ಇನ್ನೊಬ್ಬ ಆರೋಪಿ ದರ್ವೆಝ್ ಮೊಹಿದಿನ್ ( 27) ವಿದೇಶದಿಂದ ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮುಂಬೈ ಇಮಿಗ್ರೇಶನ್ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಉತ್ತರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಎಎಸ್ಐ ಶೋಭಾ ಮತ್ತು ಎಚ್ ಸಿ ಜಾರ್ಜ್ ವೆಲೆಸ್ಟಿನ್ ಡಿಸೋಜಾ ಮತ್ತು ಪಿಸಿ ಗೋವರ್ದನ್ ಅವರು ಮುಂಬೈಗೆ ತೆರಳಿ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರ ಆದೇಶದಂತೆ ಉಪ ಪೊಲೀಸ್ ಆಯುಕ್ತ ಹನುಮಂತರಾಯ, ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶಾಂತರಾಮ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.